
ಕೊಲಂಬೊದಲ್ಲಿ (Colombo Test) ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (India vs Sri Lanka) ಮೇಲುಗೈ ಸಾಧಿಸಿದೆ. ಆದಾಗ್ಯೂ ತಂಡದ ಅನುಭವಿ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಭುಜದ ಗಾಯದಿಂದಾಗಿ ಮೂರನೇ ದಿನದಂದು ತಂಡದೊಂದಿಗೆ ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ ಅವರ ಬದಲಿಗೆ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದರು. ಇದೀಗ ಮೂರನೇ ದಿನದಾಟ ಮುಗಿದ ಬಳಿಕ ರಿಷಭ್ ಪಂತ್ ಮೈದಾನಕ್ಕಿಳಿಯುವ ಬಗ್ಗೆ ಮಾಹಿತಿ ನೀಡಿದ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಪಂತ್ ಆಡುವ ಬಗ್ಗೆ ಭರವಸೆ ನೀಡಿದ್ದಾರೆ.
‘ರಿಷಭ್ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಅವರಿಗೆ ತುಂಬಾ ನೋವಾಗಿದೆ. ಇಂದು ಬೆಳಿಗ್ಗೆ ಅವರು ಮುಕ್ತವಾಗಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಇಂದು ಅವರನ್ನು ಮೈದಾನಕ್ಕಿಳಿಸಲಿಲ್ಲ. ನಾವು ಅವರನ್ನು ರಾತ್ರಿಯಿಡೀ ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ಬುಧವಾರ ಅವರು ಆಡುವ ಭರವಸೆ ಇದೆ. ರಿಷಭ್ ಪಂತ್ಗೆ ಆಟದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅಸಾಧಾರಣವಾಗಿರುವುದರಿಂದ ಅವರನ್ನು ಮೈದಾನದಲ್ಲಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ” ಎಂದು ಮಾರ್ಕೆಲ್ ಹೇಳಿದರು.
ಇನ್ನು ಕುಲ್ದೀಪ್ರನ್ನು ಆಡಿಸದಿರುವ ಬಗ್ಗೆ ಮಾಹಿತಿ ನೀಡಿದ ಮಾರ್ಕೆಲ್, ‘ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕುಲ್ದೀಪ್ ಯಾದವ್ ವೈರಲ್ ಜ್ವರದಿಂದ ಬಳಲದಿದ್ದರೆ, ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಇರುತ್ತಿದ್ದರು. ಕುಲ್ದೀಪ್ ವೈರಲ್ ಜ್ವರದಿಂದ ಬಳಲುತ್ತಿರುವ ಕಾರಣ ಕೊಲಂಬೊ ಟೆಸ್ಟ್ಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದಿದ್ದಾರೆ. ಇನ್ನು ನಾಲ್ಕನೇ ದಿನದಾಟದ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಮಾರ್ಕೆಲ್,‘ ಬುಧವಾರ ಟೀಂ ಇಂಡಿಯಾ ಶ್ರೀಲಂಕಾದ ಉಳಿದ ಎರಡು ವಿಕೆಟ್ಗಳನ್ನು ಸಾಧ್ಯವಾದಷ್ಟು ಬೇಗ ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಳ್ಳಲು ಬಯಸುತ್ತದೆ. ಹೀಗಾಗಿ ಬೌಲರ್ಗಳು ಸರಿಯಾದ ಲೈನ್ ಮತ್ತು ಲೆಂತ್ನಲ್ಲಿ ನಿರಂತರವಾಗಿ ಬೌಲಿಂಗ್ ಮಾಡಬೇಕಾಗುತ್ತದೆ ಮತ್ತು ಪಾಲುದಾರಿಕೆಯಲ್ಲಿ ವಿಕೆಟ್ಗಳನ್ನು ಪಡೆಯಬೇಕಾಗುತ್ತದೆ ಎಂದಿದ್ದಾರೆ.
ಜಡೇಜಾ ಮಾತು ಕೇಳಿ ಸತತ 22 ಬಾರಿ ಯಾಮಾರಿರುವ ನಾಯಕ
ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆತಿಥೇಯ ಶ್ರೀಲಂಕಾ ತಂಡ ಮೂರನೇ ದಿನದಾಟದಂತ್ಯಕ್ಕೆ 8 ವಿಕೆಟ್ಗಳನ್ನು ಕಳೆದುಕೊಂಡು 265 ರನ್ ಕಲೆಹಾಕಿದೆ. ಮಳೆಯಿಂದಾಗಿ ಮೂರನೇ ದಿನದಾಟವನ್ನು ಬೇಗನೇ ಅಂತ್ಯಗೊಳಿಸಲಾಯಿತು. ಮೂರನೇ ದಿನದಾಟದಂತ್ಯಕ್ಕೆ ಶ್ರೀಲಂಕಾ ಪರ ಲಹಿರು ಕುಮಾರ 8 ರನ್ ಮತ್ತು ಸೋನಲ್ ದಿನುಷಾ 85 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.