AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದೇ ದಿನದಲ್ಲಿ ಯಾರೂ ಅಂಬಾನಿ ಅಥವಾ ಮೋದಿಯಾಗಲು ಸಾಧ್ಯವಿಲ್ಲ’; ಕೊನೆಗೂ ಮೌನ ಮುರಿದ ಗಂಗೂಲಿ

Sourav Ganguly: ನೀವು ಶಾಶ್ವತವಾಗಿ ಆಟಗಾರರಾಗಿರಲು ಸಾಧ್ಯವಿಲ್ಲ. ಹಾಗೆಯೇ ಶಾಶ್ವತವಾಗಿ ಅಡ್ಮಿನಿಸ್ಟ್ರೇಟರ್ ಆಗಿ ಇರುವುದಕ್ಕೂ ಸಾಧ್ಯವಿಲ್ಲ. ಆದರೆ ನಾನು ಈ ಎರಡನ್ನೂ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

‘ಒಂದೇ ದಿನದಲ್ಲಿ ಯಾರೂ ಅಂಬಾನಿ ಅಥವಾ ಮೋದಿಯಾಗಲು ಸಾಧ್ಯವಿಲ್ಲ’; ಕೊನೆಗೂ ಮೌನ ಮುರಿದ ಗಂಗೂಲಿ
ಸೌರವ್ ಗಂಗೂಲಿ
TV9 Web
| Edited By: |

Updated on:Oct 13, 2022 | 5:38 PM

Share

ಇಷ್ಟು ದಿನ ಬಿಸಿಸಿಐ (BCCI) ಅಧ್ಯಕ್ಷ ಹುದ್ದೆಯಲ್ಲಿ ಕುಳಿತು ದಾದಾಗಿರಿ ನಡೆಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೊನೆಗೂ ಈ ಹುದ್ದೆಗೆ ವಿದಾಯ ಹೇಳುವ ಸಮಯ ಸನಿಹವಾಗಿದೆ. ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಇನ್ನಿಂಗ್ಸ್‌ ಆಡಲು ಸಾಕಷ್ಟು ಕಸರತ್ತು ಮಾಡಿದ ಹೊರತಾಗಿಯೂ ಗಂಗೂಲಿಗೆ ಈ ಅವಕಾಶ ಕೈತಪ್ಪಿದೆ. ಕೆಲವು ದಿನಗಳಿಂದ ಬಿಸಿಸಿಐ ಹಾಗೂ ಗಂಗೂಲಿ ಬಗ್ಗೆ ಎದ್ದಿರುವ ವದಂತಿ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅಂತಿಮವಾಗಿ ಮೌನಮುರಿದಿದ್ದಾರೆ. ಇದರೊಂದಿಗೆ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ (Roger Binny) ಯಾವುದೇ ವಿರೋಧವಿಲ್ಲದೆ ಬಿಸಿಸಿಐ ನೂತನ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ.

ಬಿಸಿಸಿಐ ನೂತನ ಅಧ್ಯಕ್ಷರ ಕುರಿತ ಊಹಾಪೋಹಗಳ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರೇ ಸ್ಪಷ್ಟನೇ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಗಂಗೂಲಿ, ನಾನು ಅಡ್ಮಿನಿಸ್ಟ್ರೇಟರ್ ಆಗಿ ಸುದೀರ್ಘ ಇನ್ನಿಂಗ್ಸ್ ಆಡಿದ್ದು, ಈಗ ಬೇರೆ ಕೆಲಸಗಳತ್ತ ಗಮನ ಹರಿಸುವ ಸಮಯ ಬಂದಿದೆ. ನೀವು ಶಾಶ್ವತವಾಗಿ ಆಟಗಾರರಾಗಿರಲು ಸಾಧ್ಯವಿಲ್ಲ. ಹಾಗೆಯೇ ಶಾಶ್ವತವಾಗಿ ಅಡ್ಮಿನಿಸ್ಟ್ರೇಟರ್ ಆಗಿ ಇರುವುದಕ್ಕೂ ಸಾಧ್ಯವಿಲ್ಲ. ಆದರೆ ನಾನು ಈ ಎರಡನ್ನೂ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ನಾನು ದೀರ್ಘ ಕಾಲದಿಂದ ಆಡಳಿತದ ಚುಕ್ಕಾಣಿ ಹಿಡಿದಿದ್ದೆ. ಆದರೆ, ಈಗ ನಾನು ನನ್ನ ಜೀವನದಲ್ಲಿ ಬೇರೆಡೆ ಗಮನಹರಿಸುವ ಉದ್ದೇಶ ಹೊಂದಿದ್ದೇನೆ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

15 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಡಿದ ಸಮಯ ನನ್ನ ಜೀವನದಲ್ಲಿ ಅತ್ಯುತ್ತಮವಾಗಿತ್ತು ಎಂದು ಹೇಳಿಕೊಂಡಿರುವ ಗಂಗೂಲಿ, ನಾನು 15 ವರ್ಷಗಳ ಕಾಲ ಭಾರತ ಪರ ಆಡಿದ್ದು, ನನ್ನ ಜೀವನದ ಅತ್ಯುತ್ತಮ ಗಳಿಕೆಯಾಗಿತ್ತು. ಆ ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲೂ ಕಾರ್ಯನಿರ್ವಹಿಸಿದ ನಾನು ನಂತರ ಬಿಸಿಸಿಐನ ಚುಕ್ಕಾಣಿಯನ್ನೂ ಹಿಡಿದಿದ್ದೆ. ಈಗ ನನ್ನ ಗಮನವನ್ನು ಬೇರೆ ಕೆಲಸದ ಮೇಲೆ ಹರಿಸಲು ಮುಂದಾಗಿದ್ದೇನೆ ಎಂದಿದ್ದಾರೆ.

ಅಧ್ಯಕ್ಷರಾಗಿ ರೋಜರ್ ಬನ್ನಿ..

ಏನಾದರೂ ದೊಡ್ಡ ಸಾಧನೆ ಮಾಡಬೇಕೆಂದರೆ ಮೊದಲು ಸಾಕಷ್ಟು ಶ್ರಮವಹಿಸಬೇಕು ಎಂದಿರುವ ಗಂಗೂಲಿ, “ನನಗೆ ಇತಿಹಾಸದಲ್ಲಿ ನಂಬಿಕೆ ಇಲ್ಲ. ಅಲ್ಲದೆ ಪೂರ್ವ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಪ್ರತಿಭೆಗಳ ಕೊರತೆಯಿದೆ ಎಂಬುದು ನನಗೆ ತಿಳಿದಿದೆ. ಒಂದೇ ದಿನದಲ್ಲಿ ಯಾರೂ ಅಂಬಾನಿ ಅಥವಾ ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ಅವರಂತೆ ಆಗಲು ನೀವು ವರ್ಷಗಟ್ಟಲೆ ಕಷ್ಟಪಡಬೇಕು ಎಂದಿದ್ದಾರೆ.

ಬಿಸಿಸಿಐ ಸಂವಿಧಾನದ ತಿದ್ದುಪಡಿ ನಂತರ ಸೌರವ್ ಗಂಗೂಲಿ ಎರಡನೇ ಇನ್ನಿಂಗ್ಸ್ ಅಧ್ಯಕ್ಷರಾಗುತ್ತಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಸೌರವ್ ಗಂಗೂಲಿ ಎರಡನೇ ಬಾರಿಗೆ ಬಿಸಿಸಿಐ ಅಧ್ಯಕ್ಷರಾಗಲು ರಾಜ್ಯ ಮಂಡಳಿಗಳು ಅಕ್ಷೇಪ ಹೊರಹಾಕಿದಲ್ಲದೆ, ಹಲವು ಹಿರಿಯು ಕ್ರಿಕೆಟಿಗರು ಸಹ ಗಂಗೂಲಿ ವಿರುದ್ಧ ಮಾತನಾಡಲಾರಂಭಿಸಿದ್ದರು. ಇದಲ್ಲದೆ, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮಂಡಳಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಬಿಸಿಸಿಐ ಪದಾಧಿಕಾರಿಗಳ ಸಭೆಯ ನಂತರ ಸೌರವ್ ಗಂಗೂಲಿ ಇನ್ನು ಮುಂದೆ ಬಿಸಿಸಿಐ ಅಧ್ಯಕ್ಷರಾಗುವುದಿಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ನಾಮಪತ್ರ ಸಲ್ಲಿಸಿದ್ದಾರೆ. ರೋಜರ್ ಬಿನ್ನಿಗೆ ಸವಾಲು ಹಾಕಲು ಇನ್ನೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಜರ್ ಬಿನ್ನಿ ಬಿಸಿಸಿಐ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಹಾಗೆಯೇ ಬಿಸಿಸಿಐ ಕಾರ್ಯದರ್ಶಿ ಹುದ್ದೆಯಲ್ಲಿ ಜಯ್ ಶಾ ಮುಂದುವರೆಯುವುದು ಸಹ ಖಾತ್ರಿಯಾಗಿದೆ.

Published On - 5:38 pm, Thu, 13 October 22