Clapping: ಚಪ್ಪಾಳೆ ತಟ್ಟುವುದರ ಹಿಂದಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ
ಹಿಂದೂ ಸಂಸ್ಕೃತಿಯಲ್ಲಿ ಚಪ್ಪಾಳೆ ತಟ್ಟುವುದಕ್ಕೆ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ. ಇದು ಕೇವಲ ಸದ್ದು ಮಾಡುವ ಕ್ರಿಯೆಯಲ್ಲ. ಭಜನೆ, ದೇವರ ಆರಾಧನೆಗಳಲ್ಲಿ ಚಪ್ಪಾಳೆ ಏಕಾಗ್ರತೆ, ಧನಾತ್ಮಕ ಶಕ್ತಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಅಪಹಾಸ್ಯ, ವ್ಯಂಗ್ಯ ಅಥವಾ ಶೋಕದ ಸಮಯದಲ್ಲಿ ಚಪ್ಪಾಳೆ ತಟ್ಟುವುದನ್ನು ತಪ್ಪಿಸಬೇಕು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ನಾವು ಮಾಡುವ ಹಲವಾರು ಸನ್ನೆಗಳು, ಮುಖಭಾವಗಳು ನಮ್ಮ ಮೇಲೆ ಮತ್ತು ನಮ್ಮ ಸುತ್ತಮುತ್ತಲಿನವರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಚಪ್ಪಾಳೆ ತಟ್ಟುವುದೂ ಒಂದು ಪ್ರಮುಖ ಕ್ರಿಯೆ. ಇತಿಹಾಸ ಪೂರ್ವದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಚಪ್ಪಾಳೆಗೆ ಒಂದು ವಿಶೇಷ ಸ್ಥಾನವಿದೆ. ಹಿಂದೂ ಮತ್ತು ಸನಾತನ ಧರ್ಮದಲ್ಲಿ ಚಪ್ಪಾಳೆ ಕೇವಲ ಶಬ್ಧ ಉತ್ಪಾದಿಸುವ ಕ್ರಿಯೆಗಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಚಪ್ಪಾಳೆ ಹಲವು ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಸಾಮಾನ್ಯವಾಗಿ ಸಂತೋಷ, ಯಶಸ್ಸು, ವಿಜಯ ಮತ್ತು ಜಯವನ್ನು ಆಚರಿಸಲು ಬಳಸಲಾಗುತ್ತದೆ. ಪ್ರೋತ್ಸಾಹಿಸಲು, ಮೆಚ್ಚುಗೆ ಸೂಚಿಸಲು ಅಥವಾ ಮಕ್ಕಳನ್ನು ಒಳ್ಳೆಯ ಕಾರ್ಯಗಳಿಗೆ ಹುರಿದುಂಬಿಸಲು ಕೂಡ ಚಪ್ಪಾಳೆ ತಟ್ಟಲಾಗುತ್ತದೆ. ಇದು ಸಾಧನೆಯನ್ನು ಕೊಂಡಾಡಲು ಮತ್ತು ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಮೂಡಿಸಲು ಸಹಾಯಕವಾಗಿದೆ.
ಆಧ್ಯಾತ್ಮಿಕವಾಗಿ, ಭಜನೆಗಳು, ದೇವತಾರಾಧನೆಗಳು ಮತ್ತು ಸಂಕೀರ್ತನೆಗಳ ಸಮಯದಲ್ಲಿ ಚಪ್ಪಾಳೆ ತಟ್ಟುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. “ಶ್ರೀರಾಮ್ ಜೈರಾಮ್” ಎಂದು ಚಪ್ಪಾಳೆ ತಟ್ಟುವಾಗ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಇದು ಭಕ್ತಿಯನ್ನು ಜಾಗೃತಗೊಳಿಸಿ, ಮನಸ್ಸನ್ನು ತೃಪ್ತಿಪಡಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಚಪ್ಪಾಳೆ ಮೆಡಿಸಿನ್ಗಳ ಅವಶ್ಯಕತೆಯನ್ನೂ ದೂರ ಮಾಡಬಲ್ಲದು ಎಂದು ನಂಬಲಾಗಿದೆ. ವೈಜ್ಞಾನಿಕವಾಗಿ, ಚಪ್ಪಾಳೆ ತಟ್ಟುವುದರಿಂದ ದೇಹದ ರೋಗನಿರೋಧಕ ಶಕ್ತಿ ಕೂಡ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಆದಾಗ್ಯೂ, ಚಪ್ಪಾಳೆಯನ್ನು ತಟ್ಟುವ ಸಂದರ್ಭ ಮತ್ತು ಉದ್ದೇಶ ಮುಖ್ಯವಾಗಿದೆ. ಇದನ್ನು ಕೆಲವೊಮ್ಮೆ ಅಪಹಾಸ್ಯ, ವ್ಯಂಗ್ಯ, ಅವಮಾನ ಅಥವಾ ಅಣಕ ಮಾಡಲು ಬಳಸಲಾಗುತ್ತದೆ, ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ನಕಾರಾತ್ಮಕ ಘಟನೆಗಳ ಸಂದರ್ಭದಲ್ಲಿ, ಉದಾಹರಣೆಗೆ ಒಂದು ಪ್ರಾಣಿಗೆ ಹಿಂಸೆಯಾಗುತ್ತಿರುವಾಗ ಚಪ್ಪಾಳೆ ತಟ್ಟುವುದರಿಂದ ನಮ್ಮ ದೇಹಕ್ಕೆ ನಕಾರಾತ್ಮಕ ಶಕ್ತಿ ಸೇರುತ್ತದೆ. ಶೋಕದ ಸಮಯದಲ್ಲಿ ಅಥವಾ ಸಾವಿನ ಸಂದರ್ಭದಲ್ಲಿ ಭಜನೆ ಮಾಡುತ್ತಾ ಕುಣಿಯುವುದು ಅಥವಾ ಚಪ್ಪಾಳೆ ತಟ್ಟುವುದು ಶುಭವಲ್ಲ.
ಸರಿಯಾದ ಉದ್ದೇಶದಿಂದ, ಸಕಾರಾತ್ಮಕ ಭಾವನೆಯೊಂದಿಗೆ ಚಪ್ಪಾಳೆ ತಟ್ಟುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಆವರಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
