
ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19 ಗುರುವಾರದಂದು ಆಚರಿಸಲಾಗುತ್ತಿದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಕುಂಭ ರಾಶಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ.
ಕುಂಭ ರಾಶಿಯವರಿಗೆ ಗುರುವು ಐದನೇ ಮನೆಯಿಂದ ಆರನೇ ಮನೆಗೆ ಸಾಗಲಿದ್ದಾನೆ. ಶನಿ ಗ್ರಹವು ವರ್ಷ ಪೂರ್ತಿ ಎರಡನೇ ಮನೆಯಲ್ಲೇ ಇರುತ್ತದೆ. ರಾಹು ಗ್ರಹ ಒಂದನೇ ಮನೆಯಿಂದ ವ್ಯಯ ಸ್ಥಾನವಾದ 12ನೇ ಮನೆಗೆ ಬರುತ್ತಾನೆ, ಮತ್ತು ಕೇತು ಗ್ರಹ ಏಳನೇ ಮನೆಯಿಂದ ಆರನೇ ಮನೆಗೆ ಪ್ರವೇಶಿಸಲಿದ್ದಾನೆ. ಕುಂಭ ರಾಶಿಯವರು ಸಾಡೆ ಸಾತಿಯ ಕಟ್ಟ ಕಡೆಯ ಭಾಗದಲ್ಲಿರುವುದರಿಂದ, ಈ ವರ್ಷದಲ್ಲಿ ಅವರಿಗೆ ದೊಡ್ಡ ಕಷ್ಟಗಳಿಂದ ಕೊಂಚ ಸಡಿಲಿಕೆ ಸಿಗುವ ಸಾಧ್ಯತೆ ಇದೆ ಎಂದು ಗುರೂಜಿ ತಿಳಿಸಿದ್ದಾರೆ.
ಈ ವರ್ಷ ಕುಂಭ ರಾಶಿಯವರಿಗೆ ಆದಾಯ 6 ಮತ್ತು ವ್ಯಯ 4 ರ ಅನುಪಾತದಲ್ಲಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಉತ್ತಮ ಆರೋಗ್ಯದ ಅಂಶ 8 ಇದ್ದರೆ, ಅನಾರೋಗ್ಯದ ಅಂಶ 3 ಇರುತ್ತದೆ. ಸುಖ ಮತ್ತು ದುಃಖಗಳ ಪ್ರಮಾಣವನ್ನು ನೋಡಿದಾಗ, 7 ಭಾಗ ಸುಖ ಮತ್ತು 3 ಭಾಗ ದುಃಖ ಇರಲಿದೆ. ಒಟ್ಟಾರೆ, 2026ರ ಪರಾಭವನಾಮ ಸಂವತ್ಸರವು ಕುಂಭ ರಾಶಿಯವರಿಗೆ ಉತ್ಸಾಹ, ಚೈತನ್ಯ ಮತ್ತು ಅಭಿವೃದ್ಧಿಯ ವರ್ಷ ಎಂದು ಗುರೂಜಿ ಹೇಳಿದ್ದಾರೆ.
ಸಾಂಸಾರಿಕ ದುಃಖಗಳು ದೂರಾಗಿ, ಕುಟುಂಬದಲ್ಲಿ ಪ್ರಗತಿ ಕಂಡುಬರುತ್ತದೆ. ಅಣ್ಣತಮ್ಮಂದಿರು ಮತ್ತು ಕುಟುಂಬದ ಸದಸ್ಯರ ಬೆಂಬಲ ಚೆನ್ನಾಗಿರುತ್ತದೆ. ಗುರು ಅನುಗ್ರಹವೂ ಇರುವುದರಿಂದ, ಬಾಂಧವ್ಯಗಳು ಉತ್ತಮವಾಗಿರುತ್ತವೆ. ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ ಮತ್ತು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುವಿರಿ. ಅಧಿಕಾರ ಪ್ರಾಪ್ತಿಯ ಯೋಗವೂ ಇದೆ. ಹೊಸ ಉದ್ಯೋಗದ ಅನುಭವಗಳು ಲಭಿಸುತ್ತವೆ, ವಿಶೇಷವಾಗಿ ರೈಲ್ವೆ, ಎಲೆಕ್ಟ್ರಾನಿಕ್, ಸಾಫ್ಟ್ವೇರ್, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗಬಹುದು. ಕೆಲವರು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾವಣೆಗೊಳ್ಳಬಹುದು. ರಾಜಕೀಯ ವ್ಯಕ್ತಿಗಳಿಗೆ ಕೆಲವೊಂದು ಸಂಕಷ್ಟಗಳು ಎದುರಾಗುವ ಸಾಧ್ಯತೆಗಳಿದ್ದರೂ, ದುರಾಸೆಯನ್ನು ಬಿಟ್ಟುಬಿಡುವಂತೆ ಸೂಚಿಸಲಾಗಿದೆ. ಸಾಲಬಾಧೆ ತೀರಿಸಿಕೊಳ್ಳುವಿರಿ.
ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಕ್ರೀಡಾಪಟುಗಳು ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆಗಳು ದೊರೆಯುವ ಯೋಗವಿದೆ. ರೈತರು, ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಗೆ ಈ ವರ್ಷ ಅತ್ಯಂತ ಲಾಭದಾಯಕವಾಗಿರುತ್ತದೆ. ವಿವಾಹ ಯೋಗವು ತುಂಬಾ ಚೆನ್ನಾಗಿದ್ದರೂ, ಪ್ರೇಮ ವ್ಯವಹಾರಗಳಿಗೆ ಈ ವರ್ಷ ಅಷ್ಟು ಉತ್ತಮವಾಗಿಲ್ಲ. ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸಣ್ಣ ಪ್ರಮಾಣದ ಆರ್ಥಿಕ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಸಾಲ ಮಂಜೂರಾತಿ, ಹೊಸ ಸಂಸ್ಥೆಗಳ ಸ್ಥಾಪನೆ ಮತ್ತು ರಾಜಕೀಯವಾಗಿ ಪ್ರಗತಿ ಕಂಡುಬರುತ್ತದೆ. ತಂದೆ-ತಾಯಿಗಳ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ ಕಾಡುವ ಸಾಧ್ಯತೆ ಇದೆ. ಕುಂಭ ರಾಶಿಯ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಅಥವಾ ಪ್ಯಾಕೇಜ್ ಬದಲಾವಣೆ ಕಂಡುಬರಲಿದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವ ಯೋಗವಿದೆ. ಸರ್ಕಾರಿ ನೌಕರರಿಗೆ ಉತ್ತಮವಾಗಿದ್ದು, ಹಳೆ ಬಾಕಿಗಳು ವಸೂಲಿಯಾಗುತ್ತವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ದೊಡ್ಡ ಕಷ್ಟಗಳಲ್ಲಿ ಸಿಲುಕಿದವರಿಗೆ, ಜೈಲು ವಾಸ ಅನುಭವಿಸಿದವರಿಗೂ ಸಹ ಜುಲೈ-ಆಗಸ್ಟ್ನಿಂದ ಸ್ವಲ್ಪ ಅನುಕೂಲ ಮತ್ತು ಸಡಿಲಿಕೆ ಸಿಗಲಿದೆ. ನಂಬಿಕೆ ದ್ರೋಹವಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಮಡದಿಯ ಉದ್ಯೋಗದಲ್ಲಿ ಬಡ್ತಿ, ಹೆಣ್ಣುಮಕ್ಕಳಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗವಿದೆ.
ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಈ ವರ್ಷದಲ್ಲಿ ಕುಂಭ ರಾಶಿಯವರಿಗೆ ಶೇ.70 ರಷ್ಟು ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಬುಧವಾರ ಮತ್ತು ಶುಕ್ರವಾರಗಳು ಅದೃಷ್ಟದ ದಿನಗಳಾಗಿದ್ದು, ವರ್ಷ ಪೂರ್ತಿ ಶುಭ ಫಲಗಳನ್ನು ತರುತ್ತವೆ. ಕೇಸರಿ, ಬೂದು ಮತ್ತು ತಿಳಿ ಬಣ್ಣಗಳನ್ನು ಹೆಚ್ಚು ಬಳಸುವುದರಿಂದ ಒಳ್ಳೆಯದಾಗುತ್ತದೆ.
ಅಶ್ವತ್ಥ ವೃಕ್ಷ ದರ್ಶನ, ಅಶ್ವತ್ಥ ಕಟ್ಟೆಯ ದರ್ಶನ, ನಾಗರ ದರ್ಶನ ಮತ್ತು ನವನಾಗ ಸ್ತೋತ್ರ (ಅನಂತಂ ವಾಸುಕಿಂ ಶೇಷಂ ಪದ್ಮನಾಭಂಚ ಕಂಬಲಂ, ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ) ಪಠಣ ಮಾಡುವುದು ಉತ್ತಮ. ಚೌತಿ (ಕೃಷ್ಣಪಕ್ಷ ಅಥವಾ ಶುಕ್ಲಪಕ್ಷ) ಅಥವಾ ಮಂಗಳವಾರದಂದು ನಾಗರ ಕಲ್ಲಿಗೆ ಹಾಲನ್ನು ಎರೆದು ಅಥವಾ ನಾಗನ ದರ್ಶನ ಮಾಡಿಕೊಳ್ಳುವುದು ಶುಭಕರ. ಪ್ರತಿದಿನ “ಓಂ ಅನಂತಾಯ ನಮಃ” ಮಂತ್ರವನ್ನು ಜಪಿಸುವುದರಿಂದಲೂ ಸಾಕಷ್ಟು ಶುಭ ಫಲಗಳು ಸಿಗುತ್ತವೆ. ಅನ್ನದಾನವನ್ನು ಹೆಚ್ಚಾಗಿ ಮಾಡಬೇಕು. ನಾಗರ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸುವುದು ಒಳ್ಳೆಯದು. ಸಾಡೆ ಸಾತಿಯ ಕೊನೆಯ ಭಾಗವಿರುವುದರಿಂದ, ಕಾಳಹಸ್ತಿ, ಕುಕ್ಕೆ ಅಥವಾ ಘಾಟಿ ದರ್ಶನ ಮಾಡಿಕೊಳ್ಳುವುದು ತುಂಬಾ ಶುಭಕರ ಎಂದು ಡಾ. ಬಸವರಾಜ ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ