
2025 ರ ಏಷ್ಯಾಕಪ್ನ (Asia Cup 2025) ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾ, ಯುಎಇ ವಿರುದ್ಧ ಅಮೋಘ ಜಯ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ಶಿವಂ ದುಬೆ ಸೇರಿದಂತೆ ಭಾರತೀಯ ಬೌಲಿಂಗ್ ದಾಳಿಗೆ ಯುಎಇ ಬಳಿ ಯಾವುದೇ ಉತ್ತರವಿರಲಿಲ್ಲ. ಹೀಗಾಗಿ ಇಡೀ ತಂಡ ಕೇವಲ 57 ರನ್ಗಳಿಗೆ ಆಲೌಟ್ ಆಯಿತು. ವಾಸ್ತವವಾಗಿ ತಂಡ ಇನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು. ಆದರೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Surya Kumar Yadav) ಅವರ ಒಂದು ನಿರ್ಧಾರದಿಂದಾಗಿ ಯುಎಇ ಸ್ಕೋರ್ ಬೋರ್ಡ್ಗೆ ಕೆಲವು ರನ್ಗಳು ಸೇರ್ಪಡೆಯಾದವು.
ಭಾರತದ ಬಲಿಷ್ಠ ಬೌಲಿಂಗ್ ಮುಂದೆ ಯುಎಇ ತಂಡಕ್ಕೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಆರಂಭಿಕರಿಬ್ಬರನ್ನು ಹೊರತುಪಡಿಸಿ ಉಳಿದ 8 ಬ್ಯಾಟ್ಸ್ಮನ್ಗಳು ಕೇವಲ ಒಂದಂಕಿಗೆ ಸುಸ್ತಾದರು. ಇದರ ಫಲವಾಗಿ ಯುಎಇ ತಂಡ 14ನೇ ಓವರ್ನಲ್ಲಿ ತನ್ನ ಇನ್ನಿಂಗ್ಸ್ ಮುಗಿಸಿತು. ಆದಾಗ್ಯೂ ಯುಎಇ ಇನ್ನಿಂಗ್ಸ್ನ 13ನೇ ಓವರ್ನಲ್ಲಿ ನಡೆದ ಅದೊಂದು ಘಟನೆ ಕ್ರಿಕೆಟ್ ಜಗತ್ತಿನಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವಂತೆ ಮಾಡಿದೆ.
ವಾಸ್ತವವಾಗಿ 13 ನೇ ಓವರ್ ಬೌಲ್ ಮಾಡುವ ಜವಾಬ್ದಾರಿ ಹೊತ್ತಿದ್ದ ಶಿವಂ ದುಬೆ ಈ ಓವರ್ನ ಮೊದಲ ಎಸೆತದಲ್ಲಿ ಧ್ರುವ್ ಪರಾಶರ್ ಅವರನ್ನು ಎಲ್ಬಿಡಬ್ಲ್ಯೂ ಮಾಡಿ ಯುಎಇಯ ಎಂಟನೇ ವಿಕೆಟ್ ಉರುಳಿಸಿದರು. ನಂತರ ಅದೇ ಓವರ್ನ ಮೂರನೇ ಎಸೆತದಲ್ಲಿ ಶಿವಂ ದುಬೆ, ಜುನೈದ್ ಸಿದ್ದಿಕಿಗೆ ಬೌನ್ಸರ್ ಎಸೆದರು, ಅದರಲ್ಲಿ ಜುನೈದ್ ಪುಲ್ ಶಾಟ್ ಆಡಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಚೆಂಡು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕೈಗೆ ಹೋಯಿತು, ಕೂಡಲೇ ಸಂಜು ಚೆಂಡನ್ನು ನೇರವಾಗಿ ಸ್ಟಂಪ್ಗೆ ಹೊಡೆದರು. ಆ ಸಮಯದಲ್ಲಿ ಸ್ಟ್ರೈಕ್ನಲ್ಲಿದ್ದ ಜುನೈದ್ ಕ್ರೀಸ್ನಿಂದ ಹೊರಗಿದ್ದ ಕಾರಣ ಭಾರತ ತಂಡವು ರನ್ ಔಟ್ಗೆ ಮನವಿ ಮಾಡಿತು. ಮೈದಾನದಲ್ಲಿರುವ ಅಂಪೈರ್ ಈ ನಿರ್ಧಾರವನ್ನು ಮೂರನೇ ಅಂಪೈರ್ಗೆ ಕಳುಹಿಸಿದರು. ಮೂರನೇ ಅಂಪೈರ್ ಹಲವಾರು ಬಾರಿ ವಿಡಿಯೋವನ್ನು ವೀಕ್ಷಿಸಿ ಜುನೈದ್ ರನ್ ಔಟ್ ಎಂದು ತಮ್ಮ ನಿರ್ಧಾರವನ್ನು ನೀಡಿದರು.
CAPTAIN SURYA WINNING THE HEART WITH A NICE GESTURE. 👏❤️🩹🇮🇳
Third Umpire says it’s out.
– Suryakumar Yadav has withdrawn the appeal.🫡❤️🩹#INDvsUAE #AsiaCupLive #SuryakumarYadav #bycottasiacup
pic.twitter.com/aaP5u1t895— Sandeep Yadav (@Sandeep_Yadav37) September 10, 2025
ಆದರೆ ಇಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಸೂರ್ಯಕುಮಾರ್ ಯಾದವ್ ಫೀಲ್ಡ್ ಅಂಪೈರ್ ಜೊತೆ ಚರ್ಚಿಸಿ ತಮ್ಮ ಮೇಲ್ಮನವಿಯನ್ನು ಹಿಂತೆಗೆದುಕೊಂಡರು. ವಾಸ್ತವವಾಗಿ ಸೂರ್ಯ ಅವರ ಈ ನಿರ್ಧಾರಕ್ಕೆ ಕಾರಣವೂ ಇತ್ತು. ಅದೆನೆಂದರೆ ದುಬೆ ಬೌಲಿಂಗ್ ಮಾಡಲು ಓಡುತ್ತಿದ್ದಾಗ, ಅವರ ಪ್ಯಾಂಟ್ನಲ್ಲಿ ಸಿಲುಕಿಕೊಂಡಿದ್ದ ಕರವಸ್ತ್ರ ಕೆಳಗೆ ಬಿದ್ದಿತು. ಇದರಿಂದ ಏಕಾಗ್ರತೆ ಕಳೆದುಕೊಂಡ ಸ್ಟ್ರೈಕ್ ಬ್ಯಾಟರ್ ಜುನೈದ್, ಈ ಬಗ್ಗೆ ಅಂಪೈರ್ಗೆ ದೂರು ನೀಡಲು ಪ್ರಾರಂಭಿಸಿದರು, ಈ ಪ್ರಕ್ರಿಯೆಯಲ್ಲಿ ಅವರು ಕ್ರೀಸ್ಗೆ ಹಿಂತಿರುಗಲು ಮರೆತರು.
Asia Cup 2025: ಒಂದೇ ಓವರ್ನಲ್ಲಿ 3 ವಿಕೆಟ್ ಉರುಳಿಸಿ ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಕುಲ್ದೀಪ್
ಸಾಮಾನ್ಯವಾಗಿ, ಈ ರೀತಿಯ ಘಟನೆಗಳು ನಡೆದಾಗಲೆಲ್ಲ ಬ್ಯಾಟ್ಸ್ಮನ್ ತನ್ನ ಗಮನ ಕಳೆದುಕೊಳ್ಳುತ್ತಾನೆ. ಅಂತಹ ಸಮಯದಲ್ಲಿ ಅವನು ಕೆಲವೊಮ್ಮೆ ಕ್ರೀಸ್ನಿಂದ ದೂರ ಸರಿಯುತ್ತಾನೆ. ಅಥವಾ ಅಂತಹ ಪರಿಸ್ಥಿತಿಯಲ್ಲಿ, ಅಂಪೈರ್ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸುತ್ತಾರೆ. ಆದರೆ ಈ ಪಂದ್ಯದಲ್ಲಿ ಬ್ಯಾಟ್ಸ್ಮನ್ ಚೆಂಡನ್ನು ಬಿಡುವ ಕೆಲಸ ಮಾಡಲಿಲ್ಲ ಅಥವಾ ಅಂಪೈರ್ ಅದನ್ನು ಡೆಡ್ ಬಾಲ್’ ಎಂದು ಕರೆಯಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾಯಕ ಸೂರ್ಯ, ಜುನೈದ್ ಅವರ ದೂರನ್ನು ಸಮರ್ಥನೀಯವೆಂದು ಪರಿಗಣಿಸಿ, ಸ್ವತಃ ಮೇಲ್ಮನವಿಯನ್ನು ಹಿಂತೆಗೆದುಕೊಂಡರು. ಆದಾಗ್ಯೂ ಸೂರ್ಯಕುಮಾರ್ ಔದಾರ್ಯ ಯಾವುದೇ ಫಲ ನೀಡಲಿಲ್ಲ. ಮುಂದಿನ 2 ಎಸೆತಗಳ ನಂತರ ಜುನೈದ್ ಅದೇ ಓವರ್ನಲ್ಲಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Wed, 10 September 25