ಭಾರತ vs ಶ್ರೀಲಂಕಾ ಪಂದ್ಯವಲ್ಲ, ಅದೊಂದು ‘ನಾಟಕೀಯ ರಂಗಭೂಮಿ’!

India A vs Sri Lanka A: ನಾವು ಸಾಮಾನ್ಯವಾಗಿ ಐಪಿಎಲ್‌ನಲ್ಲಿ ನೋಡುವಷ್ಟು ಹೆಚ್ಚಿನ ಸಂಖ್ಯೆಯ ಕ್ಯಾಮೆರಾಗಳು ಕಿರಿಯರ ಸರಣಿಗಳಲ್ಲಿ ಇರುವುದಿಲ್ಲ. ಸೂಪರ್ ಓವರ್‌ನಲ್ಲಿ ಅಂಪೈರ್ ನೀಡಿದ ಆ 'ನೋ ಬಾಲ್' ತೀರ್ಪು ನಿಜಕ್ಕೂ ತೀವ್ರ ಚರ್ಚಾಸ್ಪದವಾಗಿತ್ತು. ಅದರಲ್ಲೂ ವಿಶೇಷವಾಗಿ, ಕತ್ತಲಾಗುತ್ತಿದ್ದ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಕ್ರೀಸ್‌ಗೆ ಬರಲು ಉದ್ದೇಶಪೂರ್ವಕವಾಗಿ ತಡ ಮಾಡಿದ ರೀತಿ, ಅವರು ಗೆಲ್ಲಲು ಮಾಡಿದ್ದ ಪಕ್ಕಾ 'ಮೈಂಡ್ ಗೇಮ್ಸ್' ಆಗಿತ್ತು ಎಂದು ಅಶ್ವಿನ್ ಹೇಳಿದ್ದಾರೆ.

ಭಾರತ vs ಶ್ರೀಲಂಕಾ ಪಂದ್ಯವಲ್ಲ, ಅದೊಂದು ನಾಟಕೀಯ ರಂಗಭೂಮಿ!
Ashwin - Team India
Image Credit source: Google

Updated on: Jun 16, 2026 | 10:51 AM

ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಒಂದು ಸ್ಮರಣೀಯ ಹಾಗೂ ವಿವಾದಾತ್ಮಕ ಅಧ್ಯಾಯವಾಗಿ ಉಳಿಯುವಂತಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯವು ಅಂತಿಮವಾಗಿ ಸೂಪರ್ ಓವರ್‌ಗೆ ತಲುಪಿದಾಗ, ಅಲ್ಲಿ ನಡೆದ ಘಟನೆಗಳು ಕೇವಲ ಕ್ರಿಕೆಟ್ ಆಟವಾಗಿ ಉಳಿಯದೆ, ಆಟಗಾರರ ನಡುವಿನ ಮಾನಸಿಕ ಯುದ್ಧವಾಗಿ ಮಾರ್ಪಟ್ಟಿತು. ಹೀಗಾಗಿಯೇ ಈ ಪಂದ್ಯವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ “ಅತ್ಯುತ್ತಮ ನಾಟಕೀಯ ರಂಗಭೂಮಿ” ಎಂದು ಬಣ್ಣಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರು ಈ ಮ್ಯಾಚ್​ ಅನ್ನು “ಅತ್ಯುತ್ತಮ ನಾಟಕೀಯ ರಂಗಭೂಮಿ” ಎಂದು ಕರೆಯಲು ಮುಖ್ಯ ಕಾರಣ ಪಂದ್ಯದ ವೇಳೆ ಕಂಡು ಬಂದ ಟ್ವಿಸ್ಟ್ ಹಾಗೂ ಅವ್ಯವಸ್ಥೆ.

ಏಕೆಂದರೆ ಈ ಪಂದ್ಯವು ಟೈ ಆಗಿ ಸೂಪರ್ ಓವರ್‌ಗೆ ತಲುಪಿದಾಗ ಉಭಯ ತಂಡಗಳಲ್ಲಿ ತೀವ್ರ ಒತ್ತಡವಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಮತ್ತು ವೀಕ್ಷಕರಿಗೆ ಇದು ಯಾವುದೇ ರೋಮಾಂಚಕ ನಾಟಕ ಅಥವಾ ಸಿನಿಮಾಗೆ ಕಮ್ಮಿ ಇರಲಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಅದರಲ್ಲೂ ಸೂಪರ್ ಓವರ್‌ನಲ್ಲಿ ಬಂದ ‘ನೋ ಬಾಲ್’ ತೀರ್ಪು ಪಂದ್ಯದ ಅತಿ ದೊಡ್ಡ ಟ್ವಿಸ್ಟ್ ಆಗಿತ್ತು. ಯಾವುದೇ ನಿಖರ ತಂತ್ರಜ್ಞಾನವಿಲ್ಲದೆ ಅಂಪೈರ್ ನೀಡಿದ ಈ ತೀರ್ಪು ನಾಟಕವೊಂದರ ವಿವಾದಾತ್ಮಕ ಸನ್ನಿವೇಶದಂತೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಎಂಬುದು ಅಶ್ವಿನ್ ಅವರ ಅಭಿಪ್ರಾಯ.

ಇನ್ನು ಕತ್ತಲಾಗುತ್ತಿದ್ದ ಸಂದರ್ಭವನ್ನು ಬಳಸಿಕೊಂಡು ಶ್ರೀಲಂಕಾ ಆಟಗಾರರು ಕ್ರೀಸ್‌ಗೆ ಬರಲು ತಡ ಮಾಡಿದ್ದು ಪಕ್ಕಾ ಚಿತ್ರಕಥೆಯ ವಿಲನ್ ತಂತ್ರಗಳಂತೆ ಕಾಣಿಸಿತು. ಇದು ಭಾರತೀಯ ಆಟಗಾರರಲ್ಲಿ ತೀವ್ರ ಹತಾಶೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿತು.

ಹಾಗೆಯೇ ಪಂದ್ಯದ ಕ್ಲೈಮ್ಯಾಕ್ಸ್‌ನಲ್ಲಿ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ವಿಶೇನ್ ಹಲಂಬಾಗೆ ಪರಸ್ಪರ ಮೈದಾನದಲ್ಲೇ ತಳ್ಳಾಡಿಕೊಂಡಿದ್ದು ಆಟದಲ್ಲಿದ್ದ ತೀವ್ರ ಮಾನಸಿಕ ಒತ್ತಡ ಮತ್ತು ಭಾವನೆಗಳ ಸ್ಫೋಟವನ್ನು ತೋರಿಸಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಕ್ರೀಡಾ ಸ್ಫೂರ್ತಿಯ ದೃಷ್ಟಿಯಿಂದ ಇದು ಸರಿಯಲ್ಲದಿದ್ದರೂ, ವೀಕ್ಷಕರಿಗೆ ಮತ್ತು ಕ್ರಿಕೆಟ್ ಪ್ರಿಯರಿಗೆ ಇದೊಂದು ಮರೆಯಲಾಗದ, ಅತ್ಯಂತ ರೋಮಾಂಚಕ “ನಾಟಕೀಯ ಪಂದ್ಯವಾಗಿತ್ತು” ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!

ಶ್ರೀಲಂಕಾ ತಂಡಕ್ಕೆ ಸೂಪರ್ ಗೆಲುವು:

ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 49.2 ಓವರ್​ಗಳಲ್ಲಿ 265 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಎ ತಂಡ 50 ಓವರ್​ಗಳಲ್ಲಿ 265 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡರು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಶ್ರೀಲಂಕಾ 16 ರನ್ ಬಾರಿಸಿದರು. 17 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 6 ಎಸೆತಗಳಲ್ಲಿ ಕೇವಲ 9 ರನ್​ಗಳಿಸಿ 7 ರನ್​ಗಳಿಂದ ಸೋಲೊಪ್ಪಿಕೊಂಡಿತು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us