ನಾವು ಸೋತಿದ್ದು ಒಳ್ಳೆಯದೇ ಆಯ್ತು… RCB ನಾಯಕನ ಅಚ್ಚರಿಯ ಹೇಳಿಕೆ
IPL 2025 RCB vs SRH: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 65ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19.5 ಓವರ್ಗಳಲ್ಲಿ 189 ರನ್ಗಳಿಸಿ 42 ರನ್ಗಳಿಂದ ಸೋಲೊಪ್ಪಿಕೊಂಡಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ ಅಜೇಯ 94 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಎಸ್ಆರ್ಹೆಚ್ ತಂಡವು 20 ಓವರ್ಗಳಲ್ಲಿ 231 ರನ್ ಕಲೆಹಾಕಿತು.
232 ರನ್ಗಳ ಕಠಿಣ ಗುರಿ ಬೆನ್ನತ್ತಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ 43 ರನ್ ಬಾರಿಸಿದರೆ, ಫಿಲ್ ಸಾಲ್ಟ್ 62 ರನ್ ಸಿಡಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಪರಿಣಾಮ 19.5 ಓವರ್ಗಳಲ್ಲಿ 189 ರನ್ಗಳಿಸಿ ಆರ್ಸಿಬಿ ತಂಡವು ಸರ್ವಪತನ ಕಂಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 42 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ಜಿತೇಶ್ ಶರ್ಮಾ, ಈ ಪಂದ್ಯದಲ್ಲಿ ನಾವು 20-30 ಹೆಚ್ಚುವರಿ ರನ್ಗಳನ್ನು ನೀಡಿದ್ದು ನಮ್ಮ ಪಾಲಿಗೆ ದುಬಾರಿಯಾಯಿತು. ಇದೇ ಕಾರಣದಿಂದಾಗಿ ನಾವು ಸೋಲನುಭವಿಸಿದ್ದೇವೆ ಎಂದರು.
ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳಿಗೆ ಹೋಲಿಸಿದರೆ, ನಮ್ಮ ಬ್ಯಾಟಿಂಗ್ನಲ್ಲಿ ತೀವ್ರತೆ ಇರಲಿಲ್ಲ ಎಂಬುದು ನನ್ನ ಭಾವನೆ. ಅದರಲ್ಲೂ ನಾನು ಔಟಾದ ರೀತಿಯು ನನ್ನಲ್ಲಿ ತುಂಬಾ ನಿರಾಸೆ ಮೂಡಿಸಿದೆ. ಇನ್ನು ಗಾಯಗೊಂಡ ಟಿಮ್ ಡೇವಿಡ್ ಕೂಡ ಬ್ಯಾಟಿಂಗ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ.
ಒಂದಾರ್ಥದಲ್ಲಿ ನಾವು ಈ ಪಂದ್ಯವನ್ನು ಸೋತಿದ್ದು ಒಳ್ಳೆಯದೇ ಆಯ್ತು ಅಂತ ನನಗನ್ನಿಸುತ್ತೆ. ಏಕೆಂದರೆ ಚೇಸಿಂಗ್ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಈ ತಪ್ಪುಗಳನ್ನು ತಿದ್ದಿ ಮುಂಬರುವ ಪಂದ್ಯಗಳಲ್ಲಿ ಉತ್ತಮ ರೀತಿಯಲ್ಲಿ ಪುಟಿದೇಳುತ್ತೇವೆ ಎಂಬ ವಿಶ್ವಾಸವಿದೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: IPL 2025: ಹೀಗಾದ್ರೆ RCB ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತೆ..!
ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲು ನಮ್ಮ ಪಾಲಿಗೆ ಒಳ್ಳೆಯದೇ. ಪ್ಲೇಆಫ್ ಪಂದ್ಯಗಳಿಗೂ ಮುನ್ನ ಇದು ಎಚ್ಚರಿಕೆಯ ಕರೆಗಂಟೆ. ಈಗ ಅನುಭವಿಸಿರುವ ಹಿನ್ನಡೆಯನ್ನು ಸರಿಪಡಿಸಿ ಮುಂದಿನ ಪಂದ್ಯಗಳಿಗಾಗಿ ಸಜ್ಜಾಗಬೇಕಿದೆ. ಈ ಮೂಲಕ ನಾವು ಮುಂದಿನ ಮ್ಯಾಚ್ನಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಆರ್ಸಿಬಿ ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಹೇಳಿದ್ದಾರೆ.