Ajinkya Rahane: ‘ಇದ್ದಕ್ಕಿದ್ದಂತೆ ತಂಡದಿಂದ ಹೊರಹಾಕಿದ್ರು’; ಅಜಿಂಕ್ಯಾ ರಹಾನೆ ನೋವಿನ ನುಡಿ

Ajinkya Rahane Speaks Out: ಭಾರತ ಕ್ರಿಕೆಟ್ ತಂಡದಿಂದ ಹೊರಗಿಟ್ಟಿರುವುದಕ್ಕೆ ಅಜಿಂಕ್ಯ ರಹಾನೆ ತೀವ್ರ ನೋವನ್ನು ವ್ಯಕ್ತಪಡಿಸಿದ್ದಾರೆ. 2023ರ WTC ಫೈನಲ್ ನಂತರ ತಂಡದಿಂದ ಕೈಬಿಡಲ್ಪಟ್ಟ ರಹಾನೆ, ತಮ್ಮನ್ನು ಏಕೆ ಹೊರಗಿಟ್ಟರು ಎಂದು ಯಾರೂ ವಿವರಿಸಲಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿರುವ ರಹಾನೆ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Ajinkya Rahane: ‘ಇದ್ದಕ್ಕಿದ್ದಂತೆ ತಂಡದಿಂದ ಹೊರಹಾಕಿದ್ರು’; ಅಜಿಂಕ್ಯಾ ರಹಾನೆ ನೋವಿನ ನುಡಿ
Ajinkya Rahane

Updated on: Feb 17, 2025 | 8:11 PM

ಅಜಿಂಕ್ಯ ರಹಾನೆ ಎಂದೊಡನೆ ನಮಗೆಲ್ಲ ಥಟ್ಟನೆ ನೆನಪಾಗುವುದು ಕಾಂಗರೂಗಳ ನಾಡಲ್ಲಿ ಟೀಂ ಇಂಡಿಯಾವನ್ನು ಐತಿಹಾಸಿಕ ಸರಣಿ ಜಯದತ್ತ ಮುನ್ನಡೆಸಿದ್ದು. ನಾಯಕ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕತ್ವವಹಿಸಿಕೊಂಡಿದ್ದ ರಹಾನೆ ಪ್ರತಿಷ್ಠಿತ ಸರಣಿಯನ್ನು ಭಾರತದ ಖಾತೆಗೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಕೊಹ್ಲಿ ನಂತರ ಭಾರತ ಟೆಸ್ಟ್ ತಂಡದ ನಾಯಕನಾಗುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದ ಅಜಿಂಕ್ಯಾ ರಹಾನೆ ಇದೀಗ ತಂಡದಿಂದ ಹೊರಬಿದ್ದು ವರ್ಷಗಳೇ ಕಳೆದಿವೆ. ಭಾರತ ಪರ ಮೂರು ಸ್ವರೂಪಗಳನ್ನು ಆಡಿದ್ದ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಭಿನ್ನವಾದ ಛಾಪು ಮೂಡಿಸಿದ್ದಾರೆ. ಆದಾಗ್ಯೂ, 2023 ರಿಂದ ರಹಾನೆಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ಮತ್ತೆ ತಂಡವನ್ನು ಸೇರಿಕೊಳ್ಳಲು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದರೂ ರಹಾನೆಗೆ ಟೀಂ ಇಂಡಿಯಾಕ್ಕೆ ಮರಳಲು ಅವಕಾಶ ಸಿಗುತ್ತಿಲ್ಲ. ರಹಾನೆ 2023 ರ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಕೊನೆಯದಾಗಿ ಆಡಿದ್ದರು. ಇದಾದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಈಗ ರಹಾನೆ ಈ ವಿಷಯದ ಬಗ್ಗೆ ನೋವಿನ ಮಾತುಗಳನ್ನಾಡಿದ್ದು, ನನ್ನನ್ನು ತಂಡದಿಂದ ಏಕೆ ಕೈಬಿಟ್ಟರು ಎಂಬುದು ನನಗೆ ಇದುವರೆಗೂ ತಿಳಿದಿಲ್ಲ. ಈ ಬಗ್ಗೆ ಯಾರನ್ನಾದರೂ ಕೇಳುವ ಎಂದರೆ ಯಾರೂ ಕೂಡ ನನ್ನೊಂದಿಗೆ ಮಾತನಾಡಲು ಸಿದ್ಧರಿರಲಿಲ್ಲ ಎಂದಿದ್ದಾರೆ.

ಯಾರೂ ಸಿದ್ಧರಿರಲಿಲ್ಲ

ಅಜಿಂಕ್ಯ ರಹಾನೆ ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತನ್ನನ್ನು ತಂಡದಿಂದ ಕೈಬಿಟ್ಟ ಬಗ್ಗೆ ಮಾತನಾಡಿದ್ದು, 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಂತರ ಆಯ್ಕೆದಾರರು ನನ್ನನ್ನು ತಂಡದಿಂದ ಕೈಬಿಟ್ಟರು. ಆದರೆ ನನ್ನನ್ನು ಏಕೆ ಹೊರಗೆ ಹಾಕಲಾಯಿತು ಎಂದು ನಾನು ಎಂದಿಗೂ ಕೇಳಲಿಲ್ಲ. ನಾನು ಹಿಂತಿರುಗಿ ಹೋಗಿ ನನ್ನನ್ನು ಏಕೆ ಕೈಬಿಡಲಾಯಿತು ಎಂದು ಕೇಳುವ ರೀತಿಯ ವ್ಯಕ್ತಿ ಅಲ್ಲ. ಆಯ್ಕೆಗಾರರು ಹಾಗೂ ನನ್ನ ನಡುವೆ ಸಂಭಾಷಣೆಯ ಕೊರತೆ ಇತ್ತು. ಹೀಗಾಗಿ ಕೆಲವರು ನನಗೆ ಹೋಗಿ ಮಾತನಾಡಲು ಹೇಳಿದರು. ಆದರೆ ಯಾರಾದರೂ ನಿಮ್ಮೊಂದಿಗೆ ಮಾತನಾಡಲು ಸಿದ್ಧರಿದ್ದರೆ ಮಾತ್ರ ಮಾತುಕತೆ ನಡೆಸಬಹುದು, ಆದರೆ ಯಾರೂ ಕೂಡ ನನ್ನೊಂದಿಗೆ ಮಾತನಾಡಲು ಬಯಸದಿದ್ದಾಗ ಜಗಳವಾಡುವುದರಲ್ಲಿ ಅರ್ಥವಿಲ್ಲ.

ನಾನು ಮುಖಾಮುಖಿ ಸಂಭಾಷಣೆ ನಡೆಸಲು ಬಯಸಿದ್ದೆ. ಆದರೆ ಅದಕ್ಕೆ ಯಾರೂ ಅವಕಾಶ ಮಾಡಿಕೊಡಲಿಲ್ಲ. WTC ಫೈನಲ್ಸ್ ನಂತರ ನನ್ನನ್ನು ಕೈಬಿಟ್ಟಾಗ ನನಗೆ ಅದು ಇಷ್ಟವಾಗಲಿಲ್ಲ. ನನಗೆ ವಿಚಿತ್ರವೆನಿಸಿತು. ಏಕೆಂದರೆ ನಾನು ಕಷ್ಟಪಟ್ಟು ಕೆಲಸ ಮಾಡಿದ್ದೆ ಮತ್ತು ಮುಂದಿನ ಸರಣಿಗೆ ತಂಡದೊಂದಿಗೆ ಇರುತ್ತೇನೆ ಎಂದು ಭಾವಿಸಿದ್ದೆ ಆದರೆ ನನ್ನನ್ನು ತಂಡದಿಂದ ಕೈಬಿಡಲಾಯಿತು. ನನ್ನ ಕೈಯಲ್ಲಿ ಏನು ಸಾಧ್ಯವೋ ಅದನ್ನೇ ನಾನು ಮಾಡಬಹುದು. ದೂರುವುದರಿಂದ ಏನೂ ಸಿಗುವುದಿಲ್ಲ. ಹೀಗಾಗಿ ಮತ್ತೆ ಆಟಕ್ಕೆ ಮರಳುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ರಹಾನೆ ಹೇಳಿಕೊಂಡಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ರಹಾನೆ ರನ್ ಶಿಕಾರಿ

ರಹಾನೆ ಟೀಂ ಇಂಡಿಯಾದ ಭಾಗವಾಗಿಲ್ಲದಿದ್ದರೂ, ತಂಡವನ್ನು ಸೇರಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ರಹಾನೆ ಇಲ್ಲಿಯವರೆಗೆ ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕದ ಸಹಾಯದಿಂದ 437 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ, ಅಜಿಂಕ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು 9 ಪಂದ್ಯಗಳಲ್ಲಿ 469 ರನ್ ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Mon, 17 February 25