
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುವ ಮೊದಲೇ ಭಾರತ ತಂಡಕ್ಕೆ (Team India) ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಗಾಯದಿಂದಾಗಿ ಟೀಂ ಇಂಡಿಯಾ ಈಗಾಗಲೇ ಇಬ್ಬರು ಆಟಗಾರರನ್ನು ಕಳೆದುಕೊಂಡಿದೆ. ಶ್ರೀಲಂಕಾಕ್ಕೆ ಆಗಮಿಸುವ ಮೊದಲೇ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಯುವ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಅವರನ್ನು ಪ್ರವಾಸದಿಂದ ಹೊರಗಿಡಲಾಗಿತ್ತು. ಇದೀಗ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಸ್ಪಿನ್-ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ( Washington Sundar) ಕೂಡ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ. ಅಂದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಸುಂದರ್ ಕೂಡ ಈ ಸರಣಿಯಿಂದ ಹೊರುಗಳಿಯಲಿದ್ದಾರೆ.
ವಾಷಿಂಗ್ಟನ್ ಸುಂದರ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಅವರನ್ನು ಮೊದಲ ಟೆಸ್ಟ್ನಿಂದ ಹೊರಗಿಟ್ಟು, ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮಾತ್ರ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೀಗ ಸುಂದರ್ ಎರಡನೇ ಟೆಸ್ಟ್ ವೇಳೆಗೆ ಫಿಟ್ ಆಗುವ ಸಾಧ್ಯತೆಗಳಿಲ್ಲ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ತಂಡದ ಆಡಳಿತ ಮಂಡಳಿ ಸುಂದರ್ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಇರಾದೆಯಲ್ಲಿಲ್ಲ. ಹೀಗಾಗಿ ಸುಂದರ್ಗೆ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಕೊಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಚೇತರಿಕೆಯ ಹಾದಿಯಲ್ಲಿರುವ ಸುಂದರ್ ಅವರನ್ನು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಆದರೆ, ಅವರನ್ನು ಎರಡನೇ ಟೆಸ್ಟ್ಗೆ ಆಯ್ಕೆ ಮಾಡಲಾಗಿದೆ. ಆದರೀಗ ಸುಂದರ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಲ್ಲದೆ ಸುಂದರ್ ಅವರನ್ನು ಇಷ್ಟು ಬೇಗ ತಂಡದಲ್ಲಿ ಆಡಿಸಲು ಬಿಸಿಸಿಐಗೆ ಇಷ್ಟವಿಲ್ಲ. ಏಕೆಂದರೆ ಈ ಹಿಂದೆ ಇಂಜುರಿಯಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದ ಆಟಗಾರರು ಕೇವಲ ಒಂದೆರಡು ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ಇದು ಬಿಸಿಸಿಐಗೆ ಸಾಕಷ್ಟು ಮುಜುಗರವನ್ನುಂಟು ಮಾಡಿತ್ತು.
IND vs SL: ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ
ಈ ಹಿನ್ನೆಲೆಯಲ್ಲಿ, ಸುಂದರ್ ಪೂರ್ಣ ಫಿಟ್ನೆಸ್ ಮರಳಿ ಪಡೆದು ಮೈದಾನಕ್ಕೆ ಇಳಿಯುವ ಮೊದಲು ಅವರನ್ನು ಎಲ್ಲಾ ರೀತಿಯಲ್ಲೂ ಪರೀಕ್ಷಿಸಲು ಬಿಸಿಸಿಐ ಚಿಂತಿಸಿದೆ. ಇದರಿಂದ ಸುಂದರ ತಂಡಕ್ಕೆ ಮರಳಿದ ತಕ್ಷಣ ಗಾಯಗೊಳ್ಳುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಹಾಗೆಯೇ ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ವಿರುದ್ಧ ಎದ್ದಿರುವ ಅನುಮಾನಗಳನ್ನು ಶಮನಗೊಳಿಸುವುದು ಬಿಸಿಸಿಐ ಯೋಜನೆಯಾಗಿದೆ.