ಕೊವಿಡ್​ನಿಂದ ಚೇತರಿಸಿಕೊಂಡ ತೆಂಡೂಲ್ಕರ್; ಅಗತ್ಯವಿರುವವರಿಗೆ ಪ್ಲಾಸ್ಮಾ ನೀಡುತ್ತೇನೆ ಎಂದ ಸಚಿನ್

ಮಾರ್ಚ್ 27ರಂದು ಸಚಿನ್ ಅವರು ಕೊರೊನಾ ಸೋಂಕಿನಿಂದ ಪೀಡಿತರಾಗಿರುವುದು ಪತ್ತೆಯಾದ ನಂತರ ಅವರನ್ನು ಕೆಲದಿನಗಳ ಮಟ್ಟಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • TV9 Web Team
  • Publish Date - 9:01 pm, Sat, 24 April 21

ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಇಂದು (ಶನಿವಾರ) ತಮ್ಮ48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಅವರ ಅಭಿಮಾನಿಗಳಿಗೆ ಗೊತ್ತಿರದ ವಿಷಯವೊಂದಿದೆ. ಮಾಸ್ಟರ್ ಬ್ಲಾಸ್ಟರ್ ಇತ್ತೀಚಿಗೆ ಕೊವಿಡ್-19 ಸೋಂಕಿನಿಂದ ಚೇತರಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಆದರೆ ವಿಷಯ ಅದಲ್ಲ. ಸೋಂಕಿಗೊಳಗಾಗಿರುವವರಿಗೆ ತಮ್ಮ ಪ್ಲಾಸ್ಮಾವನ್ನು ಅವರು ನೀಡಲು ನಿರ್ದರಿಸಿರುವುದು ನಾವು ಚರ್ಚಿಸುತ್ತಿರುವ ವಿಷಯ. ತಾನು ಪ್ಲಾಸ್ಮಾ ಡೊನೇಟ್ ಮಾಡಲು ಅರ್ಹನಾದ ತಕ್ಷಣ ಅದನ್ನು ಮಾಡುವೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 27ರಂದು ಸಚಿನ್ ಅವರು ಕೊರೊನಾ ಸೋಂಕಿನಿಂದ ಪೀಡಿತರಾಗಿರುವುದು ಪತ್ತೆಯಾದ ನಂತರ ಅವರನ್ನು ಕೆಲದಿನಗಳ ಮಟ್ಟಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ವೈದ್ಯರು ಒಂದು ಸಂದೇಶವನ್ನು ಹಂಚಿಕೊಳ್ಳುವಂತೆ ನನಗೆ ಹೇಳಿದ್ದಾರೆ ಅದನ್ನು ನಿಮಗೆಲ್ಲ ಹೇಳುತ್ತಿದ್ದೇನೆ. ನಾನೊಂದು ಪ್ಲಾಸ್ಮಾ ಕೇಂದ್ರವನ್ನು ಉದ್ಘಾಟಿಸಿದ್ದೇನೆ. ಸೂಕ್ತವಾದ ಸಮಯದಲ್ಲಿ ಪ್ಲಾಸ್ಮಾ ನೀಡಿದ್ದೇಯಾದರೆ, ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿ ಬೇಗ ಗುಣಮುಖ ಹೊಂದುತ್ತಾನೆ,’ ಎಂದು ಸಚಿನ್ ಟ್ವೀಟ್​ ಮಾಡಿದ್ದಾರೆ.

‘ವೈದ್ಯರು ನಾನು ಪ್ಲಾಸ್ಮಾವನ್ನು ಡೊನೇಟ್​ ಮಾಡಲು ಅರ್ಹನೆಂದು ಹೇಳಿದ ನಂತರ ಅದನ್ನು ಅಗತ್ಯವಿರುವವರಿಗೆ ನೀಡುತ್ತೇನೆ,’ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 8ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಸಚಿನ್ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಪ್ಲಾಸ್ಮಾ ಡೊನೇಟ್​ ಮಾಡುವ ವ್ಯಕ್ತಿಯಲ್ಲಿ ಅದನ್ನು ಮಾಡುವ ಕನಿಷ್ಠ 14 ದಿನಗಳ ಮುಂಚೆ ಸೋಂಕಿನ ಲಕ್ಷಣಗಳಿರಬಾರದು.

ವಿಶ್ವದ ಸರ್ವಕಾಲಿಕ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಸಚಿನ್, ಕೊವಿಡ್-19 ಸೋಂಕಿನಿಂದ ಚೇತರಿಸಿಕೊಂಡವರಿಗೆಲ್ಲ ಪ್ಲಾಸ್ಮಾ ಡೊನೇಟ್​ ಮಾಡುವಂತೆ ಮನವಿ ಮಾಡಿದ್ದಾರೆ.

‘ಸೋಕಿನಿಂದ ಗುಣಹೊಂದಿರುವವರೆಲ್ಲ ನಿಮಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ಅವರು ಹೇಳುವ ಸಮಯದಲ್ಲಿ ನಿಮ್ಮ ನಿಮ್ಮ ಪ್ಲಾಸ್ಮಾ ಡೊನೇಟ್ ಮಾಡಿ. ನೀವು ಮಾಡುವ ರಕ್ತದಾನ ಬಹಳಷ್ಟು ಸಮಸ್ಯೆಗಳನ್ನು ನಿವಾರಿಸಬಲ್ಲದು. ನಾವು ಅಸ್ವಸ್ಥರಾದಾಗ ಮಾತ್ರ ನಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ,’ ಎಂದು ಅವರು ಹೇಳಿದ್ದಾರೆ.

ಸೋಂಕಿನಿಂದ ಚೇತರಿಸಿಕೊಂಡವರ ಪ್ಮಾಸ್ಮಾವನ್ನು ಸಾಮಾನ್ಯವಾಗಿ, ಸೋಂಕಿತರಿಗೆ ಚಿಕಿತ್ಸೆ ನೀಡಲು ಉಪಯೋಗಿಸುತ್ತಾರೆ. ಚಿಕಿತ್ಸೆ ಪಡೆಯುತ್ತಿದ್ದಾಗ ತಮ್ಮಲ್ಲಿ ಸಕಾರಾತ್ಮಕ ಧೋರಣೆ ತುಂಬಿದ ವೈದ್ಯರಿಗೆ ಸಚಿನ್ ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ.
‘ನನ್ನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿರುವ ಎಲ್ಲರಿಗೂ ಧನ್ಯವಾದಗಳು. ನಿಮ್ಮ ವಿಶ್​ಗಳು ನನ್ನಲ್ಲಿ ಸಾರ್ಥಕ ಭಾವನೆ ಮೂಡಿಸಿವೆ. ಕಳೆದ ತಿಂಗಳು ನನ್ನ ಪಾಲಿಗೆ ಚೆನ್ನಾಗಿರಲಿಲ್ಲ. ಕೊರೊನಾ ಸೋಂಕಿನಿಂದಾಗಿ 21 ದಿನಗಳ ಕಾಲ ಪ್ರತ್ಯೇಕವಾಗಿ ಇರಬೇಕಾಯಿತು. ನಿಮ್ಮ ಪ್ರಾರ್ಥನೆ ಮತ್ತ್ತು ಹಾರೈಕೆಗಳು, ಕುಟುಂಬದವರ ಮತ್ತು ಸ್ನೇಹಿತರ ಪ್ರಾರ್ಥನೆ ಹಾಗೂ ಹಾರೈಕೆಗಳು, ಕೊನೆಯದಾಗಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ ನನ್ನನ್ನು ಪಾಸಿಟಿವ್ ಧೋರಣೆ ಹೊಂದಿರಲು ಸಹಕರಿಸಿದ್ದು ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯವಾಯಿತು,’ ಎಂದು ಸಚಿನ್ ಹೇಳಿದ್ದಾರೆ.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್​ಗೆ ಕೊರೊನಾ ಪಾಸಿಟಿವ್! ರಸ್ತೆ ಸುರಕ್ಷತೆ ವಿಶ್ವ ಟಿ20 ಸರಣಿ ಆಡಿದ ಕ್ರಿಕೆಟಿಗರಲ್ಲಿ ಹೆಚ್ಚಾದ ಆತಂಕ

Ads By Adgebra

Karnataka Bengaluru News LIVE: ಈ ವೇಳೆ ಸಂಪುಟ ರಚನೆ ವಿಚಾರವಾಗಿ ಬಿಎಸ್​ವೈ ಜೊತೆ ಬೊಮ್ಮಾಯಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ. ಈಗಾಗಲೇ ಬಿಎಸ್​ವೈ ಆಪ್ತ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ.