Tanah Lot Temple Bali: ಬಾಲಿಗೆ ಹೋದರೆ ನೀವು ಭೇಟಿ ನೀಡಲೇಬೇಕಾದ ಅದ್ಭುತ ದೇವಾಲಯವಿದು
ಬಾಲಿಯಲ್ಲಿರುವ ತನಾಹ್ ಲಾಟ್ ದೇವಸ್ಥಾನವು ಸಾಗರದ ನಡುವೆ ಒಂದು ಬಂಡೆಯ ಮೇಲೆ ನಿರ್ಮಿತವಾದ ಅದ್ಭುತವಾದ ದೇವಾಲಯ. ಇದು ಸಮುದ್ರದ ರಕ್ಷಕ ದೇವತೆಗೆ ಸಮರ್ಪಿತವಾಗಿದ್ದು, ಅಲೆಗಳು ದೇವಾಲಯವನ್ನು ಆವರಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ದೇವಾಲಯದ ಕೆಳಗೆ ಸಿಹಿನೀರಿನ ಬುಗ್ಗೆಯೂ ಇದೆ, ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪ್ರಾಚೀನ ಮತ್ತು ಅಮೂಲ್ಯವಾದ ಸಂಪತ್ತನ್ನು ಕಾಪಾಡುವ ಸರ್ಪಗಳಿವೆ ಎಂದು ನಂಬಲಾಗಿದೆ. ಇದು ಬಾಲಿಯ ಏಳು ಸಮುದ್ರ ದೇವಾಲಯಗಳಲ್ಲಿ ಒಂದಾಗಿದೆ.

ಬಾಲಿಯಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ತನಾಹ್ ಲಾಟ್ ದೇವಾಲಯವೂ ಒಂದು. ಹಿಂದೂ ಮಹಾಸಾಗರದ ಭವ್ಯವಾದ ಬಂಡೆಯ ಮೇಲೆ ನೆಲೆಗೊಂಡಿರುವ ಈ ದೇವಾಲಯವು ತನ್ನ ಅದ್ಭುತ ವಾಸ್ತುಶಿಲ್ಪದಿಂದಲೇ ಖ್ಯಾತಿಯನ್ನು ಪಡೆದುಕೊಂಡಿದೆ. ಸ್ಥಳೀಯ ಹಿಂದೂಗಳು ಈ ದೇವಾಲಯವನ್ನು ಸಮುದ್ರದ ರಕ್ಷಕ ದೇವತೆಗೆ ಸಮರ್ಪಿಸಲಾಗಿದೆ ಎಂದು ನಂಬುತ್ತಾರೆ.
ಈ ಹಿಂದೂ ದೇವಾಲಯವು ಸಮುದ್ರ ಮತ್ತು ಭೂಮಿಯ ಸಂಗಮದಿಂದ ರೂಪುಗೊಂಡಿದೆ ಎಂದು ನಂಬಲಾಗಿದೆ. ಈ ದೇವಾಲಯವು ಸಾಗರದಿಂದ ಆವೃತವಾಗಿದ್ದು, ಇದರಿಂದಾಗಿ ದೊಡ್ಡ ಅಲೆಗಳು ಏಳುತ್ತವೆ. ಒಮ್ಮೆ ಅಲೆ ಬಂದರೆ, ದೇವಾಲಯದ ಎಲ್ಲಾ ಮೆಟ್ಟಿಲುಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ಅಲೆ ಹಾದುಹೋದ ನಂತರ, ನೀವು ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳನ್ನು ನೋಡುತ್ತೀರಿ. ಆ ಸಮಯದಲ್ಲಿ ನೀವು ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ. ಇದು ಕರಾವಳಿಯಿಂದ ಕೇವಲ 20 ಮೀಟರ್ (65.6 ಅಡಿ) ದೂರದಲ್ಲಿರುವ 3 ಎಕರೆ ಬಂಡೆಯ ರಚನೆಯ ಮೇಲೆ ನಿರ್ಮಿಸಲ್ಪಟ್ಟಿದೆ.
ತನಾಹ್ ಲಾಟ್ ದೇವಾಲಯದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಅದು ಉಪ್ಪು ನೀರಿನಿಂದ ಆವೃತವಾಗಿದೆ. ಆದಾಗ್ಯೂ, ದೇವಾಲಯದ ಕೆಳಗೆ ಒಂದು ಗುಹೆ ಮತ್ತು ಸಿಹಿ ನೀರಿನ ಬುಗ್ಗೆ ಇದೆ. ಈ ನೀರು ಆತ್ಮಗಳನ್ನು ಶುದ್ಧೀಕರಿಸುವ ಮತ್ತು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಈ ಪವಿತ್ರ ಬುಗ್ಗೆಯನ್ನು ‘ಬೇಜಿ ಕಲೇರ್’ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಮುಖ್ಯ ದೇವಾಲಯವನ್ನು ಪ್ರವೇಶಿಸುವ ಮೊದಲು ಈ ನೀರಿನಿಂದ ಮುಖವನ್ನು ತೊಳೆದು ಒಳಗೆ ಹೋಗುತ್ತಾರೆ.
ಇದನ್ನೂ ಓದಿ: ತಿರುಪತಿಯ ಅರ್ಚಕರಿಗೆ ಸಿಗುವ ಸಂಬಳ ಎಷ್ಟು? ತಿಳಿದರೆ ಶಾಕ್ ಆಗುವುದಂತೂ ಖಂಡಿತಾ!
ಈ ಇಡೀ ದೇವಾಲಯವು ಒಂದೇ ಬಂಡೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಒಂದು ದೊಡ್ಡ ಬಂಡೆಯನ್ನು ದೇವಾಲಯವಾಗಿ ಕೆತ್ತಲಾಗಿದೆ. ತನಾಹ್ ಲಾಟ್ ದೇವಾಲಯದ ಸುತ್ತಲೂ ಎಂಟು ದೇವಾಲಯಗಳಿವೆ. ಈ ದೇವಾಲಯವು ಪ್ರಾಚೀನ ಮತ್ತು ಅಮೂಲ್ಯವಾದ ಸಂಪತ್ತನ್ನು ಹೊಂದಿದೆ ಮತ್ತು ಆ ನಿಧಿಯನ್ನು ಕಾಯಲು ಸರ್ಪಗಾವಲಿದೆ ನಂಬಲಾಗಿದೆ. ಇಲ್ಲಿನ ವಸ್ತುಗಳನ್ನು ಯಾರಾದರೂ ಕದಿಯಲು ಪ್ರಯತ್ನಿಸಿದರೆ, ಕಾಣದ ವಿಷಪೂರಿತ ಹಾವುಗಳು ಕಚ್ಚಿ ಕೊಲ್ಲುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಇದು ಬಾಲಿಯಲ್ಲಿರುವ ಸಮುದ್ರ ದೇವರುಗಳಿಗೆ ಮೀಸಲಾಗಿರುವ ಏಳು ಸಮುದ್ರ ದೇವಾಲಯಗಳಲ್ಲಿ ಒಂದಾಗಿದೆ. ಇವುಗಳನ್ನು ಬಾಲಿ ದ್ವೀಪದ ಕರಾವಳಿಯ ಸುತ್ತಲೂ ನಿರ್ಮಿಸಲಾಗಿದೆ. ಇದು ಬಾಲಿಯನ್ನು ದುಷ್ಟ ಸಮುದ್ರ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ