ಬಿಸಿಸಿಐ ಭಯ..! ಐಸಿಸಿ ಸಭೆಗೆ ಟ್ರೋಫಿ ಕಳ್ಳ ಮೊಹ್ಸಿನ್ ನಖ್ವಿ ಗೈರು?
India's Asia Cup 2025 Trophy Dispute: ಭಾರತ 2025 ರ ಏಷ್ಯಾಕಪ್ ಗೆದ್ದಿದ್ದರೂ, ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಹಸ್ತಾಂತರಿಸಲು ವಿಳಂಬ ಮಾಡುತ್ತಿದ್ದಾರೆ. ದುಬೈಗೆ ಬಂದು ಟ್ರೋಫಿ ಪಡೆಯುವಂತೆ ಅವರು ಬಿಸಿಸಿಐಗೆ ಹೇಳಿದ್ದಾರೆ. ನಖ್ವಿ ಮೊಂಡುತನದಿಂದಾಗಿ ಕೋಪಗೊಂಡಿರುವ ಬಿಸಿಸಿಐ, ನವೆಂಬರ್ 4 ರಂದು ದುಬೈನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ದೂರು ನೀಡಲು ಸಿದ್ಧವಾಗಿದೆ. ನಖ್ವಿ ಐಸಿಸಿ ಸಭೆಯಿಂದ ದೂರ ಉಳಿಯುವ ಸಾಧ್ಯತೆಯೂ ಇದೆ.

ಭಾರತ ತಂಡ 2025 ರ ಏಷ್ಯಾಕಪ್ (Asia Cup 2025) ಗೆದ್ದು ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಆದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಇನ್ನೂ ಕೂಡ ಭಾರತಕ್ಕೆ ಟೂರ್ನಮೆಂಟ್ ಟ್ರೋಫಿಯನ್ನು ನೀಡಿಲ್ಲ. ಇತ್ತೀಚೆಗೆ, ಬಿಸಿಸಿಐ (BCCI) ಎಸಿಸಿಗೆ ಪತ್ರ ಬರೆದು ಟ್ರೋಫಿಯನ್ನು ಮುಂಬೈಗೆ ಕಳುಹಿಸುವಂತೆ ವಿನಂತಿಸಿತ್ತು. ಆದರೆ ನಖ್ವಿ ಮಾತ್ರ ತಮ್ಮ ಮೊಂಡುತನವನ್ನು ಬಿಟ್ಟಿಲ್ಲ. ಟ್ರೋಫಿ ಬೇಕೆಂದರೆ ಬಿಸಿಸಿಐ ಪ್ರತಿನಿಧಿ ಹಾಗೂ ಲಭ್ಯವಿರುವ ಆಟಗಾರರು ದುಬೈ ಕೇಂದ್ರ ಕಚೇರಿಗೆ ಬಂದು ಅದನ್ನು ಸ್ವೀಕರಿಸಲಿ ಎಂಬುದು ನಖ್ವಿ ವಾದ. ಆದರೆ ಬಿಸಿಸಿಐ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ನಖ್ವಿಯ ನಾಟಕದಿಂದ ಕೋಪಗೊಂಡಿರುವ ಬಿಸಿಸಿಐ ಈ ಬಗ್ಗೆ ದುಬೈನಲ್ಲಿ ನಡೆಯಲಿರುವ ನಾಲ್ಕು ದಿನಗಳ ಐಸಿಸಿ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಐಸಿಸಿಗೆ ದೂರು ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಆದರೆ ಟ್ರೋಫಿ ಕೊಡದೆ ಸತಾಯಿಸುತ್ತಿರುವ ನಖ್ವಿ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು?
ವಾಸ್ತವವಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ದುಬೈನಲ್ಲಿ ನಡೆಯಲಿರುವ ನಾಲ್ಕು ದಿನಗಳ ಐಸಿಸಿ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ. ದೇಶೀಯ ರಾಜಕೀಯ ಸಮಸ್ಯೆಗಳ ಕಾರಣದಿಂದಾಗಿ ನಖ್ವಿ ಈ ಸಭೆಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಪಿಸಿಬಿ ಮೂಲವೊಂದು ತಿಳಿಸಿರುವ ಪ್ರಕಾರ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಮೈರ್ ಸೈಯದ್ ಅವರು ನಖ್ವಿ ಬದಲಿಗೆ ಸಿಇಒಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಖ್ವಿ ದುಬೈಗೆ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಸೈಯದ್ ನವೆಂಬರ್ 7 ರಂದು ನಡೆಯಲಿರುವ ನಿರ್ಣಾಯಕ ಮಂಡಳಿ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಬಹುದು. ಆದಾಗ್ಯೂ, ನಖ್ವಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಗೆ ಹಾಜರಾಗುವ ಸಾಧ್ಯತೆಯೂ ಇದೆ.
ಏಷ್ಯಾಕಪ್ ಟ್ರೋಫಿ ವಿಚಾರದಲ್ಲಿ ಮೊಂಡುತನ ಮುಂದುವರೆಸಿದ ಮೊಹ್ಸಿನ್ ನಖ್ವಿ
ದೇವಜಿತ್ ಸೈಕಿಯಾ ಎಚ್ಚರಿಕೆ
ಮೊಹ್ಸಿನ್ ನಖ್ವಿಯ ಈ ನಡೆಯಿಂದ ತಾಳ್ಮೆ ಕಳೆದುಕೊಂಡಿರುವ ಬಿಸಿಸಿಐ, ಈ ಬಗ್ಗೆ ಐಸಿಸಿಗೆ ದೂರು ನೀಡುವುದಾಗಿ ಹೇಳಿಕೊಂಡಿದೆ. ಈ ವಿಷಯದ ಕುರಿತು ಮಾತನಾಡಿದ ದೇವಜಿತ್ ಸೈಕಿಯಾ, ‘ಹತ್ತು ದಿನಗಳ ಹಿಂದೆ, ನಾವು ಎಸಿಸಿ ಅಧ್ಯಕ್ಷರಿಗೆ ಸಾಧ್ಯವಾದಷ್ಟು ಬೇಗ ಬಿಸಿಸಿಐಗೆ ಟ್ರೋಫಿಯನ್ನು ಹಸ್ತಾಂತರಿಸುವಂತೆ ವಿನಂತಿಸಿ ಪತ್ರ ಬರೆದಿದ್ದೆವು. ಆದರೆ, ಇಲ್ಲಿಯವರೆಗೆ ನಮಗೆ ಟ್ರೋಫಿ ಸಿಕ್ಕಿಲ್ಲ. ನಾವು ಇನ್ನೂ ಒಂದು ದಿನ ಕಾಯುತ್ತಿದ್ದೇವೆ. ನವೆಂಬರ್ 3 ರೊಳಗೆ ನಮಗೆ ಟ್ರೋಫಿ ಸಿಗದಿದ್ದರೆ, ನವೆಂಬರ್ 4 ರಂದು ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನ ಅತ್ಯುನ್ನತ ಸಂಸ್ಥೆಗೆ ನಮ್ಮ ದೂರು ಸಲ್ಲಿಸುತ್ತೇವೆ. ಐಸಿಸಿ ನ್ಯಾಯ ಒದಗಿಸುತ್ತದೆ ಮತ್ತು ಭಾರತಕ್ಕೆ ಸಾಧ್ಯವಾದಷ್ಟು ಬೇಗ ಟ್ರೋಫಿ ಪಡೆಯಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Tue, 4 November 25
