ವೈಭವ್ ವಿಷಯದಲ್ಲಿ ಎಡವಿತೇ ಟೀಮ್ ಇಂಡಿಯಾ? ದಿನೇಶ್ ಕಾರ್ತಿಕ್ ಕಿಡಿ!

Vaibhav Sooryavanshi: 15ನೇ ವಯಸ್ಸಿಗೆ ಪಾದಾರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದ ವೈಭವ್ ಸೂರ್ಯವಂಶಿಯ ಮೊದಲ ಸರಣಿ ನಿರಾಸೆಯೊಂದಿಗೆ ಕೊನೆಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ತಪ್ಪು ನಿರ್ಧಾರಗಳು ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್. 

ವೈಭವ್ ವಿಷಯದಲ್ಲಿ ಎಡವಿತೇ ಟೀಮ್ ಇಂಡಿಯಾ? ದಿನೇಶ್ ಕಾರ್ತಿಕ್ ಕಿಡಿ!
Dinesh Karthik
Image Credit source: Skysports

Updated on: Jul 15, 2026 | 2:00 PM

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಪಾದಾರ್ಪಣೆಯ ನಿರ್ವಹಣೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದು, “ಅವರು ಸಂಪೂರ್ಣವಾಗಿ ತಪ್ಪು ದಾರಿ ತುಳಿದಿದ್ದಾರೆ” ಎಂದು ಹೇಳಿದ್ದಾರೆ.

ಡಿಕೆ ಆಕ್ರೋಶ:

ಸ್ಕೈ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿದ ದಿನೇಶ್ ಕಾರ್ತಿಕ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವಿನ ಸಮನ್ವಯದ ಕೊರತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಈ ಸಮನ್ವಯ ಕೊರತೆಯಿಂದಾಗಿ ವೈಭವ್ ಸೂರ್ಯವಂಶಿಯನ್ನು ಪಾದಾರ್ಪಣೆಯ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಅವರಂತಹ ಕಿರಿಯ ಆಟಗಾರನನ್ನು ಪರೀಕ್ಷಿಸಲು ಇಂಗ್ಲೆಂಡ್‌ನ ಬಲಿಷ್ಠ ವೇಗಿಗಳಿಗಿಂತ, ಐರ್ಲೆಂಡ್ ಸರಣಿ ಅತ್ಯಂತ ಸೂಕ್ತವಾಗಿತ್ತು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಸೀನಿಯರ್ ಮತ್ತು ಜೂನಿಯರ್ ಆಟಗಾರರನ್ನು ರೊಟೇಟ್ ಮಾಡುವ ವಿಷಯದಲ್ಲಿ ತಂಡದಲ್ಲಿ ಯಾವುದೇ ಸ್ಪಷ್ಟ ಮಾರ್ಗದರ್ಶಿ ಸೂಚಿಗಳಿಲ್ಲ ಎಂಬುದು ಸಾಬೀತಾಗಿದೆ.

ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ಬಳಿಕ ಕೈಬಿಟ್ಟು ವೈಭವ್‌ಗೆ ಅವಕಾಶ ನೀಡಲಾಯಿತು. ಆದರೆ, ವೈಭವ್ ಕೂಡ ಮೂರು ಪಂದ್ಯಗಳಲ್ಲಿ ಮಿಂಚದಿದ್ದಾಗ ಅಂತಿಮ ಟಿ20 ಪಂದ್ಯದಿಂದ ಅವರನ್ನೂ ಹೊರಗಿಡಲಾಯಿತು. ಇದು ಆಟಗಾರರಲ್ಲಿ ಅಭದ್ರತೆಯನ್ನು ಉಂಟುಮಾಡುತ್ತದೆ ಎಂದು ಡಿಕೆ ಆತಂಕ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ನಡುವಿನ ಗೊಂದಲ:

ಕೋಚ್ ಮತ್ತು ಆಯ್ಕೆಗಾರರ ನಡುವಿನ ಭಿನ್ನ ಆಲೋಚನೆಗಳೇ ಈ ಎಡವಟ್ಟಿಗೆ ಕಾರಣ ಎಂದು ದಿನೇಶ್ ಕಾರ್ತಿಕ್ ವಿಶ್ಲೇಷಿಸಿದ್ದಾರೆ.

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಬಯಸುತ್ತಿದ್ದಾರೆ.

ಇದೇ ವೇಳೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಕ್ಷಣದ ಸರಣಿ ಗೆಲುವುಗಳ ಮೇಲೆ ಕಣ್ಣಿಟ್ಟಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಒತ್ತಡದಲ್ಲಿದ್ದಾರೆ.

ಈ ಇಬ್ಬರ ವಿಭಿನ್ನ ಗುರಿಗಳಿಂದಾಗಿ ತಂಡದ ಒಳಗಿನ ವಾತಾವರಣದ ಮೇಲೆ ಪರಿಣಾಮ ಬೀರಿದೆ. ಇದರ ಫಲವಾಗಿಯೇ ಭಾರತ ತಂಡವು ಈ ಯುಕೆ ಪ್ರವಾಸದಲ್ಲಿ ಒಂದೂ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ದಿನೇಶ್ ಕಾರ್ತಿಕ್ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಒಟ್ಟಾರೆಯಾಗಿ ಹೇಳುವುದಾದರೆ, 15 ವರ್ಷದ ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತ ಪ್ರತಿಭೆ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರ ಒತ್ತಡಕ್ಕೆ ಅವರನ್ನು ಸರಿಯಾದ ಯೋಜನೆ ಇಲ್ಲದೆ ತಳ್ಳಿರುವುದು ಮ್ಯಾನೇಜ್‌ಮೆಂಟ್‌ನ ಅಪಕ್ವತೆಯನ್ನು ತೋರಿಸುತ್ತದೆ ಎಂದು ದಿನೇಶ್ ಕಾರ್ತಿಕ್ ಅವರ ಮಾತುಗಳು ಸಾಬೀತುಪಡಿಸುತ್ತವೆ.

 

Follow Us