
ಪುದುಚೇರಿಯಲ್ಲಿ ಶುಕ್ರವಾರ ನಡೆದ ದೇವಧರ್ ಟ್ರೋಫಿಯ ((Deodhar Trophy 2023)) ರೋಚಕ ಪಂದ್ಯದಲ್ಲಿ ಪಶ್ಚಿಮ ವಲಯ ತಂಡ, ಕೇಂದ್ರ ವಲಯ (Central Zone vs West Zone) ತಂಡವನ್ನು 1 ವಿಕೆಟ್ಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇಂದ್ರ ವಲಯ ತಂಡ ನಿಗದಿತ 50 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 243 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ತಂಡ ಸಾಕಷ್ಟು ಏರಿಳಿತಗಳ ನಡುವೆ ಕೊನೆಯ ಓವರ್ನಲ್ಲಿ ಗೆಲುವಿನ ನಗೆ ಬೀರಿತು. ತಂಡದ ಪರ ಕೊನೆಯ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ಅತಿತ್ ಸೇಠ್ (Atit Sheth) ಈ ಪಂದ್ಯದ ಗೆಲುವಿನ ಹೀರೋ ಎನಿಸಿಕೊಂಡರೆ, ಆಲ್ರೌಂಡರ್ ರಾಜವರ್ಧನ್ ಹಂಗೇರ್ಗೆಕರ್ (Rajvardhan Hangargekar) ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನ ಮೂರನೇ ಎಸೆತದಲ್ಲಿ ಯಶ್ ಕೊಠಾರಿ ಔಟಾದರು. ಶಿವಂ ಚೌಧರಿ ಕೂಡ ತಮ್ಮ ಇನ್ನಿಂಗ್ಸ್ ಅನ್ನು ಒಂದು ರನ್ಗಿಂತ ಹೆಚ್ಚು ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇದಾದ ನಂತರ ಯಶ್ ದುಬೆ ಮತ್ತು ಉಪೇಂದ್ರ ಯಾದವ್ ತಂಡದ ಇನ್ನಿಂಗ್ಸ್ ನಿಭಾಯಿಸಲು ಯತ್ನಿಸಿದರು. ಈ ಹಂತದಲ್ಲಿ ಅರ್ಧಶತಕ ವಂಚಿತರಾದ ಯಶ್ ದುಬೆ 81 ಎಸೆತಗಳ ನಾಲ್ಕು ಬೌಂಡರಿ ಸಹಿತ 49 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಾಯಕ ವೆಂಕಟೇಶ್ ಅಯ್ಯರ್ ಕೂಡ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 43 ರನ್ಗಳ ಕೊಡುಗೆ ನೀಡಿದರು.
Deodhar Trophy 2023: ದೇವಧರ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಮಯಾಂಕ್ ಪಡೆ..!
ಈ ಇಬ್ಬರ ಬಳಿಕ ಜೊತೆಯಾದ ವೇಗಿ ಶಿವಂ ಮಾವಿ ಹಾಗೂ ಕರ್ಣ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಬಿರುಸಿನ ಇನ್ನಿಂಗ್ಸ್ ಆಡಿದ ಮಾವಿ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 47 ರನ್ ಸಿಡಿಸಿದರು. ಮತ್ತೊಂದೆಡೆ ಕರ್ಣ್ ಶರ್ಮಾ ಕೂಡ 46 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 44 ರನ್ಗಳ ಕೊಡುಗೆ ನೀಡಿದರು.
244 ರನ್ಗಳ ಗುರಿ ಬೆನ್ನತ್ತಿದ ಪಶ್ಚಿಮ ವಲಯ ತಂಡಕ್ಕೆ ಹಾರ್ವಿಕ್ ದೇಸಾಯಿ ಮತ್ತು ಪ್ರಿಯಾಂಕ್ ಪಾಂಚಾಲ್ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್ಗೆ 77 ರನ್ ಜೊತೆಯಾಟವಾಡಿದರು. ನಾಯಕ ಪಾಂಚಾಲ್ 36 ರನ್ ಗಳಿಸಿ ಔಟಾದರೆ, ಆ ಬಳಿಕ ರಾಹುಲ್ ತ್ರಿಪಾಠಿ 83 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಇದಾದ ಬಳಿಕ ಅಂಕಿತ್ ಬವಾನೆ ಖಾತೆ ತೆರೆಯದೆ ಔಟಾದರೆ, ಅರ್ಧಶತಕ ಸಿಡಿಸಿದ ಬೆನ್ನಲ್ಲೇ ದೇಸಾಯಿ ವಿಕೆಟ್ ಪತನವಾಯಿತು.
ಒಂದು ಸಮಯದಲ್ಲಿ ತಂಡದ ಸ್ಕೋರ್ 43.4 ಓವರ್ಗಳಲ್ಲಿ ಎಂಟು ವಿಕೆಟ್ಗಳನ್ನು ಕಳೆದುಕೊಂಡು 180 ರನ್ ಆಗಿತ್ತು. ಇಲ್ಲಿಂದ ಪಶ್ಚಿಮ ವಲಯ ಗೆಲುವಿಗೆ 38 ಎಸೆತಗಳಲ್ಲಿ 64 ರನ್ಗಳ ಅಗತ್ಯವಿತ್ತು. ಹೀಗಾಗಿ ಪಶ್ಚಿಮ ವಲಯದ ಸೋಲು ಖಚಿತ ಎನಿಸಿತು. ಆದರೆ ರಾಜವರ್ಧನ್ ವೇಗದ ಇನ್ನಿಂಗ್ಸ್ ಆಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅವರೊಂದಿಗೆ ಜೊತೆಯಾದ ಅತಿತ್ ಸೇಠ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ತಂಡವನ್ನು 49. 4ನೇ ಓವರ್ನಲ್ಲಿ ಗೆಲುವಿನ ದಡ ಸೇರಿಸಿದರು.
WHAT. A. MATCH!
West Zone emerge victorious in a nail-biter courtesy of Atit Sheth's unbeaten fifty ??
Scorecard – https://t.co/8p7APadyl2#DeodharTrophy | #CZvWZ pic.twitter.com/C9I6yfzJQs
— BCCI Domestic (@BCCIdomestic) July 28, 2023
ಅತಿತ್ ಸೇಠ್ 53 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ ಅಜೇಯ 53 ರನ್ ಬಾರಿಸಿದರು. ಆದರೆ ರಾಜವರ್ಧನ್ ನಿಜವಾದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಕೊನೆಯ ಓವರ್ಗಳಲ್ಲಿ ಬಿರುಗಾಳಿ ಎಬ್ಬಿಸಿದ ಈ ಆಟಗಾರ 12 ಎಸೆತಗಳಲ್ಲಿ 24 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಾಜವರ್ಧನ್ ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಕೂಡ ಸೇರಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ