
ಬೆಂಗಳೂರು (ಆ. 15): ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ, ಕ್ರಿಕೆಟ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಭಾರತ ಪಾಕಿಸ್ತಾನವನ್ನು ಬಹಿಷ್ಕರಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚೆಗೆ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ಸಮಯದಲ್ಲಿ, ಭಾರತ ಚಾಂಪಿಯನ್ಸ್ ಗುಂಪು ಹಂತ ಮತ್ತು ಸೆಮಿಫೈನಲ್ ಎರಡರಲ್ಲೂ ಪಾಕಿಸ್ತಾನ ಚಾಂಪಿಯನ್ಗಳನ್ನು ಎದುರಿಸಲು ನಿರಾಕರಿಸಿತು. ಶಿಖರ್ ಧವನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ (Harbhajan Singh), ಇರ್ಫಾನ್ ಪಠಾಣ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಅವರಂತಹ ದಿಗ್ಗಜರನ್ನು ಒಳಗೊಂಡ ಭಾರತೀಯ ತಂಡವು ಪಾಖ್ ವಿರುದ್ಧ ನಾವು ಆಡಲ್ಲ ಎಂದು ದೃಢವಾಗಿ ನಿಂತರು.
ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಮುಂಬರುವ ಏಷ್ಯಾಕಪ್ನಲ್ಲೂ ಇದೇ ರೀತಿಯ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನು ಎದುರಿಸಲು ನಿರಾಕರಿಸಬೇಕು ಎಂದು ಹರ್ಭಜನ್ ಹೇಳಿದ್ದಾರೆ. 700 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿರುವ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೈಮ್ಸ್ ಆಫ್ ಇಂಡಿಯ ಜೊತೆ ಮಾತನಾಡುತ್ತ, “ದೇಶದ ಮುಂದೆ ಕ್ರಿಕೆಟ್ ತುಂಬಾ ಚಿಕ್ಕ ವಿಷಯ” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
“ಅವರು ಯಾವುದು ಮುಖ್ಯ ಮತ್ತು ಯಾವುದು ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದು ತುಂಬಾ ಸರಳ. ನನಗೆ, ಗಡಿಯಲ್ಲಿ ನಿಂತು ಕೆಲವೊಮ್ಮೆ ಮನೆಗೆ ಮರಳಲೂ ಸಾಧ್ಯವಾಗದ ಸೈನಿಕ ಹೆಚ್ಚು ಮುಖ್ಯ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಅವರ ತ್ಯಾಗ ನಮಗೆಲ್ಲರಿಗೂ ಬಹಳ ದೊಡ್ಡದು” ಎಂದು ಹೇಳಿದರು.
Nicholas Saldanha: 83ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ – ಹರ್ಭಜನ್ ಸಿಂಗ್
“ದೇಶದ ಸೈನಿಕರಿಗೆ ಹೋಲಿಸಿದರೆ ಕ್ರಿಕೆಟ್ ತುಂಬಾ ಸಣ್ಣ ವಿಷಯ. ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿ ನಾವು ಅವರೊಂದಿಗೆ ಕ್ರಿಕೆಟ್ ಆಡುವುದು ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಗಳು ಬಗೆಹರಿಯುವವರೆಗೆ, ನಾವು ಅವರೊಂದಿಗೆ ಕ್ರಿಕೆಟ್ ಆಡಬಾರದು. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬುದು ನಮ್ಮ ಸರ್ಕಾರದ ನಿಲುವು” ಎಂದು ಭಜ್ಜಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ನಲ್ಲಿ ಒಂದೇ ಗುಂಪಿನಲ್ಲಿ (ಗುಂಪು ಎ) ಇವೆ, ಅವರೊಂದಿಗೆ ಈ ಗುಂಪಿನಲ್ಲಿ ಯುಎಇ ಮತ್ತು ಒಮಾನ್ ಇವೆ. ಈ ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ ಮಾತ್ರ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ, ಇದು ಸಂಭವಿಸಿದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಎರಡನೇ ಪಂದ್ಯವೂ ಖಚಿತವಾಗುತ್ತದೆ. ಎರಡೂ ತಂಡಗಳು ಫೈನಲ್ ತಲುಪಿದರೆ ಒಂದು ತಿಂಗಳೊಳಗೆ ಈ ಎರಡೂ ತಂಡಗಳ ನಡುವೆ 3 ಪಂದ್ಯಗಳು ನಡೆಯಲಿವೆ. ಏಷ್ಯಾ ಕಪ್ನ ಫೈನಲ್ ಸೆಪ್ಟೆಂಬರ್ 28 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ