
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 (IPL 2025) ಅನ್ನು ಪ್ರಸ್ತುತ ಒಂದು ವಾರ ಮುಂದೂಡಲಾಗಿದೆ. ಆದಾಗ್ಯೂ, ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ಬಂದಿದೆ. ಈಗ ಐಪಿಎಲ್ ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗಲಿದೆ ಎಂದು ತೋರುತ್ತಿದೆ. ಆದಾಗ್ಯೂ ಐಪಿಎಲ್ ಮುಂದೂಡಿಕೆಯಿಂದ ಕೆಲವು ತಂಡಗಳಿಗೆ ಒಳ್ಳೇಯದ್ದೇ ಆಗಿದೆ. ಏಕೆಂದರೆ ಕೆಲವು ತಂಡದ ಆಟಗಾರರು ಇಂಜುರಿಯಿಂದ ಬಳಲುತ್ತಿದ್ದರು. ಅದರಲ್ಲೂ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿಗೆ (RCB) ಸಾಕಷ್ಟು ಲಾಭವಾಗಿದೆ.
ವಾಸ್ತವವಾಗಿ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಪ್ರಸ್ತುತ ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಜತ್ ಕೈಗೆ ಗಾಯವಾಗಿತ್ತು. ಇದರಿಂದಾಗಿ ಅವರು ಕನಿಷ್ಠ 2 ಪಂದ್ಯಗಳಿಗೆ ಹೊರಗುಳಿಯಬೇಕಾಗಿತ್ತು. ಆದರೆ ಭಾರತ-ಪಾಕಿಸ್ತಾನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಐಪಿಎಲ್ 2025 ಅನ್ನು ಒಂದು ವಾರ ಮುಂದೂಡಿದೆ. ಹೀಗಾಗಿ ರಜತ್ ಪಟಿದಾರ್ ಫಿಟ್ ಆಗಲು ಒಂದು ವಾರ ಸಮಯ ಸಿಕ್ಕಿದೆ. ಪ್ರಸ್ತುತ ರಜತ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಐಪಿಎಲ್ 2025 ಪುನರಾರಂಭವಾದ ತಕ್ಷಣ ಅವರು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಮೇ 10 ರ ಶನಿವಾರ, ರಜತ್ ಪಾಟಿದಾರ್ ಆರ್ಸಿಬಿ ತಂಡದೊಂದಿಗೆ ಲಕ್ನೋದಿಂದ ಬೆಂಗಳೂರಿಗೆ ಮರಳಿದ್ದಾರೆ. ಲಕ್ನೋದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಸ್ಥಗಿತಗೊಳಿಸಲಾಗಿರುವುದರಿಂದ ಅವರು ತಂಡದೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಒಂದು ವೇಳೆ ಪಾಟೀದಾರ್ ಲಕ್ನೋ ವಿರುದ್ಧ ಆಡದಿದ್ದರೆ, ಜಿತೇಶ್ ಶರ್ಮಾ ಆರ್ಸಿಬಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದರು.
IPL 2025: ಜಿತೇಶ್ ಶರ್ಮಾಗೆ ನಾಯಕತ್ವ ಹಸ್ತಾಂತರಿಸಿದ್ದ ಆರ್ಸಿಬಿ; ಶಾಕಿಂಗ್ ವಿಡಿಯೋ
ಈ ವಿಷಯದ ಬಗ್ಗೆ ಮಾತನಾಡಿರುವ ಜಿತೇಶ್ ಶರ್ಮಾ, ನನಗೆ ಸಿಕ್ಕ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಆರ್ಸಿಬಿ ಫ್ರಾಂಚೈಸಿ ನನಗೆ ತಂಡದ ನಾಯಕನಾಗುವ ಅವಕಾಶ ನೀಡಿತ್ತು. ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ವಿಷಯವಾಗಿದೆ. ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ಇಬ್ಬರೂ ಲಭ್ಯವಿಲ್ಲದ ಕಾರಣ ಮತ್ತು ಅವರನ್ನು ಬದಲಾಯಿಸುವುದು ದೊಡ್ಡ ಜವಾಬ್ದಾರಿಯಾಗಿರುವುದರಿಂದ ಸರಿಯಾದ ಸಂಯೋಜನೆ ಯಾವುದು ಎಂದು ನಾನು ಯೋಚಿಸುತ್ತಿದ್ದೆ ಎಂದು ಜಿತೇಶ್ ಹೇಳಿಕೊಂಡಿರುವ ವಿಡಿಯೋವನ್ನು ಆರ್ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ