
ಭಾರತ ತಂಡದ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಬಯಸಿದರೆ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಭಾಗವಹಿಸಬೇಕು ಎಂದು ಬಿಸಿಸಿಐ ಖಡಕ್ ಸೂಚನೆ ನೀಡಿದೆ.
ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆದಿದ್ದಾರೆ. ಅಲ್ಲದೆ ಮುಂಬರುವ ಏಕದಿನ ವಿಶ್ವಕಪ್ವರೆಗೆ ಭಾರತ ತಂಡವನ್ನು ಪ್ರತಿನಿಧಿಸುವ ಇರಾದೆಯಲ್ಲಿದ್ದಾರೆ.
ಆದರೆ ಏಕದಿನ ವಿಶ್ವಕಪ್ಗೂ ಮುನ್ನ ಭಾರತ ತಂಡ ಕೆಲವೇ ಕೆಲವು ಏಕದಿನ ಸರಣಿಗಳನ್ನು ಮಾತ್ರ ಆಡಲಿದೆ. ಹೀಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ದೇಶೀಯ ಟೂರ್ನಿಯಲ್ಲಿ ಆಡಲೇಬೇಕು ಎಂದು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬಿಸಿಸಿಐ ತಿಳಿಸಿದೆ.
ಟೀಮ್ ಇಂಡಿಯಾ ಪರ ಆಡಬೇಕಿದ್ದರೆ ಫಿಟ್ನೆಸ್ ಮುಖ್ಯವಾಗುತ್ತದೆ. ಸದ್ಯ ಕೊಹ್ಲಿ ಹಾಗೂ ರೋಹಿತ್ ಕೇವಲ ಏಕದಿನ ಸ್ವರೂಪದಲ್ಲಿ ಮಾತ್ರ ಮುಂದುವರೆದಿದ್ದಾರೆ. ಅವರು ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಹಾಗೂ ಫಾರ್ಮ್ ಅನ್ನು ಉಳಿಸಿಕೊಳ್ಳಲು ದೇಶೀಯ ಟೂರ್ನಿ ಆಡಬೇಕಾಗುತ್ತದೆ. ಹೀಗಾಗಿ ಇಬ್ಬರಿಗೂ ಮುಂಬರುವ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಬಿಸಿಸಿಐ ನೀಡಿರುವ ಈ ಸೂಚನೆ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ 15 ವರ್ಷಗಳ ಬಳಿಕ ಮತ್ತೊಮ್ಮೆ ವಿಜಯ ಹಝಾರೆ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು. ಅವರು ಕೊನೆಯ ಬಾರಿಗೆ ದೆಹಲಿ ಪರ ವಿಜಯ ಹಝಾರೆ ಟೂರ್ನಿ ಆಡಿದ್ದು ಫೆಬ್ರವರಿ 18, 2010 ರಂದು.
ಇನ್ನು ರೋಹಿತ್ ಶರ್ಮಾ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿಯಲ್ಲಿ 2018 ರಲ್ಲಿ ಕಾಣಿಸಿಕೊಂಡಿದ್ದರು. ಅಂದು ಮುಂಬೈ ಪರ ಕಣಕ್ಕಿಳಿದಿದ್ದ ಹಿಟ್ಮ್ಯಾನ್ ಕಳೆದ 7 ವರ್ಷಗಳಿಂದ ದೇಶೀಯ ಏಕದಿನ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಬಿಸಿಸಿಐ ಕಡೆಯಿಂದ ಖಡಕ್ ಸೂಚನೆ ಸಿಕ್ಕ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮತ್ತೆ ದೇಶೀಯ ಟೂರ್ನಿಗೆ ಮರಳುವುದು ಬಹುತೇಕ ಖಚಿತ ಎನ್ನಬಹುದು.
ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಟೀಮ್ ಇಂಡಿಯಾ ಆಟಗಾರ ಔಟ್
ದೇಶೀಯ ಅಂಗಳದ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿಯು ಡಿಸೆಂಬರ್ 24 ರಿಂದ ಶುರುವಾಗಲಿದೆ. 32 ತಂಡಗಳ ನಡುವಣ ಈ ಕದನದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಹಾಗೂ ರೋಹಿತ್ ಶರ್ಮಾ ಮುಂಬೈ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.