
ನಾಲಿಗೆ ಮೇಲೆ ಮಚ್ಚೆ ಇರುವವರ ಕುರಿತಾದ ನಂಬಿಕೆಗಳು ನಮ್ಮ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿವೆ. ಚಿಕ್ಕ ವಯಸ್ಸಿನಿಂದಲೂ, ವಿಶೇಷವಾಗಿ ಹಳ್ಳಿಗಳಲ್ಲಿ, ನಾಲಿಗೆ ಮೇಲೆ ಮಚ್ಚೆ ಇರುವ ವ್ಯಕ್ತಿಗಳ ಬಗ್ಗೆ ಹಿರಿಯರು “ಅವರು ಏನಾದರೂ ಹೇಳಿದರೆ ಅದು ನಿಜವಾಗುತ್ತದೆ, ಅವರೊಂದಿಗೆ ಹುಷಾರಾಗಿರಿ” ಎಂದು ಹೇಳುವುದನ್ನು ಕೇಳಿದ್ದೇವೆ. ಈ ನಂಬಿಕೆಯ ಸತ್ಯಾಸತ್ಯತೆಯನ್ನು ಶಾಸ್ತ್ರೀಯವಾಗಿ ಪರಿಶೀಲಿಸಿದಾಗ, ನಾಲಿಗೆಯ ಮೇಲೆ ಮಚ್ಚೆ ಇದ್ದರೆ ವ್ಯಕ್ತಿಗಳ ಮಾತುಗಳು, ಶಾಪಗಳು ನಿಜವಾಗುವ ಸಾಧ್ಯತೆಗಳಿವೆ ಎಂದು ಶಾಸ್ತ್ರಗಳು ಮತ್ತು ನಂಬಿಕೆಗಳು ಸೂಚಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ನಾಲಿಗೆಯ ಮೇಲೆ ಮಚ್ಚೆಗಳು ಸಾಮಾನ್ಯವಾಗಿ ಕಪ್ಪು ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತವೆ. ಈ ಮಚ್ಚೆಗಳು ನಾಲಿಗೆಯ ಮೇಲ್ಭಾಗ, ಕೆಳಭಾಗ ಅಥವಾ ಮುಂಭಾಗದಲ್ಲಿ ಇರಬಹುದು, ಮತ್ತು ಪ್ರತಿ ಸ್ಥಳಕ್ಕೂ ವಿಭಿನ್ನ ಮಹತ್ವವಿದೆ. ಅಂತಹ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವುದು ಅವಶ್ಯಕ ಎಂದು ಹೇಳಲಾಗುತ್ತದೆ.
ಶಾಸ್ತ್ರಗಳ ಪ್ರಕಾರ, ನಾಲಿಗೆ ಮೇಲೆ ಮಚ್ಚೆ ಇರುವವರು ಪೂರ್ವಜನ್ಮದಲ್ಲಿ ಬಹಳಷ್ಟು ಪುಣ್ಯ ಕಾರ್ಯಗಳನ್ನು, ದೊಡ್ಡ ಕಾರ್ಯಗಳನ್ನು ಮಾಡಿರುತ್ತಾರೆ. ಸಮಾಜ ಸೇವೆ, ದೀನದಲಿತರನ್ನು ಸಲಹಿದ್ದು, ಅಶಕ್ತರಿಗೆ ಸಹಾಯ ಮಾಡಿದ್ದು, ಒಳ್ಳೆಯ ವೃಕ್ಷಗಳನ್ನು ನೆಟ್ಟಿದ್ದು, ಅನ್ನದಾನ ಮಾಡಿದ್ದು ಹೀಗೆ ಅನೇಕ ಸತ್ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಅಂತಹವರಿಗೆ ಭಗವಂತನ ಆಶೀರ್ವಾದವಿರುತ್ತದೆ ಮತ್ತು ಅವರು ವಿಶೇಷವಾದ ನಾಲಿಗೆಯ ಮಚ್ಚೆಯೊಂದಿಗೆ ಜನ್ಮ ತಾಳುತ್ತಾರೆ ಎಂಬುದು ನಂಬಿಕೆ.
ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!
ಇಂತಹ ವ್ಯಕ್ತಿಗಳಿಗೆ ಸೂಕ್ಷ್ಮ ಬುದ್ಧಿ, ವಿಶೇಷ ಶಕ್ತಿ ಮತ್ತು ಉತ್ತಮ ಆಲೋಚನಾ ಲಹರಿ ಇರುತ್ತದೆ. ಅವರು ಹೇಳಿದ ತಕ್ಷಣ ಎಲ್ಲವೂ ಆಗಬೇಕು ಎಂದೇನಿಲ್ಲ. ಆದರೆ, ಸತ್ಯಕ್ಕೆ ಸತ್ಯವಾಗಿ ನಡೆದುಕೊಳ್ಳುವ ಇಂತಹ ವ್ಯಕ್ತಿಗಳು ನೋವು ತಿಂದಾಗ, ಮೋಸ ಹೋದಾಗ ಅಥವಾ ತೀವ್ರ ಕೋಪದಿಂದ ಏನಾದರೂ ಹೇಳಿದಾಗ, ಆ ಮಾತುಗಳು ಕೆಲವೊಮ್ಮೆ ಪ್ರಭಾವ ಬೀರಬಹುದು. ಇದು ಸಾಮುದ್ರಿಕ ಶಾಸ್ತ್ರದ ಪ್ರಕಾರ ಒಂದು ಪ್ರಮುಖ ಅಂಶ. ನಾಲಿಗೆಯ ಕಾಣುವ ಭಾಗದಲ್ಲಿ ಕಪ್ಪು ಮಚ್ಚೆಗಳು ಮಹಿಳೆಯರಿಗಾಗಲಿ, ಪುರುಷರಿಗಾಗಲಿ, ಯಾವುದೇ ವಯಸ್ಸಿನವರಿಗಾಗಲಿ ಇರಬಹುದು. ಅವರಿಗೆ ವಂಚನೆ ಅಥವಾ ಮೋಸವಾದಾಗ, ಆ ನೋವನ್ನು ಸಹಿಸಲಾರದೆ ಅವರು ಶಪಿಸಿದರೆ ಅದು ನಿಜವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಇಂತಹ ನಾಲಿಗೆ ಮೇಲೆ ಮಚ್ಚೆ ಇರುವವರ ಹತ್ತಿರ ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ.
ನಾಲಿಗೆಯ ಕೆಳಭಾಗದಲ್ಲಿ ಮಚ್ಚೆ ಇದ್ದರೆ, ಅವರಿಗೆ ದೈವಾನುಗ್ರಹ ಹೆಚ್ಚಾಗಿರುತ್ತದೆ ಮತ್ತು ಭಗವಂತನ ಸಾಮೀಪ್ಯವಿರುತ್ತದೆ ಎಂದು ಹೇಳಲಾಗುತ್ತದೆ. ನಾಲಿಗೆ ಮೇಲೆ ಮಚ್ಚೆ ಇರುವವರು ಸಾಮಾನ್ಯವಾಗಿ ಸಾಧಕರಾಗಿರುತ್ತಾರೆ, ಕಲಾಪ್ರಿಯರಾಗಿರುತ್ತಾರೆ, ಪ್ರಕೃತಿ ಆರಾಧಕರಾಗಿರುತ್ತಾರೆ. ಅವರು ಮೃದುವಾಗಿ ಮಾತನಾಡುತ್ತಾರೆ ಮತ್ತು ವಿದ್ವಾಂಸರಾಗಿರುತ್ತಾರೆ. ಅವರು ಗುರುತರವಾದ ಕೆಲಸಗಳನ್ನು ಕೈಗೊಳ್ಳುತ್ತಾರೆ. ಅವರಿಗೆ ದೈವಾನುಗ್ರಹ ಮತ್ತು ಪ್ರಕೃತಿಯ ಪಂಚಭೂತಗಳ ಸ್ಪಂದನೆ ದೊರೆಯುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ