Arundhati Reddy: ಟಿ20 ವಿಶ್ವಕಪ್‌ನಲ್ಲಿ ನಿಯಮ ಉಲ್ಲಂಘಿಸಿದ ಅರುಂಧತಿ ರೆಡ್ಡಿಗೆ ಶಿಕ್ಷೆ ವಿಧಿಸಿದ ಐಸಿಸಿ

|

Updated on: Oct 07, 2024 | 10:39 PM

Women's T20 World Cup 2024: ಪಾಕಿಸ್ತಾನ ವಿರುದ್ದದ ಟೂರ್ನಿಯ ಎರಡನೇ ಪಂದ್ಯದಲ್ಲಿ ಐಸಿಸಿಯ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾದ ಯುವ ವೇಗದ ಬೌಲರ್ ಅರುಂಧತಿ ರೆಡ್ಡಿ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಮ ಕೈಗೊಂಡಿದ್ದು, ಶಿಕ್ಷೆ ವಿಧಿಸಿದೆ. ಇದರ ಪ್ರಕಾರ ಅರುಂಧತಿ ಮತ್ತೊಮ್ಮೆ ಈ ತಪ್ಪನ್ನು ಪುನರಾವರ್ತಿಸಿದರೆ, ಪಂದ್ಯದಿಂದ ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ.

Arundhati Reddy: ಟಿ20 ವಿಶ್ವಕಪ್‌ನಲ್ಲಿ ನಿಯಮ ಉಲ್ಲಂಘಿಸಿದ ಅರುಂಧತಿ ರೆಡ್ಡಿಗೆ ಶಿಕ್ಷೆ ವಿಧಿಸಿದ ಐಸಿಸಿ
ಅರುಂಧತಿ ರೆಡ್ಡಿ
Follow us on

ಪ್ರಸ್ತುತ ಯುಎಇಯಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಒಂದು ಪಂದ್ಯದಲ್ಲಿ ಗೆದ್ದು ಒಂದು ಪಂದ್ಯವನ್ನು ಸೋತಿರು ಟೀಂ ಇಂಡಿಯಾ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಆದರೆ ಈ ನಡುವೆ ಪಾಕಿಸ್ತಾನ ವಿರುದ್ದದ ಟೂರ್ನಿಯ ಎರಡನೇ ಪಂದ್ಯದಲ್ಲಿ ಐಸಿಸಿಯ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾದ ಯುವ ವೇಗದ ಬೌಲರ್ ಅರುಂಧತಿ ರೆಡ್ಡಿ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಮ ಕೈಗೊಂಡಿದ್ದು, ಶಿಕ್ಷೆ ವಿಧಿಸಿದೆ. ಇದರ ಪ್ರಕಾರ ಅರುಂಧತಿ ಮತ್ತೊಮ್ಮೆ ಈ ತಪ್ಪನ್ನು ಪುನರಾವರ್ತಿಸಿದರೆ, ಪಂದ್ಯದಿಂದ ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರುಂಧತಿ ರೆಡ್ಡಿ, ಪಾಕ್ ತಂಡದ ಮಾಜಿ ನಾಯಕಿ ನಿದಾ ದಾರ್ ಅವರನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ನಿದಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಅರುಂಧತಿ, ಅವರನ್ನು ಪೆವಿಲಿಯನ್​ಗೆ ಹೋಗುವಂತೆ ಕೈ ಸನ್ನೆ ಮಾಡಿದ್ದರು. ಐಸಿಸಿ ನಿಯಮದ ಪ್ರಕಾರ ಪಂದ್ಯದ ವೇಳೆ ಯಾವುದೇ ಪ್ಲೇಯರ್ ಈ ರೀತಿಯ ವರ್ತನೆ ತೊರಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಅದರಂತೆ ಐಸಿಸಿ ನೀತಿ ಸಂಹಿತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅರುಂಧತಿ ಅವರನ್ನು ವಾಗ್ದಂಡನೆಗೆ ಗುರಿ ಪಡಿಸಲಾಗಿದೆ.

ಐಸಿಸಿ ಈ ಶಿಕ್ಷೆ ನೀಡಿದೆ

ಈ ಕುರಿತು ಹೇಳಿಕೆ ನೀಡಿರುವ ಐಸಿಸಿ, ‘ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅರುಂಧತಿ ರೆಡ್ಡಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಯಾವುದೇ ಆಟಗಾರ ಔಟಾದಾಗ ಆಕ್ರಮಣಕಾರಿ ವರ್ತನೆ ತೋರುವುದು ಮತ್ತು ಅಂತರರಾಷ್ಟ್ರೀಯ ಪಂದ್ಯದ ವೇಳೆ ಅವಾಚ್ಯ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದನ್ನು ಈ ನಿಯಮ ಸೂಚಿಸುತ್ತದೆ. ಆ ಪ್ರಕಾರ ಐಸಿಸಿ ನಿಯಮ ಉಲ್ಲಂಘಿಸಿರುವ ಅರುಂಧತಿ ರೆಡ್ಡಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಇದು ಅರುಂಧತಿ ಅವರ ಮೊದಲ ಅಪರಾಧವಾಗಿದೆ.

ನಿಯಮದ ಪ್ರಕಾರ 24-ತಿಂಗಳ ಅವಧಿಯಲ್ಲಿ ಆಟಗಾರನೊಬ್ಬ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆತನಿಗೆ ಅಧಿಕೃತ ವಾಗ್ದಂಡನೆಯ ಕನಿಷ್ಠ ದಂಡ, ಹಾಗೆಯೇ ಪಂದ್ಯದ ಶುಲ್ಕದ ಗರಿಷ್ಠ 50 ಪ್ರತಿಶತವನ್ನು ದಂಡವನ್ನಾಗಿ ಮತ್ತು ಒಂದು ಪಂದ್ಯದ ನಿಷೇಧವನ್ನೂ ಹೇರಲಾಗುತ್ತದೆ. ಆದಾಗ್ಯೂ, ಮೂರನೇ ಅಂಪೈರ್ ಜಾಕ್ವೆಲಿನ್ ವಿಲಿಯಮ್ಸ್ ಮತ್ತು ನಾಲ್ಕನೇ ಅಂಪೈರ್ ಕ್ಲೇರ್ ಪೊಲೊಸಾಕ್ ಜೊತೆಗೆ ಆನ್-ಫೀಲ್ಡ್ ಅಂಪೈರ್‌ಗಳಾದ ಎಲೋಯಿಸ್ ಶೆರಿಡನ್ ಮತ್ತು ಲಾರೆನ್ ಅಜೆನ್‌ಬಾಗ್ ಅವರು ವಿಧಿಸಿದ ಅಪರಾಧ ಮತ್ತು ಶಿಕ್ಷೆಯನ್ನು ಅರುಂಧತಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಾವುದೇ ವಿಚಾರಣೆಯ ಅಗತ್ಯವಿಲ್ಲವೆಂದು ಐಸಿಸಿ ತಿಳಿಸಿದೆ.

3 ವಿಕೆಟ್ ಪಡೆದ ಅರುಂಧತಿ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರುಂಧತಿ ರೆಡ್ಡಿ ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ತಮ್ಮ ಖೋಟಾದ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಇದಲ್ಲದೆ ಟೂರ್ನಿಯ ಮೊದಲ ಪಂದ್ಯದಲ್ಲಿಯೂ ಸಹ ನ್ಯೂಜಿಲೆಂಡ್ ವಿರುದ್ಧ ಒಂದು ವಿಕೆಟ್ ಪಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ