ಟೀಮ್ ಇಂಡಿಯಾಗೆ ಕಾಡಿದ ‘ಕ್ಯಾಚ್’ ಕಂಟಕ!

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡ ಕ್ಲೀನ್‌ಸ್ವೀಪ್ ಮಾಡಿದ್ದೇನೋ ನಿಜ. ಆದರೆ, ಈ ಐತಿಹಾಸಿಕ ಜಯದ ಸಂಭ್ರಮದ ನಡುವೆಯೂ ಟೀಮ್ ಇಂಡಿಯಾವನ್ನು ಹೊಸದೊಂದು ದೊಡ್ಡ ಆತಂಕ ಕಾಡಲಾರಂಭಿಸಿದೆ. ಇಡೀ ಸರಣಿಯಲ್ಲಿ ಭಾರತೀಯ ಫೀಲ್ಡರ್‌ಗಳು ಪ್ರದರ್ಶಿಸಿದ ಅತ್ಯಂತ ಕಳಪೆ ಆಟ ಮತ್ತು ಕೈಚೆಲ್ಲಿದ ಬರೋಬ್ಬರಿ 10 ಕ್ಯಾಚ್‌ಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. 

ಟೀಮ್ ಇಂಡಿಯಾಗೆ ಕಾಡಿದ ‘ಕ್ಯಾಚ್’ ಕಂಟಕ!
Team India
Image Credit source: BCCI

Updated on: Jul 28, 2026 | 9:00 AM

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅದು ಸಹ ಝಿಂಬಾಬ್ವೆ ತಂಡದ ವಿರುದ್ಧ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ. ಈ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಆ ಚಿಂತೆಯೇ ಕಳಪೆ ಫೀಲ್ಡಿಂಗ್.

ಟೀಮ್ ಇಂಡಿಯಾ ಫೀಲ್ಡರ್​ಗಳು ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೈ ಬಿಟ್ಟಿರುವ ಒಟ್ಟು ಕ್ಯಾಚ್​ಗಳ ಸಂಖ್ಯೆ ಬರೋಬ್ಬರಿ 10 ಎಂದರೆ ನಂಬಲೇಬೇಕು. ಈ ಕಳಪೆ ಫೀಲ್ಡಿಂಗ್ ಕಾರಣ ಟೀಮ್ ಇಂಡಿಯಾದ ಕ್ಯಾಚಿಂಗ್ ದಕ್ಷತೆ ಮತ್ತಷ್ಟು ಕುಸಿದಿದೆ.

  • ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ಕ್ಯಾಚಿಂಗ್ ದಕ್ಷತೆ ಕೇವಲ 64.2% ನಲ್ಲಿತ್ತು.
  • ಝಿಂಬಾಬ್ವೆ ತಂಡವು ಈ ಸರಣಿಯಲ್ಲಿ 92.3% ನಷ್ಟು ಅತ್ಯುತ್ತಮ ಕ್ಯಾಚಿಂಗ್ ದಕ್ಷತೆಯನ್ನು ಪ್ರದರ್ಶಿಸಿದೆ.

ಅಂದರೆ ಮೂರು ಮ್ಯಾಚ್​ಗಳಲ್ಲಿ ಝಿಂಬಾಬ್ವೆ ತಂಡ ಕೈ ಬಿಟ್ಟಿರುವುದು ಕೇವಲ 1 ಕ್ಯಾಚ್ ಮಾತ್ರ. ಆದರೆ ಇತ್ತ ಭಾರತೀಯ ಫೀಲ್ಡರ್​ಗಳು ಬರೋಬ್ಬರಿ 10 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ.

ಕೈ ಜಾರಿದ 5 ಕ್ಯಾಚ್‌ಗಳು!

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು 35 ರನ್‌ಗಳ ಜಯ ಸಾಧಿಸಿತು. ಆದರೆ, ಈ ಒಂದೇ ಪಂದ್ಯದಲ್ಲಿ ಭಾರತೀಯ ಫೀಲ್ಡರ್‌ಗಳು 5 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಅದರಲ್ಲೂ ಟೀಮ್ ಇಂಡಿಯಾ ವೇಗಿ ಯಶ್ ಠಾಕೂರ್ ಎಸೆದ ಓವರ್‌ಗಳಲ್ಲೇ 3 ಕ್ಯಾಚ್‌ಗಳನ್ನು ಕೈಬಿಡಲಾಯಿತು. ಇದಲ್ಲದೆ, ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ರನ್-ಔಟ್ ಮಿಸ್ ಮಾಡುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೀಮ್ ಇಂಡಿಯಾಗೆ ಫೀಲ್ಡಿಂಗ್ ಕೋಚ್ ಇದ್ದರೂ, ಇಷ್ಟೊಂದು ಕಳಪೆ ಮಟ್ಟದ ಕ್ಷೇತ್ರರಕ್ಷಣೆ ಪ್ರದರ್ಶಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಝಿಂಬಾಬ್ವೆ ವಿರುದ್ಧದ ಈ ಸರಣಿ ಜಯ ಯುವ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ನಿಜ. ಆದರೆ, ಕ್ರಿಕೆಟ್‌ನಲ್ಲಿ “ಕ್ಯಾಚ್‌ಗಳನ್ನು ಗೆದ್ದರೆ ಮ್ಯಾಚ್​ಗಳನ್ನು ಗೆಲ್ಲಬಹುದು”  ಎಂಬ ಹಳೆಯ ನಾಣ್ಣುಡಿ ಎಂದಿಗೂ ಸುಳ್ಳಾಗುವುದಿಲ್ಲ.

ಇದನ್ನೂ ಓದಿ: 5 ಓವರ್, 5 ಮೇಡನ್, 5 ವಿಕೆಟ್​: ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಗ್ರೀವ್ಸ್

ಮುಂಬರುವ ದೊಡ್ಡ ಸರಣಿಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಇಂತಹ ಕಳಪೆ ಫೀಲ್ಡಿಂಗ್ ಮುಂದುವರಿದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ. ಹಾಗಾಗಿ, ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚಿಂಗ್ ಸಿಬ್ಬಂದಿ ಈ ‘ಕೈ ಚೆಲ್ಲುವ’ ಸಮಸ್ಯೆಗೆ ತಕ್ಷಣವೇ ಪರಿಹಾರ ಹುಡುಕಬೇಕಿದೆ.

Follow Us