ರಸ್ತೆ ಮಧ್ಯೆ ಗೋಪುರ ನಿರ್ಮಿಸಿ ಓಡಾಟಕ್ಕೆ ತಡೆ: ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ನಡೆಗೆ ಬೇಸರ, ರಾಜ್ಯಪಾಲರಿಗೆ ಪತ್ರ
ರಸ್ತೆ ಮಧ್ಯೆ ಗೋಪುರ ನಿರ್ಮಿಸಿ ಗ್ರಾಮಸ್ಥರ ಓಡಾಟಕ್ಕೆ ತೊಂದರೆಯುಂಟು ಮಾಡಿರುವ ಆರೋಪ ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದೆ. ಈ ವಿಚಾರವಾಗಿ ಗ್ರಾಮಸ್ಥರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಗೋಪುರವನ್ನು ಉದ್ಘಾಟನೆ ಮಾಡದಂತೆ ಮನವಿ ಮಾಡಿದ್ದಾರೆ. ಸದ್ಯ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು, ಮೇ 08: ಕಾಫಿನಾಡಿನ ಪ್ರಸಿದ್ಧ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ (Hornadu Annapoorneshwari Temple) ಆಡಳಿತ ಮಂಡಳಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ರಸ್ತೆ ಮಧ್ಯೆ ಗೋಪುರ ಮತ್ತು ದೇವಾಲಯದ ಧರ್ಮಕರ್ತರಾದ ದಿ. ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿ ಅವರ ಕಂಚಿನ ಪುತ್ಥಳಿ ನಿರ್ಮಿಸಿ ಗ್ರಾಮಸ್ಥರ ಓಡಾಟಕ್ಕೆ ತಡೆ ನೀಡಿರುವ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಈ ಗೋಪುರದ ಉದ್ಘಾಟನೆ ಮಾಡದಂತೆ ಗ್ರಾಮಸ್ಥರು ರಾಜ್ಯಪಾಲರಿಗೆ (Governor) ಪತ್ರ ಬರೆದಿದ್ದಾರೆ.
ರಸ್ತೆ ಮಧ್ಯೆ ಗೋಪುರ: ಉದ್ಘಾಟನೆ ಮಾಡದಂತೆ ರಾಜ್ಯಪಾಲರಿಗೆ ಪತ್ರ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ರಸ್ತೆ ಮಧ್ಯೆ ನೂತನವಾಗಿ ನಿರ್ಮಾಣವಾಗಿರುವ ಗೋಪುರದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ದಿ. ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿಯ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಆದರೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತೊಂದರೆಯಾಗುವ ರೀತಿ ರಸ್ತೆ ಮಧ್ಯೆ ಗೋಪುರ ಮತ್ತು ಪುತ್ಥಳಿ ನಿರ್ಮಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಗ್ರಾಮಸ್ತರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದು, ಇಂದು ಗೋಪುರ ಮತ್ತು ಕಂಚಿನ ಪುತ್ಥಳಿಯನ್ನು ಉದ್ಘಾಟನೆ ಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ರೈಲ್ವೆ ಗೇಟ್ ಬೋರ್ಡ್ನಲ್ಲಿ ಕನ್ನಡವಿಲ್ಲದ್ದಕ್ಕೆ ಮಸಿ ಬಳಿದ ಪ್ರತಿಭಟನಾಕಾರರು, ವಿಡಿಯೋ ವೈರಲ್
ರಸ್ತೆ ಜಾಗಕ್ಕೆ ಸಂಬಂಧಿಸಿದಂತೆ ಇದು ನಮ್ಮ ಜಾಗ ಎಂದು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಹೇಳುತ್ತಿದ್ದರೆ, ದಾಖಲೆಗಳ ಪ್ರಕಾರ ಸರ್ಕಾರಿ ರಸ್ತೆ ಎಂದಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುವ ಗ್ರಾಮಸ್ಥರು, ನಾವು ಓಡಾಟ ಮಾಡುವುದಾರೂ ಹೇಗೆ ಎಂದಿದ್ದಾರೆ.
ಇನ್ನೂ ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿರುವ ಅನ್ನಪೂರ್ಣೇಶ್ವರಿ ದೇವಾಲಯ ಆಡಳಿತ ಮಂಡಳಿ, ಇದು ದೇವಾಲಯದ ಖಾಸಗಿ ಜಾಗವಾಗಿದ್ದು, ಜನರಿಗೆ ತೊಂದರೆಯಾಗದಂತೆ ಗೋಪುರ ನಿರ್ಮಾಣ ಮಾಡಲಾಗಿದೆ. ಜನರಿಗೆ ತೊಂದರೆಯಾದರೆ ರಸ್ತೆ ಅಗಲೀಕರಣ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪಕ್ಕದ ಊರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಗ್ರಾಮದ ಮುಖ್ಯಸ್ಥನಿಗೆ ದಂಡ, ಬಹಿಷ್ಕಾರ ಶಿಕ್ಷೆ!
ಸದ್ಯ ಈ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ರಾಜ್ಯಪಾಲರ ಕಚೇರಿಯಿಂದ ಜಿಲ್ಲಾಡಳಿತದ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ವರ್ಸಸ್ ಸ್ಥಳೀಯರ ನಡುವೆ ರಸ್ತೆ ಮಧ್ಯೆ ನಿರ್ಮಾಣವಾಗಿರುವ ಗೋಪುರ ಸಂಬಂಧ ವಿವಾದ ಸೃಷ್ಟಿಯಾಗಿದ್ದು, ರಾಜ್ಯಪಾಲರಿಗೆ ಗೋಪುರ ಉದ್ಘಾಟನೆ ಮಾಡದಂತೆ ಸ್ಥಳೀಯರು ಪತ್ರ ಬರೆದಿದ್ದಾರೆ. ಹಾಗಾಗಿ ರಾಜ್ಯಪಾಲರು ಇಂದು ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:19 am, Thu, 8 May 25








