ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್!

Sri Lanka A vs India A: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 277 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 48.5 ಓವರ್​ಗಳಲ್ಲಿ 269 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡ 8 ರನ್​ಗಳ ರೋಚಕ ಜಯ ಸಾಧಿಸಿದೆ.

ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್!
Priyansh Arya - Niroshan Dickwella
Image Credit source: Sonyliv.com

Updated on: Jun 10, 2026 | 12:20 PM

ಕ್ರಿಕೆಟ್ ಮೈದಾನದಲ್ಲಿ ರನೌಟ್​ಗಳು ಸಾಮಾನ್ಯ. ಆದರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟ್ ಆದ ರೀತಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಕೆಟ್ ಕೀಪರ್ ಕಾಲಿನ ಕೆಳಗೆ ಬ್ಯಾಟ್ ಸಿಲುಕಿಕೊಂಡ ಕಾರಣ, ಕ್ರೀಸ್ ತಲುಪಲು ಸಾಧ್ಯವಾಗದೆ ಅವರು ವಿಚಿತ್ರವಾಗಿ ವಿಕೆಟ್ ಕೈಚೆಲ್ಲಿದ್ದಾರೆ.

ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಈ ಅನಿರೀಕ್ಷಿತ ಹಾಗೂ ವಿವಾದಾತ್ಮಕ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಪ್ರಿಯಾಂಶ್ ಆರ್ಯ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

ಭಾರತ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್-ಆಫ್ ಕಡೆಗೆ ಚೆಂಡನ್ನು ಬಾರಿಸಿ, ಎರಡನೇ ರನ್ ಗಳಿಸಲು ಪ್ರಿಯಾಂಶ್ ಆರ್ಯ ಅವರಿಗೆ ಕರೆ ನೀಡಿದರು. ಆದರೆ ಆರ್ಯ ಆರಂಭದಲ್ಲಿ ಓಡಲು ಹಿಂಜರಿದರು. ಅಷ್ಟರಲ್ಲಾಗಲೇ ಗಾಯಕ್ವಾಡ್ ಪಿಚ್‌ನ ಮಧ್ಯಭಾಗವನ್ನು ದಾಟಿ ವೇಗವಾಗಿ ಧಾವಿಸಿ ಬಂದಿದ್ದರು.

ಈ ಗೊಂದಲದಿಂದಾಗಿ ಇಬ್ಬರೂ ಬ್ಯಾಟರ್‌ಗಳು ರನ್ ಔಟ್‌ನಿಂದ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ಒಂದೇ ತುದಿಯ (ಸ್ಟ್ರೈಕರ್ ಎಂಡ್) ಕ್ರೀಸ್‌ನತ್ತ ಓಡಿದರು.

ವಿಚಿತ್ರ ರನೌಟ್!

ಸ್ಟ್ರೈಕರ್ ಎಂಡ್​ನಲ್ಲಿದ್ದ ಪ್ರಿಯಾಂಶ್ ಆರ್ಯ ತಿರುಗಿ ನಿಂತು ಕ್ರೀಸ್​ಗೆ ಬ್ಯಾಟ್ ಹಿಡಲು ಮುಂದಾದಾಗ, ಚೆಂಡನ್ನು ಹಿಡಿಯಲು ನಿಂತಿದ್ದ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಕಾಲಿನಲ್ಲಿ ಬ್ಯಾಟ್ ಅನ್ನು ಲಾಕ್ ಮಾಡಿದರು.

ಡಿಕ್ವೆಲ್ಲಾ ಕಾಲು ಅಡ್ಡ ಬಂದಿದ್ದರಿಂದ ಆರ್ಯ ಅವರಿಗೆ ಬ್ಯಾಟನ್ನು ಕ್ರೀಸ್‌ನ ಗೆರೆಯ ಒಳಗೆ ಸ್ಲೈಡ್ ಮಾಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ರುತುರಾಜ್ ಗಾಯಕ್ವಾಡ್ ಮೊದಲಿಗನಾಗಿ ಕ್ರೀಸ್‌ನೊಳಗೆ ಬ್ಯಾಟ್ ಇಟ್ಟು ಸುರಕ್ಷಿತರಾದರು.  ತಕ್ಷಣವೇ ಎಚ್ಚೆತ್ತ ವಿಕೆಟ್ ಕೀಪರ್ ಡಿಕ್ವೆಲ್ಲಾ, ಚೆಂಡನ್ನು ನಾನ್-ಸ್ಟ್ರೈಕರ್ ತುದಿಗೆ ಎಸೆದು ಸ್ಟಂಪ್ ಉರುಳಿಸಿದರು.

ಥರ್ಡ್ ಅಂಪೈರ್ ತೀರ್ಪು ಮತ್ತು ವಿವಾದ:

ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿದಾಗ, ಇಬ್ಬರೂ ಬ್ಯಾಟರ್‌ಗಳು ಒಂದೇ ಕ್ರೀಸ್‌ನತ್ತ ಓಡಿ ಬಂದಾಗ ಗಾಯಕ್ವಾಡ್ ಮೊದಲು ಗೆರೆ ದಾಟಿದ್ದು ಸ್ಪಷ್ಟವಾಗಿ ತಿಳಿಯಿತು. ಹೀಗಾಗಿ ನಿಯಮದ ಪ್ರಕಾರ ಪ್ರಿಯಾಂಶ್ ಆರ್ಯ (32 ರನ್) ಔಟ್ ಎಂದು ಘೋಷಿಸಲಾಯಿತು. ಆದರೆ ಈ ತೀರ್ಪು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏಕೆಂದರೆ ವಿಕೆಟ್ ಕೀಪರ್ ಕಾಲು ಅಡ್ಡ ಇಟ್ಟು ಬ್ಯಾಟನ್ನು ತಡೆದಿದ್ದರಿಂದ ಇದು ಕ್ರಿಕೆಟ್‌ನ ‘ಎಂಸಿಸಿ ನಿಯಮ 37’ ಅಡಿಯಲ್ಲಿ ಬರುತ್ತದೆ ಎಂದು ಅನೇಕ ಅಭಿಮಾನಿಗಳು ವಾದಿಸಿದ್ದಾರೆ. ಅಂದರೆ ಫೀಲ್ಡಿಂಗ್​ ಅಥವಾ ಬ್ಯಾಟಿಂಗ್​ಗೆ ಅಡ್ಡಿಪಡಿಸಿದ ನಿಯಮದಡಿಯಲ್ಲಿ ಇದನ್ನು ನಾಟೌಟ್​ ಎಂದು ಪರಿಗಣಿಸಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿ… ‘ಲಾರ್ಡ್ಸ್’ ಪಿಚ್​ಗೆ ಡಿಮೆರಿಟ್ ಪಾಯಿಂಟ್!

ಮೇಲ್ನೋಟಕ್ಕೆ  ಡಿಕ್ವೆಲ್ಲಾ ಉದ್ದೇಶಪೂರ್ವಕವಾಗಿ ಕಾಲು ಇಟ್ಟಿರಲಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅಂಪೈರ್‌ಗಳು ಪರಿಗಣಿಸಿದ್ದರಿಂದ ಪ್ರಿಯಾಂಶ್ ಆರ್ಯ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಈ ವಿಚಿತ್ರ ಗೊಂದಲದ ಹೊರತಾಗಿಯೂ ಭಾರತ ‘ಎ’ ತಂಡ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ.

 

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us