IND-A vs SA-A: ರುತುರಾಜ್ ಶತಕ; ಮೊದಲ ಏಕದಿನ ಪಂದ್ಯ ಗೆದ್ದ ಭಾರತ
India A vs South Africa A: ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ನಡುವಿನ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ 6 ವಿಕೆಟ್ಗಳ ಗೆಲುವು ಸಾಧಿಸಿದೆ. ರುತುರಾಜ್ ಗಾಯಕ್ವಾಡ್ 117 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ದಕ್ಷಿಣ ಆಫ್ರಿಕಾ ಎ ನೀಡಿದ 286 ರನ್ಗಳ ಗುರಿಯನ್ನು ಭಾರತ ಎ 49.3 ಓವರ್ಗಳಲ್ಲಿ ಮುಟ್ಟಿ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು. ರಾಜ್ಕೋಟ್ನಲ್ಲಿ ಈ ಪಂದ್ಯ ನಡೆಯಿತು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಅಂದರೆ ನವೆಂಬರ್ 14 ರಿಂದ ಆರಂಭವಾಗುತ್ತಿದೆ. ಆದರೆ ಅದಕ್ಕೂ ಮುನ್ನ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ (India A vs South Africa A) ತಂಡಗಳ ನಡುವೆ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿ ಇಂದಿನಿಂದ ಆರಂಭವಾಗಿದ್ದು, ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಭಾರತ ತಂಡ ಗೆದ್ದುಕೊಂಡಿದೆ. ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಭಾರತಕ್ಕೆ 286 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ ಎ ತಂಡವು 49.3 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ ಜಯದ ನಗೆ ಬೀರಿತು.
ರುತುರಾಜ್ ಗಾಯಕ್ವಾಡ್ ಶತಕ
ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶತಕದ ಇನ್ನಿಂಗ್ಸ್ ಆಡಿದ ರುತುರಾಜ್ ಗಾಯಕ್ವಾಡ್ 117 ರನ್ ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇವರಲ್ಲದೆ ನಿತೀಶ್ ಕುಮಾರ್ ರೆಡ್ಡಿ 26 ಎಸೆತಗಳಲ್ಲಿ 37 ರನ್ ಮತ್ತು ನಿಶಾಂತ್ ಸಿಂಧು 26 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಒಂದು ಹಂತದಲ್ಲಿ ಭಾರತದ ಅಗತ್ಯ ರನ್ ದರ 7 ಕ್ಕಿಂತ ಹೆಚ್ಚಿತ್ತು, ಆದರೆ ನಿತೀಶ್ ಮತ್ತು ನಿಶಾಂತ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಭಾರತಕ್ಕೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ತಂದುಕೊಟ್ಟರು.
ಆಫ್ರಿಕಾ ಪರ ಮೂವರ ಅರ್ಧಶತಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಎ ತಂಡವು 53 ರನ್ಗಳಿಗೆ ಐದು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಕಂಡಿತು. ಇದರ ನಂತರ, ಡಯೇನ್ ಫಾರೆಸ್ಟರ್, ಡೆಲಾನೊ ಪೊಟ್ಗೀಟರ್ ಮತ್ತು ಬ್ಜಾರ್ನ್ ಫೋರ್ಟುಯಿನ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಡಯೇನ್ ಫಾರೆಸ್ಟರ್ 83 ಎಸೆತಗಳಲ್ಲಿ 77 ರನ್, ಡೆಲಾನೊ ಪೊಟ್ಗೀಟರ್ 105 ಎಸೆತಗಳಲ್ಲಿ 90 ರನ್ ಮತ್ತು ಬ್ಜಾರ್ನ್ ಫೋರ್ಟುಯಿನ್ 56 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಈ ಮೂವರ ಸಹಾಯದಿಂದ ದಕ್ಷಿಣ ಆಫ್ರಿಕಾ ಎ ತಂಡವು 50 ಓವರ್ಗಳಲ್ಲಿ 9 ವಿಕೆಟ್ಗೆ 285 ರನ್ ಗಳಿಸಿತು. ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ, ನಿಶಾಂತ್ ಸಂಧು, ರಿಯಾನ್ ಪರಾಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ತಲಾ ಒಂದು ವಿಕೆಟ್ ಪಡೆದರು.
ಭಾರತಕ್ಕೆ ರೋಚಕ ಜಯ
ಈ ಗುರಿ ಬೆನ್ನಟ್ಟಿದ ಭಾರತಕ್ಕೂ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ರಿಯಾನ್ ಪರಾಗ್ ಭಾರತದ ಪರ ಗಮನಾರ್ಹ ಪರಿಣಾಮ ಬೀರುವಲ್ಲಿ ವಿಫಲರಾದರು. ಆದಾಗ್ಯೂ ನಾಯಕ ತಿಲಕ್ ವರ್ಮಾ 39 ರನ್ ಗಳಿಸಿದರಾದರೂ ಅವರ ಬ್ಯಾಟಿಂಗ್ನಲ್ಲಿ ವೇಗ ಇರಲಿಲ್ಲ. ಆ ಬಳಿಕ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರುತುರಾಜ್ ಶತಕ ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರೆ, ಕೊನೆಯಲ್ಲಿ ನಿತೀಶ್ ಮತ್ತು ನಿಶಾಂತ್ ಅವರ ಇನ್ನಿಂಗ್ಸ್ ಭಾರತವನ್ನು ಗೆಲುವಿನತ್ತ ಕೊಂಡೊಯ್ದವು. ಸರಣಿಯ ಎರಡನೇ ಪಂದ್ಯವು ಈಗ ನವೆಂಬರ್ 16 ರಂದು ಅದೇ ಮೈದಾನದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
