
ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಹಾಗೂ ತಂಡದಲ್ಲಿನ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಶ್ವಿನ್, ರೋಹಿತ್ ಮತ್ತು ಕೊಹ್ಲಿ ಅವರ ಸ್ಥಾನವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡುವ ಧೈರ್ಯ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ಅಶ್ವಿನ್ ಪ್ರಕಾರ, ಈ ಇಬ್ಬರು ದಿಗ್ಗಜರನ್ನು ಪ್ರಸ್ತುತ ಸನ್ನಿವೇಶದಲ್ಲಿ ತಂಡದಿಂದ ಕೈಬಿಡಲು ಸಾಧ್ಯವೇ ಇಲ್ಲ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆಟ್ಟದಷ್ಟು ರನ್ ಗಳಿಸಿ ದಶಕಗಳಿಂದ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ಕೈ ಬಿಡುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ರೋಹಿತ್ ಒಬ್ಬರೇ ಏಕದಿನ ಕ್ರಿಕೆಟ್ನಲ್ಲಿ ಸುಮಾರು 12,000 ರನ್ಗಳಿಸಿದ್ದಾರೆ.
ಇಂತಹ ದಿಗ್ಗಜ ಆಟಗಾರರನ್ನು ಕೇವಲ ಕೆಲವು ಪಂದ್ಯಗಳ ಕಳಪೆ ಫಾರ್ಮ್ ಆಧರಿಸಿ ದಿಢೀರನೆ ತಂಡದಿಂದ ಹೊರಹಾಕುವ ಧೈರ್ಯ ಯಾವುದೇ ಆಯ್ಕೆಗಾರರಿಗೆ ಇರುವುದಿಲ್ಲ. ಅಂತಹ ಧೈರ್ಯವನ್ನು ಸಹ ಮಾಡಬೇಡಿ ಎಂದು ಅಶ್ವಿನ್ ಕಿವಿಮಾತು ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ದೊಡ್ಡ ಪಡೆಯೇ ಇದೆ.
ಒಂದು ವೇಳೆ ಆಯ್ಕೆ ಸಮಿತಿಯು ಇವರಿಬ್ಬರನ್ನು ತಂಡದಿಂದ ಕೈಬಿಡುವ ತೀರ್ಮಾನಕ್ಕೆ ಬಂದರೆ, ದೇಶಾದ್ಯಂತ ಅಭಿಮಾನಿಗಳಿಂದ ತಡೆಯಲು ಸಾಧ್ಯವಾಗದಂತಹ ಭಾರಿ ಆಕ್ರೋಶ ವ್ಯಕ್ತವಾಗುತ್ತದೆ.
ಇವರಿಬ್ಬರ ಅಭಿಮಾನಿಗಳ ಸಾರ್ವಜನಿಕ ಆಕ್ರೋಶವು ಭಾರತೀಯ ಕ್ರಿಕೆಟ್ ಮಂಡಳಿಯ ಮೇಲ್ಛಾವಣಿಯನ್ನೇ ಉರುಳಿಸುವಷ್ಟು ತೀವ್ರವಾಗಿರುತ್ತದೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವಂತಹ ನಿರ್ಧಾರಕ್ಕೆ ಕೈ ಹಾಕಬೇಡಿ ಅಶ್ವಿನ್ ಎಚ್ಚರಿಸಿದ್ದಾರೆ.
ಅಶ್ವಿನ್ ಪ್ರಕಾರ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂಬರುವ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ. ಅಲ್ಲಿಯವರೆಗೆ ಅವರು ಭಾರತ ತಂಡದ ಅವಿಭಾಜ್ಯ ಅಂಗವಾಗಿ ಮುಂದುವರೆಯಲಿ. ಕೆಲ ಪಂದ್ಯಗಳಲ್ಲಿನ ಕಳಪೆ ಫಾರ್ಮ್ ಅನ್ನೇ ಮುಂದಿಟ್ಟುಕೊಂಡು ಇಬ್ಬರು ದಿಗ್ಗಜರನ್ನು ಟಾರ್ಗೆಟ್ ಮಾಡುವುದು ಸರಿಯಾದ ನಡೆಯಲ್ಲ. ಹೀಗಾಗಿ ಇಬ್ಬರ ವಿಷಯದಲ್ಲಿ ಆಯ್ಕೆ ಸಮಿತಿ ಎಚ್ಚರಿಕೆಯಿಂದ ಇರಬೇಕೆಂದು ಅಶ್ವಿನ್ ಮಾರ್ಮಿಕವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ ಸ್ಮೃತಿ ಮಂಧಾನ!
ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನ ಕೇವಲ ಫಾರ್ಮ್ ಮೇಲೆ ನಿರ್ಧಾರವಾಗುವುದಿಲ್ಲ, ಬದಲಿಗೆ ಅವರು ಭಾರತೀಯ ಕ್ರಿಕೆಟ್ಗೆ ನೀಡಿರುವ ಕೊಡುಗೆ ಮತ್ತು ಅವರ ಹಿಂದಿರುವ ಕೋಟ್ಯಂತರ ಅಭಿಮಾನಿಗಳ ಶಕ್ತಿಯೇ ಅವರನ್ನು ರಕ್ಷಿಸುತ್ತದೆ. ಹೀಗಾಗಿ ಆಯ್ಕೆಗಾರರು ಎಚ್ಚರವಹಿಸುವುದು ಉತ್ತಮ ಎಂದು ಅಶ್ವಿನ್ ಬಹಿರಂಗ ಹೇಳಿಕೆಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.