Karnataka vs Uttar Pradesh: ಕರ್ನಾಟಕ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ

Karnataka vs Uttar Pradesh, 3rd Quarter-Final: ಈ ಗುರಿ ಬೆನ್ನತ್ತಿದ ಉತ್ತರ ಪ್ರದೇಶ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾದರು.

Karnataka vs Uttar Pradesh: ಕರ್ನಾಟಕ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ
Karnataka vs Uttar Pradesh
Updated By: ಝಾಹಿರ್ ಯೂಸುಫ್

Updated on: Jun 07, 2022 | 2:30 PM

ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್‌ಫೈನಲ್ (Ranji Trophy 2022, Quarterfinals) ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಉತ್ತರ ಪ್ರದೇಶ ತಂಡ ಕೇವಲ 155 ರನ್​ಗೆ ಆಲೌಟ್ ಆಗಿದೆ. ಕರ್ನಾಟಕ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಉತ್ತರ ಪ್ರದೇಶದ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಉತ್ತರಪ್ರದೇಶ ತಂಡದ ನಾಯಕ ಕರಣ್ ಶರ್ಮಾ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್​ಗಳು ಅತ್ಯುತ್ತಮ ಬೌಲಿಂಗ್​ ಪ್ರದರ್ಶಿಸಿದ್ದರು. ಪರಿಣಾಮ ಕರ್ನಾಟಕ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 10 ರನ್‌ಗೆ ಶಿವಂ ಮಾವಿ ಎಸೆತದಲ್ಲಿ ಔಟಾಗಿ ಹೊರನಡೆದರು.

ಇನ್ನು ಅರ್ಧಶತಕ ಗಳಿಸಿದ ರವಿಕುಮಾರ್ ಸಮರ್ಥ್ 30ನೇ ಓವರ್‌ನಲ್ಲಿ ಸೌರಭ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ (29) ಶಿವಂ ಮಾವಿ ಸ್ವಿಂಗ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರೆ, ಕೃಷ್ಣಮೂರ್ತಿ ಸಿದ್ಧಾರ್ಥ್‌ (37) ಅವರನ್ನು ಶಿವಂ ಮಾವಿ ಬೇಗನೆ ಪೆವಿಲಿಯನ್​ಗೆ ಕಳುಹಿಸಿದರು. ಇದರ ಬೆನ್ನಲ್ಲೇ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ (27) ಸೌರಭ್ ಕುಮಾರ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಮರು ಎಸೆತದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ನೀಡಿತು.

ಇದಾಗ್ಯೂ ಮೊದಲ ದಿನದಾಟದಲ್ಲಿ 7 ವಿಕೆಟ್​ ಕಳೆದುಕೊಂಡು 213 ರನ್​ಗಳಿಸಿದ್ದ ಕರ್ನಾಟಕಕ್ಕೆ 2ನೇ ದಿನದಾಟದಲ್ಲಿ ಆಸರೆಯಾಗಿದ್ದು ಶ್ರೇಯಸ್ ಗೋಪಾಲ್. ಒಂದೆಡೆ 80 ಎಸೆತಗಳಲ್ಲಿ ಅಜೇಯ 56 ರನ್​ ಬಾರಿಸಿ ಶ್ರೇಯಸ್ ಗೋಪಾಲ್ ಮಿಂಚಿದರೆ, ಮತ್ತೊಂದೆಡೆ ವಿಕೆಟ್ ಉರುಳುತ್ತಾ ಸಾಗಿತು. ಪರಿಣಾಮ ಕರ್ನಾಟಕ ತಂಡದ ಮೊದಲ ಇನಿಂಗ್ಸ್​ 253 ರನ್​ಗಳಿಗೆ ಅಂತ್ಯವಾಯಿತು.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಈ ಗುರಿ ಬೆನ್ನತ್ತಿದ ಉತ್ತರ ಪ್ರದೇಶ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾದರು. 2ನೇ ಓವರ್​ನ ಮೊದಲ ಎಸೆತದಲ್ಲೇ ಸಮರ್ಥ್​ ಸಿಂಗ್​ರನ್ನು ಔಟ್ ಮಾಡಿ ವಿಜಯ್ ಕುಮಾರ್ ವೈಶಾಖ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಆರ್ಯನ್ ಜುಯೆಲ್​ರನ್ನು ರೋನಿತ್ ಮೋರೆ ಪೆವಿಲಿಯನ್​ಗೆ ಕಳುಹಿಸಿದರು. ಇದಾಗ್ಯೂ ಪ್ರಿಯಂ ಗರ್ಗ್ 39 ರನ್​ಗಳಿಸಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿಯದ ರೋನಿತ್ ಮತ್ತೊಂದು ಯಶಸ್ಸು ತಂದುಕೊಟ್ಟರು.

ನಾಯಕ ಕರಣ್ ಶರ್ಮಾರನ್ನು ವಿಜಯ್ ಕುಮಾರ್ ವೈಶಾಖ್ ಕೇವಲ 1 ರನ್​ಗೆ ಔಟ್ ಮಾಡಿದರೆ, 33 ರನ್​ಗಳಿಸಿದ ರಿಂಕು ಸಿಂಗ್ ಕೃಷ್ಣಪ್ಪ ಗೌತಮ್ ಅವರ ಸ್ಪಿನ್ ಮೋಡಿಗೆ ಬಲಿಯಾದರು. ಇನ್ನು ಧೃವ್ ಜುರೆಯಲ್ 9 ರನ್​ಗಳಿಸಿ ರೋನಿತ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪ್ರಿನ್ಸ್ ಯಾದವ್​ರನ್ನು ಶೂನ್ಯಕ್ಕೆ ಔಟ್ ಮಾಡಿದ ವಿಧ್ವತ್ ಕಾವೇರಪ್ಪ ಮತ್ತೊಂದು ಯಶಸ್ಸು ತಂದುಕೊಟ್ಟರು. ಹಾಗೆಯೇ ಸೌರಭ್ ಕುಮಾರ್​ರನ್ನು ಕೃಷ್ಣಪ್ಪ ಗೌತಮ್ ಅವರು ಶೂನ್ಯ ಔಟ್ ಮಾಡಿದರು.

ಹೀಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಕರ್ನಾಟಕ ಬೌಲರ್​ಗಳು 111 ರನ್​ಗಳಿಗೆ 9 ವಿಕೆಟ್ ಕಬಳಿಸಿದ್ದರು. ಆದರೆ ಕೊನೆಯ ವಿಕೆಟ್​ ವೇಳೆ ಶಿವಂ ಮಾವಿ ಅಂಕಿತ್ ರಜಪೂತ್​ ಜೊತೆಗೂಡಿ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕೊನೆಯ ವಿಕೆಟ್​ಗೆ 44 ರನ್​ಗಳ ಜೊತೆಯಾಟ ಮೂಡಿಬಂತು. ಅಂತಿಮವಾಗಿ ಶ್ರೇಯಸ್ ಗೋಪಾಲ್ 33 ರನ್​ ಬಾರಿಸಿದ್ದ ಶಿವಂ ಮಾವಿಯ ವಿಕೆಟ್ ಪಡೆಯುವ ಮೂಲಕ ಉತ್ತರ ಪ್ರದೇಶ ತಂಡವನ್ನು 155 ರನ್​ಗಳಿಗೆ ಆಲೌಟ್ ಮಾಡಿದರು.

ಕರ್ನಾಟಕ ಪರ ರೋನಿತ್ ಮೋರೆ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಹಾಗೂ ವಿಜಯ್ ಕುಮಾರ್ ವೈಶಾಖ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಉತ್ತರ ಪ್ರದೇಶ ತಂಡವು ಮೊದಲ ಇನಿಂಗ್ಸ್​ನಲ್ಲಿ 98 ರನ್​ಗಳ ಹಿನ್ನಡೆ ಅನುಭವಿಸಿದೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.