
ಟಿ20 ವಿಶ್ವಕಪ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಸ ವರಸೆ ಶುರು ಮಾಡಿದೆ. ಅದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡುವ ಮೂಲಕ. ಫೆಬ್ರವರಿ 15 ರಂದು ಕೊಲೊಂಬೊದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಪಿಸಿಬಿಯ ಈ ಹೇಳಿಕೆ ಬೆನ್ನಲ್ಲೇ ಐಸಿಸಿ ತುರ್ತು ಸಭೆ ಕರೆದಿದೆ.
ಈ ಸಭೆಯ ಬಳಿಕ ಪಾಕಿಸ್ತಾನ್ ತಂಡವನ್ನು ಟಿ20 ವಿಶ್ವಕಪ್ನಲ್ಲಿ ಮುಂದುವರೆಸಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರವಾಗಲಿದೆ. ಒಂದು ವೇಳೆ ಪಾಕ್ ತಂಡವನ್ನು ವಿಶ್ವಕಪ್ನಲ್ಲಿ ಮುಂದುವರೆಸಬೇಕಿದ್ದರೆ ಭಾರತದ ವಿರುದ್ಧ ಪಂದ್ಯವಾಡಬೇಕೆಂದು ಒತ್ತಾಯಿಸಲಿದೆ.
ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಪಾಕಿಸ್ತಾನ್ ಹಿಂದೆ ಸರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಿದ್ದಾರೆ. ಈ ಕ್ರಮಗಳೇನು ಎಂದು ನೋಡುವುದಾದರೆ…
ಐಸಿಸಿ ನಿಯಮ ಉಲ್ಲಂಘಿಸಿದರೆ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವುದು ಬಹುತೇಕ ಖಚಿತ. ಇದರಿಂದ ಪಾಕಿಸ್ತಾನ್ ವಿರುದ್ಧ ಯಾವುದೇ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ. ಅಂದರೆ ಯಾವುದೇ ರಾಷ್ಟ್ರ ಕೂಡ ಪಾಕ್ ವಿರುದ್ಧ ಸರಣಿ ಆಡುವುದಿಲ್ಲ.
ಅಷ್ಟೇ ಅಲ್ಲದೆ ಐಸಿಸಿ ಆಯೋಜಿಸಲಿರುವ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡುವುದಿಲ್ಲ. ಅಂದರೆ ನಿರ್ದಿಷ್ಟ ಕಾಲದ ನಿಷೇಧ ತೆರವಾದ ಬಳಿಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಆತಿಥ್ಯದ ಹಕ್ಕನ್ನು ರದ್ದುಗೊಳಿಸಲಿದೆ. ಇದರಿಂದ ಕೂಡ ಪಿಸಿಬಿಯ ಆದಾಯಕ್ಕೆ ಹೊಡೆತ ಬೀಳಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿರುವ 20 ತಂಡಗಳು ಪ್ರಕಟ
ಒಟ್ಟಿನಲ್ಲಿ ಟಿ20 ವಿಶ್ವಕಪ್ನಲ್ಲಿ ಹೊಸ ವರಸೆ ಶುರು ಮಾಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಬಹಿರಂಗ ಪತ್ರದ ಮೂಲಕ ಐಸಿಸಿ ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಕೇಳಿಕೊಂಡಿದೆ. ಇದಾಗ್ಯೂ ಪಿಸಿಬಿ ತನ್ನ ನಿರ್ಧಾರ ಬದಲಿಸದೇ ಇದ್ದರೆ ಮೇಲಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.
Published On - 11:31 am, Mon, 2 February 26