
ಸ್ತ್ರೀ ಜಾತಕದಲ್ಲಿನ ಗ್ರಹಗಳ ಪ್ರಭಾವ, ಮಹಿಳೆಯರ ವ್ಯಕ್ತಿತ್ವ ಹಾಗೂ ಅದೃಷ್ಟದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗೃಹಿಣಿಯು ಒಂದು ಕುಟುಂಬದ ಕಣ್ಣಾಗಿರುತ್ತಾಳೆ. ಆಕೆಯ ಬಲವು ಇಡೀ ಕುಟುಂಬದ ಭವಿಷ್ಯವನ್ನು ರೂಪಿಸುತ್ತದೆ. ನಮ್ಮ ಪೂರ್ವಿಕರು ಮಹಿಳೆಯರು ಹೊಂದಿರಬೇಕಾದ ಆರು ಪ್ರಮುಖ ಗುಣಗಳನ್ನು ಈ ಶ್ಲೋಕದ ಮೂಲಕ ವಿವರಿಸಿದ್ದಾರೆ: “ಕಾರ್ಯೇಶು ದಾಸಿ ಕರುಣೇಶು ಮಂತ್ರಿ ಪೂಜ್ಯೇಶು ಮಾತ ರೂಪೇಶು ಲಕ್ಷ್ಮಿ ಕ್ಷಮಯ ದರಿತ್ರಿ ಶಯನೇಶು ರಂಬ.” ಈ ಪ್ರತಿಯೊಂದು ಗುಣಕ್ಕೂ ಜಾತಕದಲ್ಲಿನ ಒಂದು ನಿರ್ದಿಷ್ಟ ಗ್ರಹದ ಬಲ ಪ್ರಮುಖ ಕಾರಣವಾಗುತ್ತದೆ.
ಗುರೂಜಿಯವರು ಹೇಳಯವಂತೆ,ಕಾರ್ಯೇಶು ದಾಸಿ ಎಂಬುದು ಕೆಲಸಗಳಲ್ಲಿ ಶ್ರದ್ಧೆ ಮತ್ತು ತಾಳ್ಮೆಯನ್ನು ಸೂಚಿಸುತ್ತದೆ. ಶನಿ ಗ್ರಹದ ಅನುಗ್ರಹ ಚೆನ್ನಾಗಿದ್ದಾಗ ಮಹಿಳೆಯು ತಾಳ್ಮೆಯಿಂದ, ನಿಧಾನವಾಗಿ ಮತ್ತು ವ್ಯವಸ್ಥಿತವಾಗಿ ಎಲ್ಲ ಕಾರ್ಯಗಳನ್ನು ನಿಭಾಯಿಸುವ ಶಕ್ತಿಯನ್ನು ಪಡೆಯುತ್ತಾಳೆ. ಇದು ಕುಟುಂಬದ ನಿರ್ವಹಣೆಗೆ ಅವಶ್ಯಕವಾದ ಗುಣ.
ಕರುಣೇಶು ಮಂತ್ರಿ ಎಂದರೆ ದಯೆ ಮತ್ತು ಮಂತ್ರಿಯಂತಹ ಬುದ್ಧಿವಂತಿಕೆ. ಗುರು ಗ್ರಹದ ಬಲವಿರುವ ಮಹಿಳೆಯು ಕರುಣಾಮಯಿಯಾಗಿರುತ್ತಾಳೆ, ಅತಿಥಿ ಸತ್ಕಾರದಲ್ಲಿ ನಿಪುಣಳಾಗಿರುತ್ತಾಳೆ ಮತ್ತು ಯಾವುದೇ ದರ್ಪವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಾಳೆ. ಗುರುಗಳ ಆಶೀರ್ವಾದವಿರುವವರಿಗೆ ಈ ಗುಣ ಸಹಜವಾಗಿ ಬರುತ್ತದೆ.
ಪೂಜ್ಯೇಶು ಮಾತ ಎಂಬುದು ತಾಯಿಯಂತಹ ಪೋಷಣೆ ಮತ್ತು ಪಾಲನೆಯ ಗುಣ. ಚಂದ್ರನ ಬಲ ಚೆನ್ನಾಗಿದ್ದಾಗ ಮಹಿಳೆಯು ಕೋಪತಾಪಗಳಿಲ್ಲದೆ ಮಕ್ಕಳನ್ನು ಪೋಷಿಸುತ್ತಾಳೆ, ಮನೆಗೆ ಸಂಬಂಧಿಸಿದ ವಿಷಯಗಳಲ್ಲಿ ತಾಳ್ಮೆಯಿಂದ ವರ್ತಿಸುತ್ತಾಳೆ. ಚಂದ್ರನ ಅನುಗ್ರಹದಿಂದ ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ.
ರೂಪೇಶು ಲಕ್ಷ್ಮಿ ಎಂದರೆ ಮಹಾಲಕ್ಷ್ಮಿಯಂತೆ ಕಾಣಿಸುವುದು. ಶುಕ್ರನ ಬಲ ಹೆಚ್ಚಾಗಿದ್ದಾಗ ಮಹಿಳೆಯು ಸೌಂದರ್ಯ, ಅಲಂಕಾರ, ನಗುಮೊಗ ಮತ್ತು ಪೂಜ್ಯಭಾವನೆಗಳನ್ನು ಹೊಂದುತ್ತಾಳೆ. ನಿಜವಾದ ಕುಂಕುಮ ಧರಿಸಿ, ಸಾಕ್ಷಾತ್ ದೇವಿಯ ಸ್ವರೂಪಿಣಿಯಂತೆ ಕಾಣಿಸುತ್ತಾಳೆ. ಶುಕ್ರನ ಅನುಗ್ರಹವು ಆಕರ್ಷಕ ವ್ಯಕ್ತಿತ್ವವನ್ನು ನೀಡುತ್ತದೆ.
ಕ್ಷಮಯ ದರಿತ್ರಿ ಎಂದರೆ ಭೂಮಿಯಂತಹ ಕ್ಷಮಾಗುಣ. ಕುಜನ ಬಲ ಚೆನ್ನಾಗಿದ್ದಾಗ ಮಹಿಳೆಯು ಯಾವುದೇ ಪರಿಸ್ಥಿತಿಯಲ್ಲೂ ತಾಳ್ಮೆ ಮತ್ತು ಕ್ಷಮೆಯಿಂದ ವರ್ತಿಸುತ್ತಾಳೆ. ವಿಶೇಷವಾಗಿ ಒಟ್ಟು ಕುಟುಂಬದಲ್ಲಿ ಎಲ್ಲವನ್ನು ನಿಭಾಯಿಸಲು ಈ ಗುಣ ಅತ್ಯಂತ ಅವಶ್ಯಕ.
ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!
ಶಯನೇಶು ರಂಬ ಎಂಬುದು ಗಂಡನ ಆರೈಕೆ ಮತ್ತು ಗೌರವವನ್ನು ಸೂಚಿಸುತ್ತದೆ. ರವಿ ಗ್ರಹದ ಬಲವಿರುವ ಮಹಿಳೆಯು ತನ್ನ ಪತಿಯ ಬಗ್ಗೆ ಪೂಜ್ಯಭಾವನೆ, ವಿನಯ ಮತ್ತು ವಿಧೇಯತೆಯನ್ನು ಪ್ರದರ್ಶಿಸುತ್ತಾಳೆ. ರವಿ ಬಲವಿರುವವರು ಅಧಿಕಾರಿಗಳಾಗುವ, ರಾಜಕೀಯದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳನ್ನೂ ಹೊಂದಿರುತ್ತಾರೆ.
ಇದಲ್ಲದೆ, ಬುಧ ಗ್ರಹದ ಅನುಗ್ರಹ ಚೆನ್ನಾಗಿದ್ದಾಗ ಮಹಿಳೆಯು ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ ಅಥವಾ ಯಾವುದೇ ವೃತ್ತಿಯಲ್ಲಿಯೂ ಯಶಸ್ಸು ಸಾಧಿಸುತ್ತಾಳೆ. ಬುದ್ಧಿವಂತಿಕೆಯಿಂದ ಕುಟುಂಬವನ್ನು ನಿರ್ವಹಿಸುವ, ಸಂಸಾರದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಇದು ನೀಡುತ್ತದೆ.
ಒಟ್ಟಾರೆಯಾಗಿ, ಮನೆಯಲ್ಲಿ ಯಜಮಾನನಿಗಿಂತ ಮಡದಿಗೆ ನವಗ್ರಹಗಳ ಅಂಶ ಚೆನ್ನಾಗಿದ್ದರೆ ಆ ಮನೆ ಸುಭಿಕ್ಷವಾಗಿರುತ್ತದೆ ಮತ್ತು ಕ್ಷೇಮವಾಗಿರುತ್ತದೆ. ಮಹಿಳೆಯು ಗಂಡನ ಬೆಂಬಲವಿಲ್ಲದೆಯೂ ಮಕ್ಕಳನ್ನು ಸಾಕಿ ಸಲಹುವಲ್ಲಿ ಸಫಲಳಾಗುತ್ತಾಳೆ ಎಂಬುದು ಈ ಗ್ರಹಬಲಗಳ ಪ್ರಭಾವದಿಂದಲೇ. ಈ ಗುಣಗಳನ್ನು ಯಾರಿಗೆ ಬೇಕು, ಅವರು ಆಯಾ ಗ್ರಹಗಳನ್ನು ಪೂಜಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ