
IPL 2026: ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 23 ರನ್ಗಳ ಸೋಲು ಕಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ಅಕ್ಷರ್ ಪಟೇಲ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಪಂದ್ಯದ ನಂತರದ ಮಾತನಾಡಿದ ಅವರು, ಸೋಲಿಗೆ ಮುಖ್ಯ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.
ಅಕ್ಷರ್ ಪಟೇಲ್ ಅವರ ಪ್ರಕಾರ, ಈ ಪಂದ್ಯದ ಫಲಿತಾಂಶವನ್ನು ಬದಲಿಸಿದ್ದು ತಂಡದ ಕಳಪೆ ಫೀಲ್ಡಿಂಗ್. “ನನ್ನ ಪ್ರಕಾರ ಫೀಲ್ಡಿಂಗ್ನಲ್ಲಿನ ವ್ಯತ್ಯಾಸವೇ ಪಂದ್ಯದ ಹಣೆಬರಹ ನಿರ್ಧರಿಸಿತು. ನಾವು ಒಂದು ಅಥವಾ ಎರಡು ಪ್ರಮುಖ ಕ್ಯಾಚ್ಗಳನ್ನು ಕೈಬಿಟ್ಟೆವು. ಆ ತಪ್ಪುಗಳನ್ನು ಮಾಡದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೇಸಿಂಗ್ ಬಗ್ಗೆ ಮಾತನಾಡಿದ ಅಕ್ಷರ್ ಪಟೇಲ್, ತಂಡಕ್ಕೆ ಉತ್ತಮ ಆರಂಭ ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. “ಪವರ್ಪ್ಲೇ ನಂತರ ನಾವು ಸತತವಾಗಿ ಎರಡು-ಮೂರು ವಿಕೆಟ್ ಕಳೆದುಕೊಂಡೆವು. ಇದು ನಮ್ಮ ಬ್ಯಾಟಿಂಗ್ ಲಯವನ್ನು ಪೂರ್ತಿ ಹಾಳುಮಾಡಿತು. ಬ್ಯಾಟರ್ಗಳು ಶ್ರಮವಹಿಸಿದರೂ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು,” ಎಂದಿದ್ದಾರೆ.
ಸೋಲಿನ ನಡುವೆಯೂ ಅಕ್ಷರ್ ತಮ್ಮ ಬೌಲರ್ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ಸಿಎಸ್ಕೆ ಬ್ಯಾಟರ್ಗಳು ಕ್ರೀಸ್ಗೆ ಭದ್ರವಾಗಿ ಅಂಟಿಕೊಂಡಿದ್ದರೂ, ಅವರನ್ನು 212 ರನ್ಗಳಿಗೆ ನಿಯಂತ್ರಿಸಿದ್ದು ದೊಡ್ಡ ವಿಷಯ. ಬೌಲರ್ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದೊಂದು ಅತ್ಯುತ್ತಮ ಬ್ಯಾಟಿಂಗ್ ಪಿಚ್ ಆಗಿತ್ತು. ಇದಾಗ್ಯೂ ನಮ್ಮ ಬೌಲರ್ಗಳನ್ನು ಎದುರಾಳಿಗಳನ್ನು 212 ರನ್ಗಳಿಗೆ ನಿಯಂತ್ರಿಸಿರುವುದು ಶ್ಲಾಘನೀಯ ” ಎಂದು ತಿಳಿಸಿದ್ದಾರೆ.
ಇನ್ನು ಪಿಚ್ ಬಗ್ಗೆ ಮಾತನಾಡುತ್ತಾ, “ಪಿಚ್ ನಿಧಾನಗತಿಯಾಯಿತು ಎಂದು ನನಗನ್ನಿಸುವುದಿಲ್ಲ. ಇಬ್ಬನಿ ಇದ್ದ ಕಾರಣ ಬೌಲಿಂಗ್ ಮಾಡುವುದು ಸಿಎಸ್ಕೆ ತಂಡಕ್ಕೆ ಸವಾಲಾಗಿತ್ತು. ಆದರೆ ಅವರು ಆ ಪರಿಸ್ಥಿತಿಯಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು,” ಎಂದು ಎದುರಾಳಿ ತಂಡದ ಬೌಲಿಂಗ್ ಅನ್ನು ಕೂಡ ಅಕ್ಷರ್ ಪಟೇಲ್ ಹೊಗಳಿದ್ದಾರೆ.
ಇದನ್ನೂ ಓದಿ: ಮೈದಾನಕ್ಕಿಳಿಯದಿದ್ದರೂ ನಿತೀಶ್ ರಾಣಾಗೆ ಬಿತ್ತು ಭಾರೀ ದಂಡ..!
ಒಟ್ಟಾರೆಯಾಗಿ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಫೀಲ್ಡಿಂಗ್ನಲ್ಲಿನ ತಪ್ಪುಗಳೇ ಸೋಲಿಗೆ ಮೂಲ ಕಾರಣ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.