ಸೀತೆಯ ಭಾವಕ್ಕೆ ರಾಕ್ಷಸಿಯ ಉತ್ತರ ಇಲ್ಲಿ ನಾವು ತಿಳಿಯಬೇಕಾದ್ದು ಏನು?
ಈಗ ಯೋಚಿಸಿ ರಾಮ ಸೀತೆಯರಲ್ಲಿ ಎಷ್ಟೊಂದು ಅನ್ಯೋನ್ಯತೆಯಿತ್ತು ಎಂದು. ಅದರೊಂದಿಗೆ ನಾವು ಗಮನಿಸಲೇ ಬೇಕಾದ ಇನ್ನೊಂದು ಅಂಶ ಇದೆ. ಅದೇನೆಂದರೆ ಸೀತೆ ರಾಮನ ಕುರಿತಾಗಿ ಹೇಳುತ್ತಾ ರಾಮ ಸ್ವರೂಪ ಭಾವವನ್ನು ಮತ್ತು ಅವನ ಕುರಿತಾಗಿ ಗೌರವ ಭಾವವನ್ನು ಒಬ್ಬಳು ರಾಕ್ಷಸಿಯಲ್ಲಿ ಮೂಡಿಸುತ್ತಾಳೆ ಎಂದಾದರೆ ಸೀತೆಯ ಸಾತ್ವಿಕತೆ ಎಷ್ಟಿರಬೇಡ.

ರಾಮಾಯಣದ ಒಂದು ಸಂದರ್ಭವಿದು. ರಾವಣ ಸೀತೆಯನ್ನು ಅಪಹರಿಸಿ ಅಶೋಕ ವನದಲ್ಲಿ ಇರಿಸಿರುತ್ತಾನೆ. ಅವಳ ಸಹಕಾರಕ್ಕಾಗಿ ಹಲವು ಜನ ದಾಸಿಯರನ್ನು ನಿಯಮಿಸಿರುತ್ತಾನೆ. ಅದರಲ್ಲಿ ಕೆಲವರು ಸೀತೆಯ ಗುಣಕ್ಕೆ ಮಾರು ಹೋಗಿ ಅವಳೊಂದಿಗೆ ಆಪ್ತರಾಗಿ ವ್ಯವಹರಿಸತೊಡಗುತ್ತಾರೆ. ಕೆಲವು ಸಲ ಶತ್ರುಗಳ ಕಡೆಯಲ್ಲೂ ಗುಣವನ್ನು ಮೆಚ್ಚಿ ಆಪ್ತರಾಗುವುದಕ್ಕೆ ಇದು ಸೂಕ್ತ ಉದಾಹರಣೆ. ಸೀತೆ ಅಶೋಕ ವನದಲ್ಲಿ ಶ್ರೀರಾಮನ ಕುರಿತು ಸದಾ ಯೋಚಿಸುತ್ತಳೇ ಇರುತ್ತಿದ್ದಳು. ಸದಾ ಅವನ ಧ್ಯಾನದಲ್ಲೇ ಸಮಯ ಕಳೆಯುತ್ತಿದ್ದಳು ಸೀತೆ. ಕೆಲವು ಕಾಲದ ನಂತರ ಸೀತೆ ಹೇಳುತ್ತಾಳೆ ತನ್ನ ಬಳಿಯಿರುವ ರಾಕ್ಷಸಿಯ ಹತ್ತಿರ ಸದಾ ಶ್ರೀರಾಮನ ಬಗ್ಗೆ ಯೋಚಿಸುತ್ತಾ ನಾನು ರಾಮನೇ ಆಗಿರುವೆ. ಇನ್ನೆಲ್ಲಿಯ ರಾಮನ ಸಾಂಗತ್ಯ? ಇನ್ನೆಲ್ಲಿಯ ದಾಂಪತ್ಯ ಎಂಬುದಾಗಿ. ಅದಕ್ಕೆ ಪ್ರತಿಯಾಗಿ ತಮೋಗುಣ ಪ್ರಧಾನವಾದ ವ್ಯಕ್ತಿತ್ವವುಳ್ಳ ಆ ರಾಕ್ಷಸಿಯು ಹೇಳುತ್ತಾಳೆ ಸೀತಾ ನಾನು ಶ್ರೀರಾಮನನ್ನು ಕಂಡಿಲ್ಲ. ಆದರೆ ನೀನು ಹೇಳುವುದನ್ನು ಕೇಳಿ ನನ್ನ ಮನದಲ್ಲಿ ಒಂದು ಚಿತ್ರಣ ರಾಮನ ಕುರಿತಾಗಿ ಮೂಡಿದೆ. ಅದರಂತೆ ಅವನಿದ್ದರೆ ಅವನ ಪತ್ನಿಯಾಗಿರುವುದು ನಿನ್ನ ಭಾಗ್ಯವೇ ಸರಿ. ಹಾಗೆಯೇ ಅಂತಹ ಉತ್ತಮ ಗುಣವುಳ್ಳ ಅವನು ನೀನು ಹೇಗೆ ಅವನ ಕುರಿತಾಗಿ ಚಿಂತಿಸಿ ರಾಮನಂತೆ ಆಗಿರುವೆಯೋ…. ಅದೇ ರೀತಿ ಅವನೂ ನಿನ್ನ ಕುರಿತಾಗಿ ಚಿಂತಿಸಿ ಸೀತೆಯಾಗಿರುವನಲ್ಲವೇ ಎಂದು.
ಈಗ ಯೋಚಿಸಿ ರಾಮ ಸೀತೆಯರಲ್ಲಿ ಎಷ್ಟೊಂದು ಅನ್ಯೋನ್ಯತೆಯಿತ್ತು ಎಂದು. ಅದರೊಂದಿಗೆ ನಾವು ಗಮನಿಸಲೇ ಬೇಕಾದ ಇನ್ನೊಂದು ಅಂಶ ಇದೆ. ಅದೇನೆಂದರೆ ಸೀತೆ ರಾಮನ ಕುರಿತಾಗಿ ಹೇಳುತ್ತಾ ರಾಮ ಸ್ವರೂಪ ಭಾವವನ್ನು ಮತ್ತು ಅವನ ಕುರಿತಾಗಿ ಗೌರವ ಭಾವವನ್ನು ಒಬ್ಬಳು ರಾಕ್ಷಸಿಯಲ್ಲಿ ಮೂಡಿಸುತ್ತಾಳೆ ಎಂದಾದರೆ ಸೀತೆಯ ಸಾತ್ವಿಕತೆ ಎಷ್ಟಿರಬೇಡ.. ಹಾಗೆಯೇ ಒಬ್ಬಳು ತಮೋಗುಣವುಳ್ಳ ಮತ್ತು ಹುಟ್ಟಿನಿಂದಲೇ ದುಷ್ಟ ಕೆಲಸ ಮಾಡುತ್ತಾ ಅದೇ ಕೆಟ್ಟ ವಾತಾವರಣದಲ್ಲಿ ಬೆಳೆದ ರಕ್ಕಸಿಯೋರ್ವಳು ಸೀತೆಯ ಸಾಂಗತ್ಯದಿಂದ ಅತ್ಯಂತ ಶ್ರೇಷ್ಠವಾದ ರಾಮನಂತೆ ನೀನಾದರೆ ನಿನ್ನಂತೆ ರಾಮನಾಗುವ ಎಂಬ ಪರಿಶುದ್ಧ ಮಾತನ್ನು ಆಡುತ್ತಾಳೆ ಎಂದಾದರೆ ಸೀತೆಯ ವ್ಯಕ್ತಿತ್ವ ಎಷ್ಟು ಪುಣ್ಯಪ್ರದವಾಗಿರಬೇಡ ಅಲ್ಲವೇ?
ಇದನ್ನೂ ಓದಿ: ಗೃಹ ನಿರ್ಮಾಣದ ಮೊದಲು ಪಾಲಿಸಲೇಬೇಕಾದ ಏಳು ಸೂತ್ರಗಳು ಇಲ್ಲಿದೆ
ಏಕೆಂದರೆ ಸೀತೆಗೆ ರಾವಣನ ಕುರಿತಾಗಿ ಅನುರಾಗ ಮೂಡಿಸಲು ಸಾವಿರಾರು ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು ಮತ್ತು ಭಯಪಡಿಸಲೂ ಪ್ರಯತ್ನ ನಡೆದಿತ್ತು. ಅಲ್ಲದೇ ರಾಮನು ಇಲ್ಲಿಗೆ ಎಂದೂ ಬರಲಾರ ಎಂದು ವಿಧವಿಧವಾಗಿ ಹೇಳಲಾಗಿದ್ದರೂ ಸೀತೆಯು ತನ್ನ ಭಾವನೆಯಲ್ಲಿ ಒಂದಿನಿತೂ ಬದಲಾಗದೆ ಶ್ರೀರಾಮನನ್ನೇ ನೆನೆಯುತ್ತಾ ಕಾಯುತ್ತಾ ಇದ್ದಳು ಮತ್ತು ತನ್ನ ನಿಶ್ಚಲತೆಯಿಂದ ತನ್ನ ಸುತ್ತಲಿರುವವರ ಭಾವವನ್ನೇ ಬದಲಿಸಿದಾತೆ ಸೀತೆ. ನಮ್ಮ ಜೀವನದಲ್ಲೂ ಅದೆಷ್ಟೋ ಸಲ ನಮಗೇ ತಿಳಿಯದಂತೆ ನಾವು ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತೇವೆ. ಆದರೆ ನಾವು ಒಳ್ಳೆಯದಕ್ಕೆ ನಮ್ಮ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳುವುದು ಅತ್ಯಂತ ಕಡಿಮೆ ಮತ್ತು ಕೆಟ್ಟದ್ದರ ಪರಿಣಾಮ ನಮ್ಮ ಮೇಲೆ ಬೇಗ ಆಗಿ ನಾವು ನಮ್ಮತನವನ್ನು ಕಳೆದುಕೊಂಡು ನಿಸ್ತೇಜರಾಗಿ ಬಿಡುತ್ತೇವೆ.
ಹಾಗೆಯೇ ಅದೆಷ್ಟೋ ಸಲ ನಂಬಿಕೆ ಕಳೆದುಕೊಂಡು ಅಥವಾ ನಂಬಬೇಕಾದಲ್ಲಿ ಸಂಶಯಿಸಿ ಹಲವಾರು ಸಂದರ್ಭಗಳನ್ನು ವ್ಯರ್ಥಮಾಡಿಬಿಡುತ್ತೇವೆ. ಈ ಸೀತೆಯ ಘಟನೆಯಿಂದ ನಾವು ಕಲಿಯಬೇಕಾದ್ದು ತುಂಬಾ ಇದೆ. ಆದರೂ ಅದರಲ್ಲಿ ಮುಖ್ಯವಾದ ಒಂದು ಅಂಶವೆಂದರೆ ನಮ್ಮ ನಂಬಿಕೆ ಪ್ರಾಮಾಣಿಕವಾಗಿದ್ದರೆ ಶುದ್ಧವಾಗಿದ್ದರೆ ನಮ್ಮ ನಡೆ ವ್ಯವಹಾರ ವ್ಯಕ್ತಿತ್ವ ನಿಧಾನವಾಗಿ ನಮ್ಮ ಸುತ್ತಲಿರುವವರ ಮನಸ್ಸನ್ನು ಬದಲಿಸಿ ಒಳಿತಿನೆಡೆಗೆ ಕರೆತರುತ್ತದೆ. ಇಲ್ಲದಿದ್ದಲ್ಲಿ ಅಪನಂಬಿಕೆಯಿಂದ ಜೀವನ ಅರ್ಥವಿಲ್ಲದಂತಾಗುತ್ತದೆ. ಯೋಚಿಸಿ…
ಡಾ. ಗೌರಿ ಕೇಶವಕಿರಣ
ಧಾರ್ಮಿಕಚಿಂತಕರು
Published On - 12:05 pm, Fri, 7 April 23