Shravana Masa: ಶ್ರಾವಣ ಮಾಸದಲ್ಲಿ ಹೆಂಡತಿಗೆ ಹಸಿರು ಬಳೆ ಕೊಡಿಸಬೇಕು ಯಾಕೆ ಗೊತ್ತಾ? ಮಹತ್ವ ಮತ್ತು ಲಾಭ ಇಲ್ಲಿದೆ
ಶ್ರಾವಣ ಮಾಸವು ಸಮೀಪಿಸುತ್ತಿದೆ. ಶ್ರಾವಣ ಮಾಸದಲ್ಲಿ ಪತಿಯು ಪತ್ನಿಗೆ ಹಸಿರು ಬಣ್ಣದ ಬಳೆಗಳನ್ನು ಕೊಡಿಸುವುದರಿಂದ ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚುವುದಲ್ಲದೆ, ಸಂಪತ್ತು ಮತ್ತು ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಶುಕ್ರ ಗ್ರಹದ ಅನುಗ್ರಹ ಹಾಗೂ ಹಸಿರು ಬಳೆಗಳ ಮಹತ್ವದ ಸಂಪೂರ್ಣ ವಿವರವನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರಾವಣ ಮಾಸವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ಸಮಯವಾಗಿದೆ. ಈ ಮಾಸವನ್ನು ಸೌಭಾಗ್ಯದ ಸಂಕೇತವೆಂದೂ ಕರೆಯಲಾಗುತ್ತದೆ. ಶ್ರಾವಣದಲ್ಲಿ ಮಹಿಳೆಯರು ಮಹಾಲಕ್ಷ್ಮಿ ಹಾಗೂ ಗೌರಿ ಪೂಜೆ, ವರಲಕ್ಷ್ಮಿ ವ್ರತಗಳನ್ನು ಆಚರಿಸಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಈ ತಿಂಗಳಲ್ಲಿ ಮಹಿಳೆಯರು ಹಸಿರು ಬಟ್ಟೆ ಹಾಗೂ ಹಸಿರು ಬಳೆಗಳನ್ನು ಧರಿಸುವುದು ಅತ್ಯಂತ ಶುಭಪ್ರದ ಎಂಬ ಆಚರಣೆ ಅನಾದಿ ಕಾಲದಿಂದಲೂ ಬಂದಿದೆ.
ಆದರೆ, ಶ್ರಾವಣ ಮಾಸದಲ್ಲಿ ಪತಿಯು ತನ್ನ ಪತ್ನಿಗೆ ಹಸಿರು ಬಣ್ಣದ ಬಳೆಗಳನ್ನು ಕೊಡುಗೆಯಾಗಿ ಕೊಡಿಸುವುದು ಅತ್ಯಂತ ಶ್ರೇಷ್ಠ ಹಾಗೂ ವಿಶೇಷ ಫಲ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ದಂಪತಿಗಳ ನಡುವಿನ ಪ್ರೀತಿ-ವಾತ್ಸಲ್ಯ ಹೆಚ್ಚುವುದಲ್ಲದೆ, ಜಾತಕದಲ್ಲಿ ಶುಕ್ರ ಗ್ರಹವು ಬಲಗೊಂಡು ಸಂಪತ್ತು ದ್ವಿಗುಣಗೊಳ್ಳುತ್ತದೆ. ಇದರ ಪೂರ್ಣ ಮಹತ್ವವನ್ನು ವಿವರವಾಗಿ ತಿಳಿಯೋಣ.
ಶುಕ್ರ ಗ್ರಹದ ಬಲವರ್ಧನೆ ಮತ್ತು ಧನ ಲಾಭ:
ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವನ್ನು ದಾಂಪತ್ಯ ಸುಖ, ಆಕರ್ಷಣೆ ಮತ್ತು ಸಂಪತ್ತಿನ ಕಾರಕ ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ರವಾರದಂದು ಪತಿ-ಪತ್ನಿ ಒಟ್ಟಾಗಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ/ಗೌರಿ ದೇವಿಯ ದರ್ಶನ ಪಡೆದ ನಂತರ, ಪತಿಯು ತನ್ನ ಕೈಯಾರೆ ಪತ್ನಿಗೆ ಹಸಿರು ಬಳೆಗಳನ್ನು ಕೊಡಿಸಿ ಧರಿಸಿದರೆ ಪತ್ನಿಗೆ ಅದೃಷ್ಟ ಒಲಿಯುತ್ತದೆ. ಇದರಿಂದ ಆಕೆಯ ಜಾತಕದಲ್ಲಿ ಶುಕ್ರ ಗ್ರಹವು ಬಲಗೊಂಡು, ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಅಭಿವೃದ್ಧಿ ಹಾಗೂ ಲಕ್ಷ್ಮಿ ಕೃಪೆ ಉಂಟಾಗುತ್ತದೆ.
ದಾಂಪತ್ಯ ಜೀವನದಲ್ಲಿ ನೆಮ್ಮದಿ ಮತ್ತು ಪತಿಯ ಆಯುಷ್ಯ ವೃದ್ಧಿ:
ಶ್ರಾವಣ ಮಾಸದಲ್ಲಿ ಹಸಿರು ಬಳೆಗಳನ್ನು ಧರಿಸುವುದರಿಂದ ಪತಿಯ ಆಯುಷ್ಯ ಮತ್ತು ಆರೋಗ್ಯ ಹೆಚ್ಚಾಗುತ್ತದೆ ಎಂಬ ದೃಢವಾದ ನಂಬಿಕೆಯಿದೆ. ಪತಿ ತನ್ನ ಪ್ರೀತಿಯ ಸಂಕೇತವಾಗಿ ತಂದುಕೊಡುವ ಈ ಬಳೆಗಳನ್ನು ಧರಿಸುವುದರಿಂದ ದಂಪತಿಗಳ ನಡುವೆ ಇರುವ ಮನಸ್ತಾಪಗಳು ದೂರವಾಗಿ, ದಾಂಪತ್ಯ ಜೀವನವು ಯಾವುದೇ ಸಮಸ್ಯೆಗಳಿಲ್ಲದೆ ಸುಖ-ಸಮೃದ್ಧಿಯಿಂದ ಕೂಡಿರುತ್ತದೆ.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ಸಂತಾನ ಭಾಗ್ಯ ಮತ್ತು ಆರೋಗ್ಯ ವೃದ್ಧಿ:
ಸನಾತನ ಧರ್ಮದಲ್ಲಿ ಹಸಿರು ಬಣ್ಣವನ್ನು ಪ್ರಕೃತಿ, ವೃದ್ಧಿ ಮತ್ತು ಫಲವತ್ತತೆಯ (Fertility) ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಂತಾನ ನಿರೀಕ್ಷೆಯಲ್ಲಿರುವವರು ಅಥವಾ ಗರ್ಭಿಣಿಯರು ಶ್ರಾವಣ ಮಾಸದಲ್ಲಿ ಹಸಿರು ಬಳೆಗಳನ್ನು ಧರಿಸುವುದು ಅತ್ಯಂತ ಒಳಿತೆಂದು ವಿದ್ವಾಂಸರು ಹೇಳುತ್ತಾರೆ. ಗೌರಿ ದೇವಿಯ ವಿಶೇಷ ಅನುಗ್ರಹದಿಂದ ಗರ್ಭಧಾರಣೆಯ ಅವಕಾಶಗಳು ಹೆಚ್ಚಾಗುತ್ತವೆ ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯಕ್ಕೂ ಇದು ಧನಾತ್ಮಕ ಶಕ್ತಿಯನ್ನು ನೀಡುತ್ತದೆ.
ಗೌರಿ ದೇವಿಯ ವಿಶೇಷ ಆಶೀರ್ವಾದ:
ಪತಿ ಪ್ರೀತಿಯಿಂದ ತಂದುಕೊಡುವ ಹಸಿರು ಬಳೆಗಳನ್ನು ಧರಿಸಿ ಧಾರ್ಮಿಕ ಪೂಜೆಗಳನ್ನು ನೆರವೇರಿಸುವುದರಿಂದ ಸಾಕ್ಷಾತ್ ಗೌರಿಯ ಪರಿಪೂರ್ಣ ಆಶೀರ್ವಾದ ಕುಟುಂಬಕ್ಕೆ ಸಿಗುತ್ತದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಗಂಡ ಮತ್ತು ಹೆಂಡತಿಯ ನಡುವಿನ ಆತ್ಮೀಕ ಸಂಬಂಧವನ್ನು ಗಟ್ಟಿಗೊಳಿಸುವ ಸುಂದರ ಸಂಪ್ರದಾಯವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




