
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಜಪದ ಮಹತ್ವ ಮತ್ತು ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ. ಜಪವು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಮನಸ್ಸಿನ ಶಾಂತಿ, ಆತ್ಮೀಯತೆ ಮತ್ತು ದೈವಿಕ ಕೃಪೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಜಪದಿಂದ ಪಾಪಗಳನ್ನು ನಾಶಪಡಿಸಿಕೊಳ್ಳಬಹುದು ಮತ್ತು ಮೋಕ್ಷವನ್ನು ಪಡೆಯಬಹುದು ಎಂದು ಹೇಳಲಾಗಿದೆ. ಜಪವನ್ನು ಮಾಡುವ ವಿಧಾನಗಳು ವಿಭಿನ್ನವಾಗಿರಬಹುದು. ಮೌನ ಜಪ, ಉಚ್ಚಾರಣೆಯ ಜಪ, ರುದ್ರಾಕ್ಷಿ ಅಥವಾ ಕಮಲಾಕ್ಷಿ ಮಾಲೆಯೊಂದಿಗೆ ಜಪ ಮಾಡುವುದು ಸಾಮಾನ್ಯ ಪದ್ಧತಿಗಳು.
ಆದರೆ ಜಪ ಮಾಡುವ ಸ್ಥಳವು ಅದರ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂದು ಗುರೂಜಿ ಹೇಳಿದ್ದಾರೆ. ದೇವರ ಮನೆಯಲ್ಲಿ ಜಪ ಮಾಡುವುದರಿಂದ ಶೇ. 50ರಷ್ಟು ಫಲ ಸಿಗುತ್ತದೆ. ನದಿಯಂಚಿನಲ್ಲಿ ಜಪ ಮಾಡುವುದರಿಂದ ಪೂರ್ಣ ಫಲ ಸಿಗುತ್ತದೆ ಎಂದು ಹೇಳಲಾಗಿದೆ. ಇದು ಋಷಿಮುನಿಗಳು ಮತ್ತು ಯೋಗಿಗಳು ನದಿಗಳ ಬಳಿ ಜಪ ಮಾಡುತ್ತಿದ್ದ ಪದ್ಧತಿಯನ್ನು ಸೂಚಿಸುತ್ತದೆ. ದೇವಾಲಯಗಳಲ್ಲಿ ಜಪ ಮಾಡುವುದರಿಂದ ಶೇ. 75 ಫಲ ಸಿಗುತ್ತದೆ. ದೇವಾಲಯಗಳು ಶಾಸ್ತ್ರಬದ್ದವಾಗಿ ನಿರ್ಮಾಣವಾಗಿರುವುದರಿಂದ ದೈವಿಕ ಶಕ್ತಿಯು ಅಲ್ಲಿ ಹೆಚ್ಚಾಗಿರುತ್ತದೆ ಎಂದು ನಂಬಲಾಗಿದೆ. ಗೋಶಾಲೆಯಲ್ಲಿ, ಯಾಗಶಾಲೆಯಲ್ಲಿ, ಮತ್ತು ಪುಣ್ಯಕ್ಷೇತ್ರಗಳಲ್ಲಿ ಜಪ ಮಾಡುವುದರಿಂದ ಶೇ. 100 ಫಲ ಸಿಗುತ್ತದೆ. ಈ ಸ್ಥಳಗಳಲ್ಲಿ ದೈವಿಕ ಸಾನಿಧ್ಯ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಮನೆಯಲ್ಲಿ ನಟರಾಜನ ಪ್ರತಿಮೆ ಇಡಬಾರದು ಎಂದು ಹೇಳುವುದೇಕೆ?
ಜಪಕ್ಕೆ ಬಳಸುವ ಆಸನವೂ ಮುಖ್ಯ. ಹಿಂದೆ ಹುಲಿಯ ಚರ್ಮ, ಚಾಪೆ, ಬಿದಿರು ಇತ್ಯಾದಿಗಳನ್ನು ಬಳಸುತ್ತಿದ್ದರು. ಆದರೆ ಮನೆಯ ನೆಲದ ಮೇಲೆ ನೇರವಾಗಿ ಕುಳಿತು ಜಪ ಮಾಡುವುದು ಅಷ್ಟು ಶ್ರೇಷ್ಠವಲ್ಲ. ಒಂದು ಮಣೆ ಅಥವಾ ಚಾಪೆಯನ್ನು ಬಳಸುವುದು ಉತ್ತಮ. ಮಣೆಯ ಕಾಲುಗಳು ಮತ್ತು ಕೈಗಳು ನೆಲವನ್ನು ಸ್ಪರ್ಶಿಸಬಾರದು. ಜಪದಿಂದ ತಕ್ಷಣವೇ ಭಗವಂತನ ಕೃಪೆ ಸಿಗುತ್ತದೆ ಎಂದು ಹೇಳಲಾಗಿದೆ. ಪ್ರಯಾಣದ ಸಮಯದಲ್ಲಿ ಅಥವಾ ಎಲ್ಲಿಯಾದರೂ ಮಾನಸಿಕ ಜಪವನ್ನು ಮಾಡಬಹುದು. ಜಪದಿಂದ ದೇಹ ಶುದ್ಧಿಯಾಗುತ್ತದೆ ಮತ್ತು ಪಾಪಗಳಿಂದ ಮುಕ್ತರಾಗಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ