Shiva Parivar: ಶಿವನನ್ನ ಒಬ್ಬಂಟಿಯಾಗಿ ಪೂಜಿಸಲ್ಲ ಯಾಕೆ? ನಂದಿ, ಗಣೇಶ, ಪಾರ್ವತಿ ವಿಗ್ರಹ ಪ್ರತಿಷ್ಠಾಪಿಸುವುದೇಕೆ?
ಯಾವುದೇ ಶಿವ ದೇವಾಲಯಕ್ಕೆ ಭೇಟಿ ನೀಡಿದರೂ ಅಲ್ಲಿ ಮಹಾದೇವ ಎಂದಿಗೂ ಒಂಟಿಯಾಗಿಲ್ಲದಿರುವುದಿಲ್ಲ. ಶಿವಲಿಂಗದ ಸುತ್ತ ನಂದಿ, ಗಣೇಶ, ಪಾರ್ವತಿ ಸೇರಿದಂತೆ ಇಡೀ ಶಿವ ಪರಿವಾರದ ವಿಗ್ರಹಗಳು ಕಾಣಬಹುದು. ಇದರ ಹಿಂದೆ ಅತ್ಯಂತ ಆಳವಾದ ಧಾರ್ಮಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವ ಅಡಗಿದೆ. ಈ ವಿಗ್ರಹಗಳ ಉಪಸ್ಥಿತಿ ಮತ್ತು ಅವು ನೀಡುವ ಜೀವನದ ಸಂದೇಶಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಯಾವುದೇ ಶಿವ ದೇವಾಲಯಕ್ಕೆ ಹೋದರೂ ಅಲ್ಲಿ ಕೇವಲ ಶಿವಲಿಂಗ ಮಾತ್ರವಲ್ಲದೆ, ಅದರ ಸುತ್ತಲೂ ನಂದಿ, ಪಾರ್ವತಿ ದೇವಿ, ಗಣೇಶ, ಕಾರ್ತಿಕೇಯ ಹಾಗೂ ನಾಗದೇವರ ವಿಗ್ರಹಗಳು ಇರುತ್ತವೆ. ಅನೇಕರಿಗೆ ಇದು ಕೇವಲ ಒಂದು ಸಾಂಪ್ರದಾಯಿಕ ರಚನೆ ಎನಿಸಬಹುದು. ಆದರೆ, ಶಿವಲಿಂಗದ ಪಕ್ಕದಲ್ಲಿ ಇಡೀ ಶಿವ ಪರಿವಾರದ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರ ಹಿಂದೆ ಅತ್ಯಂತ ಆಳವಾದ ಧಾರ್ಮಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವ ಅಡಗಿದೆ. ಈ ವಿಗ್ರಹಗಳ ಉಪಸ್ಥಿತಿ ಮತ್ತು ಅವು ನೀಡುವ ಜೀವನದ ಸಂದೇಶಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಂದಿ ಮಹಾರಾಜ:
ಪ್ರತಿಯೊಂದು ಶಿವ ದೇವಸ್ಥಾನದಲ್ಲೂ ಶಿವಲಿಂಗಕ್ಕೆ ಮುಖಮಾಡಿ ಕುಳಿತಿರುವ ನಂದಿಯ ವಿಗ್ರಹವಿರುತ್ತದೆ. ನಂದಿಯು ಶಿವನ ವಾಹನ ಮಾತ್ರವಲ್ಲ, ಪರಶಿವನ ಪರಮ ಭಕ್ತ ಮತ್ತು ಗಣಗಳ ಅಧಿಪತಿ. ನಂದಿಯ ಕಣ್ಣುಗಳು ಯಾವಾಗಲೂ ಶಿವಲಿಂಗದ ಮೇಲೆಯೇ ನೆಟ್ಟಿರುತ್ತವೆ, ಇದು ಏಕಾಗ್ರತೆ ಮತ್ತು ಸದಾ ದೈವಿಕ ಚಿಂತನೆಯಲ್ಲಿರಬೇಕೆಂಬ ಸಂದೇಶವನ್ನು ನೀಡುತ್ತದೆ. ಭಕ್ತರು ತಮ್ಮ ಮನದ ಇಷ್ಟಾರ್ಥಗಳನ್ನು ನಂದಿಯ ಕಿವಿಯಲ್ಲಿ ಪಿಸುಗುಟ್ಟುವ ಸಂಪ್ರದಾಯವಿದೆ. ನಿರಂತರ ಧ್ಯಾನದಲ್ಲಿರುವ ಶಿವನಿಗೆ ನಂದಿಯು ಭಕ್ತರ ಪ್ರಾರ್ಥನೆಯನ್ನು ತಲುಪಿಸುತ್ತಾನೆ ಎಂಬುದು ನಂಬಿಕೆ.
ಗಣೇಶ:
ಶಿವ-ಪಾರ್ವತಿಯರ ಪ್ರಥಮ ಪುತ್ರನಾದ ಗಣೇಶನ ವಿಗ್ರಹವು ಶಿವಲಿಂಗದ ಬಳಿ ಇರುವುದು ಅನಿವಾರ್ಯವಾಗಿದೆ. ಸನಾತನ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಶುಭ ಕಾರ್ಯವು ಗಣೇಶನ ಆರಾಧನೆಯಿಲ್ಲದೆ ಆರಂಭವಾಗುವುದಿಲ್ಲ. ಗಣೇಶನು ಬುದ್ಧಿವಂತಿಕೆ, ಜ್ಞಾನ ಮತ್ತು ಯಶಸ್ಸಿನ ಪ್ರತೀಕವಾಗಿದ್ದಾನೆ. ಶಿವಲಿಂಗದ ಪೂಜೆಗೆ ಮುನ್ನ ವಿಘ್ನನಿವಾರಕ ಗಣೇಶನನ್ನು ಆರಾಧಿಸುವುದರಿಂದ ಭಕ್ತಿಯ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಪಾರ್ವತಿ ದೇವಿ:
ಶಿವನ ಪಕ್ಕದಲ್ಲಿ ಜಗನ್ಮಾತೆಯಾದ ಪಾರ್ವತಿ ದೇವಿಯ ವಿಗ್ರಹ ಅಥವಾ ಪೀಠದ ರೂಪದಲ್ಲಿ ಅವಳ ಸಾನ್ನಿಧ್ಯವಿರುತ್ತದೆ. ಶಿವ ಮತ್ತು ಶಕ್ತಿ ಪರಸ್ಪರ ಬೇರೆಯಲ್ಲ. ಶಿವನು ‘ಪ್ರಜ್ಞೆ’ ಆಗಿದ್ದರೆ, ಪಾರ್ವತಿಯು ‘ಶಕ್ತಿ’. ಶಕ್ತಿಯಿಲ್ಲದ ಶಿವನು ಶವಕ್ಕೆ ಸಮಾನ ಎನ್ನಲಾಗುತ್ತದೆ. ದೇವಸ್ಥಾನದಲ್ಲಿ ಇವರಿಬ್ಬರ ಉಪಸ್ಥಿತಿಯು ಪ್ರಕೃತಿ ಮತ್ತು ಪುರುಷನ ಜೋಡಣೆಯನ್ನು ಹಾಗೂ ಜೀವನದಲ್ಲಿ ಸ್ತ್ರೀ-ಪುರುಷ ಸಮಾನತೆಯ ಸಮತೋಲನವನ್ನು ತೋರ್ಪಡಿಸುತ್ತದೆ.
ಕಾರ್ತಿಕೇಯ ಮತ್ತು ನಾಗದೇವತೆ:
ಶಿವನ ದ್ವಿತೀಯ ಪುತ್ರ ಹಾಗೂ ದೇವತೆಗಳ ಸೇನಾಧಿಪತಿಯಾದ ಕಾರ್ತಿಕೇಯನ (ಸುಬ್ರಹ್ಮಣ್ಯ) ವಿಗ್ರಹವು ನಮಗೆ ಸಾಹಸ, ಧೈರ್ಯ ಮತ್ತು ನಾಯಕತ್ವದ ಗುಣಗಳನ್ನು ನೆನಪಿಸುತ್ತದೆ. ಶಿವನು ಸರ್ಪಭೂಷಣ. ಕಾಲ ಮತ್ತು ಮೃತ್ಯುವನ್ನು ಜಯಿಸಿದ ಶಿವನ ಕುತ್ತಿಗೆಯಲ್ಲಿರುವ ನಾಗದೇವತೆಯು ಪ್ರಕೃತಿಯ ರಕ್ಷಣೆ ಮತ್ತು ಕುಂಡಲಿನಿ ಶಕ್ತಿಯ ಜಾಗೃತಿಯನ್ನು ಸಂಕೇತಿಸುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




