ಚಿಕ್ಕಮಗಳೂರು: ರೈಲ್ವೆ ಗೇಟ್ ಬೋರ್ಡ್ನಲ್ಲಿ ಕನ್ನಡವಿಲ್ಲದ್ದಕ್ಕೆ ಮಸಿ ಬಳಿದ ಪ್ರತಿಭಟನಾಕಾರರು, ವಿಡಿಯೋ ವೈರಲ್
ರೈಲ್ವೆ ಗೇಟ್ ನಾಮಫಲಕದಲ್ಲಿ ಕೇವಲ ಇಂಗ್ಲಿಷ್, ಹಿಂದಿ, ತೆಲುಗು ಭಾಷೆಯಲ್ಲಿ ಬರಹ ಪ್ರಕಟಿಸಿದ್ದಕ್ಕೆ ಅದಕ್ಕೆ ಕನ್ನಡ ಪರ ಹೋರಾಟಗಾರರು ಮಸಿ ಬಳಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಘಟನೆ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ.

ಚಿಕ್ಕಮಗಳೂರು, ಏಪ್ರಿಲ್ 10: ರೈಲ್ವೆಗೆ (Indian Railways) ಸಂಬಂಧಿಸಿದ ಸೈನ್ಬೋರ್ಡ್ಗಳಲ್ಲಿ ಕನ್ನಡ (Kannada) ಬಳಸದೆ ಅನ್ಯ ಭಾಷೆಗಳನ್ನು ಮಾತ್ರ ಬಳಸಿದ್ದಕ್ಕೆ ಕನ್ನಡ ಪರ ಸಂಘಟನೆಗಳ (Pro Kannada Activists) ಕಾರ್ಯಕರ್ತರು ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಚಿಕ್ಕಮಗಳೂರಿನ ಮೂರು ಮನೆ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕರವೇ ಕಾರ್ಯಕರ್ತರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಾಮಾಜಿಕ ಮಾಧ್ಯಮ ಬಳಕೆದಾರ ಆದಿತ್ಯ ಸಮರ್ಥ್ ಎಂಬವರು ಹಂಚಿಕೊಂಡಿರುವ ವೀಡಿಯೊದಲ್ಲಿ, ವ್ಯಕ್ತಿಗಳ ಗುಂಪೊಂದು ರೈಲ್ವೆ ಗೇಟ್ ಫಲಕದ ಬಳಿಗೆ ಬಂದು ಮಸಿ ಬಳಿಯುತ್ತಿರುವುದನ್ನು ತೋರಿಸಲಾಗಿದೆ. ಸ್ಥಳೀಯ ಭಾಷೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರತಿಪಾದಿಸುತ್ತಾ, ಈ ಪ್ರದೇಶದ ಎಲ್ಲಾ ರೈಲ್ವೆ ಫಲಕಗಳಲ್ಲಿ ಕನ್ನಡವನ್ನು ತಕ್ಷಣ ಸೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿನ ಮೂರು ಮನೆ ಹಳ್ಳಿ ಗ್ರಾಮದಲ್ಲಿ ನೂತನವಾಗಿ ರೈಲ್ವೆ ಕಾಮಗಾರಿಯಾಗುತ್ತಿದ್ದು ನಾಮ ಫಲಕಗಳಲ್ಲಿ ಕನ್ನಡ ಬಳಕೆ ಮಾಡದಿರುವ ಕಾರಣ ಇಂದು ಅನ್ಯ ಭಾಷ್ಯ ನಾಮ ಫಲಕಗಳಿಗೆ ಕರವೇ ಕಾರ್ಯಕರ್ತರೆಲ್ಲ ಸೇರಿ ಮಸಿ ಬಳಿಯಲಾಯಿತು ಎಂದು ಆದಿತ್ಯ ಸಮರ್ಥ್ ಉಲ್ಲೇಖಿಸಿದ್ದಾರೆ.
ಪ್ರತಿಭಟನೆಯ ವೈರಲ್ ವಿಡಿಯೋ
ಚಿಕ್ಕಮಗಳೂರಿನ ಮೂರು ಮನೆ ಹಳ್ಳಿ ಗ್ರಾಮದಲ್ಲಿ ನೂತನವಾಗಿ ರೈಲ್ವೆ ಕಾಮಗಾರಿಯಾಗುತ್ತಿದ್ದು ನಾಮ ಫಲಕಗಳಲ್ಲಿ ಕನ್ನಡ ಬಳಕೆ ಮಾಡದಿರುವ ಕಾರಣ ಇಂದು ಅನ್ಯ ಭಾಷ್ಯ ನಾಮ ಫಲಕಗಳಿಗೆ ಕರವೇ ಕಾರ್ಯಕರ್ತರೆಲ್ಲ ಸೇರಿ ಮಸಿ ಬಳಿಯಲಾಯಿತು
ಜೈ ಭುವನೇಶ್ವರಿ 💛❤️ pic.twitter.com/ggHOL4Tb0d
— Aditya Samarth (@aaditya_samarth) April 7, 2025
ಆದಾಗ್ಯೂ, ಈ ಪ್ರತಿಭಟನೆ ಬಗ್ಗೆ ಆನ್ಲೈನ್ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ಪ್ರತಿಭಟನೆ ಪರವಾಗಿ ಸಹಾನುಭೂತಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದ್ದನ್ನು ಖಂಡಿಸಿದ್ದಾರೆ. ಬೇಜವಾಬ್ದಾರಿಯುತ ಚಟುವಟಿಕೆ ಎಂದು ಟೀಕಿಸಿದ್ದಾರೆ.
ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು, ‘ಈ ರೀತಿ ಮಾಡುವ ಬದಲು ಅದೇ ಶಕ್ತಿಯನ್ನು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಏಕೆ ಬಳಸಬಾರದು? ಕನ್ನಡ ವಿಷಯವನ್ನು ಹೆಚ್ಚು ವಿದ್ಯಾರ್ಥಿ ಸ್ನೇಹಿಯಾಗಿ ಮಾಡಿ. ಹಾಗೆ ಮಾಡಿದರೆ ಅದು ಆದ್ಯತೆಯ ಆಯ್ಕೆಯಾಗುತ್ತದೆ. ಭಾಷೆಯನ್ನು ಉತ್ತೇಜಿಸಲು ಹಲವು ಅರ್ಥಪೂರ್ಣ ಮಾರ್ಗಗಳಿವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಖಾಸಗಿ, ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ: ನಾಲ್ಕೈದು ದಿನ ರಜೆಗೆಂದು ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಶಾಕ್
ಮತ್ತೊಂದು ಪೋಸ್ಟ್ನಲ್ಲಿ, ‘ರಾಜಕೀಯ ದೃಷ್ಟಿಕೋನದಿಂದ, ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳು ಸ್ಥಳೀಯ ಸಮುದಾಯಗಳಲ್ಲಿ ಭಿನ್ನಾಭಿಪ್ರಾಯವನ್ನು ಬಿತ್ತುತ್ತಿವೆ’ ಎಂದು ಆರೋಪಿಸಲಾಗಿದೆ.