
ವಿಶಾಖಪಟ್ಟಣಂನಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೇಲೆ ಸದ್ಯಕ್ಕೆ ಟೀಂ ಇಂಡಿಯಾ (Team India) ಹಿಡಿತ ಸಾಧಿಸಿದೆ. ಭಾರತ ನೀಡಿರುವ 399 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ತಂಡ ಮೂರನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 67 ರನ್ ಕಲೆಹಾಕಿದೆ. ಈ ಮೂಲಕ ಉಳಿದಿರುವ 2 ದಿನಗಳಲ್ಲಿ ಇಂಗ್ಲೆಂಡ್ ಗೆಲುವಿಗೆ ಇನ್ನೂ 332 ರನ್ಗಳ ಅಗತ್ಯವಿದೆ. ಈ ಬೃಹತ್ ಗುರಿಯನ್ನು ನಾಲ್ಕು ಮತ್ತು ಐದನೇ ದಿನದಲ್ಲಿ ಬೆನ್ನಟ್ಟುವುದು ಅಷ್ಟು ಸುಲಭದ ಮಾತಲ್ಲ. ಈ ನಡುವೆ ಗುರಿ ಬೆನ್ನಟ್ಟುವ ಬಗ್ಗೆ ಹೇಳಿಕೆ ನೀಡಿರುವ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಅಂಡರ್ಸನ್ (James Anderson), ನಾವು 600 ರನ್ ಚೇಸ್ ಮಾಡುವುದಕ್ಕೂ ಸಿದ್ಧ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಆಯ್ಕೆಯಾದ ಮೇಲೆ ಇಂಗ್ಲೆಂಡ್ ತಂಡ ಟೆಸ್ಟ್ ಆಡುವ ಶೈಲಿಯೇ ಬದಲಾಗಿದೆ. ತಂಡದ ಪ್ರತಿಯೊಬ್ಬ ಆಟಗಾರನೂ ಆಕ್ರಮಣಕಾರಿ ಶೈಲಿಯ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದರಂತೆ ವಿಕೆಟ್ಗಳು ಪತನದ ನಡುವೆ ತಂಡದ ರನ್ ರೇಟ್ ಕುಸಿಯುವುದಕ್ಕೆ ಆಟಗಾರರು ಅವಕಾಶ ನೀಡುತ್ತಿಲ್ಲ. ಹೀಗಾಗಿಯೇ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಇಷ್ಟು ಯಶಸ್ಸು ಸಾಧಿಸುತ್ತಿರುವುದು.
IND vs ENG: ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಭರತ್; 3ನೇ ಟೆಸ್ಟ್ಗೆ ಧೃವ್ ಜುರೇಲ್ ಆಯ್ಕೆ?
ಇದೀಗ ವಿಶಾಖಪಟ್ಟಣಂನಲ್ಲಿ ಭಾರತ ನೀಡಿರುವ 399 ರನ್ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ಗೆ ಈ ಪಿಚ್ನಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಬೆನ್ನಟ್ಟುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಕೊನೆಯ ಎರಡು ದಿನಗಳಲ್ಲಿ ಪಿಚ್ ಸಾಕಷ್ಟು ಬದಲಾವಣೆ ಕಾಣಲಿದೆ. ಇದು ಬ್ಯಾಟರ್ಗಳಿಗೆ ಹೆಚ್ಚು ತೊಂದರೆಯನ್ನುಂಟು ಮಾಡಲಿದೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದರೆ ಅದು ಇತಿಹಾಸವಾಗಲಿದೆ. ಏಕೆಂದರೆ ಇಲ್ಲಿಯವರೆಗೂ ಇಂಗ್ಲೆಂಡ್ ತಂಡಕ್ಕೆ ಟೆಸ್ಟ್ ಕ್ರಿಕೆಟ್ನಲ್ಲಿ ಅಷ್ಟು ದೊಡ್ಡ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಇಂಗ್ಲೆಂಡ್ ತಂಡದ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ವಿಶಾಖಪಟ್ಟಣಂ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದಂತೆ ತಮ್ಮ ತಂಡದ ಕೋಚ್ ಬ್ರೆಂಡನ್ ಮೆಕಲಮ್ ನೀಡಿರುವ ಗುರಿ ಏನು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.
ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯದ ನಂತರ ಮಾತನಾಡಿದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್, ‘ಭಾರತ ತಂಡ ಎಷ್ಟೇ ದೊಡ್ಡ ಸ್ಕೋರ್ ಮಾಡಿದರೂ ನಾವು ಅದನ್ನು ಬೆನ್ನಟ್ಟಲೇಬೇಕು ಎಂದು ಕೋಚ್ ಬ್ರೆಂಡನ್ ಮೆಕಲಮ್ ನಮಗೆ ಹೇಳಿದ್ದಾರೆ. ಮೂರನೇ ದಿನ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿದೆ. ಈಗ ಸೋಮವಾರ, ಇಂಗ್ಲೆಂಡ್ ಈ ಗುರಿಯನ್ನು ಸಾಧಿಸಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತದೆ. ಭಾರತ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 600 ರನ್ ಕಲೆಹಾಕಿದರೂ ನಾವು ಅದನ್ನು ಬೆನ್ನಟ್ಟಲು ಪ್ರಯತ್ನಿಸಬೇಕು ಎಂದು ಮೆಕಲಮ್ ಟೀಂ ಮೀಟಿಂಗ್ನಲ್ಲಿ ನಮಗೆ ಹೇಳಿದ್ದಾರೆ ಎಂದು ಆಂಡರ್ಸನ್ ಹೇಳಿದ್ದಾರೆ.
ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಒಂದು ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಇಂಗ್ಲೆಂಡ್ಗೆ ಬೇನ್ ಡಕೆಟ್ ರೂಪದಲ್ಲಿ ಹೊಡೆತ ಬಿದ್ದಿದೆ. ಡಕೆಟ್ 28 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೂರನೇ ದಿನ ಇಂಗ್ಲೆಂಡ್ಗೆ ಆರ್ ಅಶ್ವಿನ್ ಮೊದಲ ಹೊಡೆತ ನೀಡಿದ್ದು, ಈಗ ಈ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಇನ್ನೂ 9 ವಿಕೆಟ್ ಪಡೆಯಬೇಕಿದ್ದರೆ ಇಂಗ್ಲೆಂಡ್ ತಂಡ 332 ರನ್ ಗಳಿಸಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ