Satyanarayan Puja: ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವುದೇಕೆ? ಇದರ ಮಹತ್ವವೇನು?

| Updated By: ಆಯೇಷಾ ಬಾನು

Updated on: Aug 18, 2021 | 7:51 AM

ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಒಮ್ಮೆ ಈ ಪೂಜೆಯನ್ನು ಮಾಡಬೇಕು. ಹಾಗೂ ಕೆಲವರು ದೇವರಲ್ಲಿ ಬೇಡಿಕೆ ಇಟ್ಟು ಅದು ಒಳ್ಳೆ ಫಲ ಕೊಟ್ಟಾಗಲು ಸತ್ಯನಾರಾಯಣ ಪೂಜೆಯನ್ನು ಮಾಡಿಸುತ್ತಾರೆ.

Satyanarayan Puja: ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವುದೇಕೆ? ಇದರ ಮಹತ್ವವೇನು?
ಸತ್ಯನಾರಾಯಣ ಪೂಜೆ
Follow us on

ದೇವರ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ. ಹಲವು ಆಚರಣೆಗಳ ಪೈಕಿ ಪ್ರಾರ್ಥನೆ, ಪೂಜೆ, ವ್ರತ ಕೂಡ ಒಂದು ಮಾರ್ಗ. ಕಷ್ಟ-ಸುಖ ಎಂತಹ ಸಮಯವಾದರೂ ಅದಕ್ಕೆ ದೇವರ ಕೃಪೆ ಬೇಕು. ಕೆಟ್ಟ ಸಮಯವಿದ್ದರೆ ಅದನ್ನು ದೂರ ಮಾಡುವಂತೆ. ಹಾಗೂ ಒಳ್ಳೆ ಕಾರ್ಯಕ್ಕೂ ಮುನ್ನ ಯಾವುದೇ ಅಡೆ-ತಡೆಗಳು ಬಾರದಿರಲು ಹಿಂದೂಗಳು ಹೆಚ್ಚಾಗಿ ನಡೆಸುವ ಪೂಜೆಯೆಂದರೆ ಸತ್ಯನಾರಾಯಣ ಸ್ವಾಮಿ ಪೂಜೆ(Satyanarayan Puja). ಇದನ್ನು ಇದೇ ವೇಳೆ ನಡೆಸಬೇಕು ಎಂಬ ಯಾವುದೇ ಷರತ್ತುಗಳಿಲ್ಲ. ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸುತ್ತಾರೆ. ಏಕಾದಶಿ ತಿಥಿ ಮತ್ತು ಪೂರ್ಣಿಮಾ ತಿಥಿ ದಿನವನ್ನು ಸತ್ಯನಾರಾಯಣ ದೇವರಿಗೆ ಪೂಜೆ ಸಲ್ಲಿಸಲು ಸೂಕ್ತವೆಂದು ಪರಿಗಣಿಸಲಾಗಿದೆ.

ಸತ್ಯನಾರಾಯಣ ಎನ್ನುವುದು ಶ್ರೀ ವಿಷ್ಣುವಿನ(Lord Vishnu) ಇನ್ನೊಂದು ಹೆಸರು. ಯಾವಾಗಲೂ ಸತ್ಯವನ್ನೇ ಸಂಕೇತಿಸುವ ನಾರಾಯಣ ಎಂದೂ ಸಹ ಹೇಳಲಾಗುತ್ತೆ. ಭಗವಂತನ ಈ ಸಾಕಾರವು ಸತ್ಯ ಮತ್ತು ಸತ್ಯವನ್ನು ಮಾತ್ರ ಪ್ರತಿನಿಧಿಸುತ್ತದೆ. ಆದ್ದರಿಂದ, ಸುಳ್ಳು, ವಂಚನೆ ಅಥವಾ ದ್ವೇಷವನ್ನು ಅಳವಡಿಸಿಕೊಳ್ಳುವ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಸತ್ಯನಾರಾಯಣ ಸ್ವಾಮಿ ಪೂಜೆ ವಿಧಾನ
ಜ್ಯೋತಿಷಿಗಳ ಪ್ರಕಾರ ಸತ್ಯನಾರಾಯಣ ಪೂಜೆಯ ದಿನಕ್ಕೂ ಮೊದಲು ಉಪವಾಸವನ್ನು ಮಾಡಬೇಕು. ಹಾಗೂ ಪೂಜೆಯ ದಿನದಂದು ಪೂಜಾ ಸ್ಥಳವನ್ನು ಹಸುವಿನ ಸಗಣಿಯ ಮೂಲಕ ಪವಿತ್ರಗೊಳಿಸಿಕೊಳ್ಳಬೇಕು. ಬಳಿಕ ಮೇಜಾನಿಟ್ಟು ಅದರ ಮೇಲೆ ವಿಷ್ಟುವಿನ ಫೋಟೋ ಅಥವಾ ಪ್ರತಿಮೆಯನ್ನಾಗಲಿ ಇಡಬೇಕು. ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಬೇಕು.

ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ, ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಅಥವಾ ವಿಷ್ಣುವನ್ನು ಪೂಜಿಸಿ. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ನೀಡಬೇಕು.

ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ದಕ್ಷಿಣೆ ಮತ್ತು ಬಟ್ಟೆಗಳನ್ನು ದಾನಮಾಡುವುದರೊಂದಿಗೆ ಆಹಾರ ಪದಾರ್ಥಗಳನ್ನು ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾಧ ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.

ವಿಷ್ಣು

ಸತ್ಯನಾರಾಯಣ ಪೂಜೆಯನ್ನು ಮಾಡುವ ಮಹತ್ವ
ಮೇಲೆ ಹೇಳಿದಂತೆ, ಯಾವುದೇ ವ್ಯಕ್ತಿಯು ಯಾವುದೇ ದಿನದಂದು ಸತ್ಯನಾರಾಯಣ ಪೂಜೆಯನ್ನು ಮಾಡಬಹುದು. ಈ ಪೂಜೆಯ ವೇಳೆ ಸಾಧ್ಯವಾದಷ್ಟು ಜನರನ್ನು ಆಹ್ವಾನಿಸಿ, ಸತ್ಯನಾರಾಯಣ ಕಥೆಯನ್ನು ಪಠಿಸುವುದು ಮತ್ತು ಭಗವಂತನಿಗೆ ನೈವೇದ್ಯವಿಟ್ಟು ಅದನ್ನು ಭಕ್ತರಿಗೆ ನೀಡುವ ಕಾಯಕವಾಗಿದೆ.

ಒಂದು ವ್ರತವನ್ನು ಇಟ್ಟುಕೊಂಡು ಭಕ್ತಿಯಿಂದ ಪೂಜೆಯನ್ನು ಮಾಡುವುದರಿಂದ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಿಕೆ ಇದೆ. ಹೀಗೆ ಮಾಡುವ ಮೂಲಕ, ಭಕ್ತರು ದೇವರ ಕರುಣೆಗೆ ಪಾತ್ರರಾಗುತ್ತಾರೆ. ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಒಮ್ಮೆ ಈ ಪೂಜೆಯನ್ನು ಮಾಡಬೇಕು. ಹಾಗೂ ಕೆಲವರು ದೇವರಲ್ಲಿ ಬೇಡಿಕೆ ಇಟ್ಟು ಅದು ಒಳ್ಳೆ ಫಲ ಕೊಟ್ಟಾಗಲು ಸತ್ಯನಾರಾಯಣ ಪೂಜೆಯನ್ನು ಮಾಡಿಸುತ್ತಾರೆ.

ಜಾತಿ, ಮತ, ವಯಸ್ಸು ಮತ್ತು ಲಿಂಗ ಭೇದವಿಲ್ಲದ ಯಾರಾದರೂ ತಮ್ಮ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಪೂಜೆಯನ್ನು ನಡೆಸಬಹುದು. ನಿಶ್ಚಿತಾರ್ಥ ಸಮಾರಂಭ ಅಥವಾ ಮದುವೆಗೂ ಮುನ್ನವೂ ಕಾರ್ಯ ಸಫಲವಾಗಿ ನಡೆಯಲಿ ಎಂದೂ ಸಹ ಈ ಪೂಜೆಯನ್ನು ಮಾಡುತ್ತಾರೆ.

ಸತ್ಯನಾರಾಯಣ ಪೂಜೆ

ಸತ್ಯನಾರಾಯಣ ಪೂಜೆ ಹಿಂದಿರುವ ಕಥೆ
ಒಮ್ಮೆ ನಾರದ ಮುನಿಗಳು ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ವಿಷ್ಣುವಿನಲ್ಲಿ ಕೇಳುತ್ತಾರೆ. ಆಗ ಮಹಾವಿಷ್ಣು, ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರಂತೆ. ಹೀಗಾಗಿ ಅಂದಿನಿಂದ ಇಂದಿನ ವರೆಗೂ ಸತ್ಯನಾರಾಯಣ ಪೂಜೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Shravana Masa 2021: ಶ್ರಾವಣ ಶನಿವಾರದಂದು ಶನಿ ದೇವರನ್ನು ಪೂಜಿಸಿದರೆ ದೋಷ ಪರಿಹಾರವಾಗುತ್ತೆ

Published On - 7:05 am, Wed, 18 August 21