
ಐಪಿಎಲ್ 2026ರ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರಾಗಿಯೂ, ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟಿದಾರ್ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆಯ್ಕೆಗಾರರ ಈ ನಡೆಗೆ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುಬ್ರಮಣ್ಯಂ ಬದ್ರೀನಾಥ್ ಮಾತ್ರ ಬಿಸಿಸಿಐ ಆಯ್ಕೆ ಸಮಿತಿಯ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಕ್ರಿಕ್ ವಿತ್ ಬದ್ರಿಯಲ್ಲಿ ಮಾತನಾಡಿರುವ ಬದ್ರೀನಾಥ್, ರಜತ್ ಪಾಟಿದಾರ್ ಮತ್ತು ಶಿವಂ ದುಬೆ ಅವರನ್ನು ಹೋಲಿಕೆ ಮಾಡುವುದು ತಪ್ಪು ಎಂದಿದ್ದಾರೆ.
“ದುಬೆ ಬದಲಿಗೆ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಫುಟ್ಬಾಲ್ನಲ್ಲಿ ಗೋಲ್ಕೀಪರ್ ಜಾಗಕ್ಕೆ ಫಾರ್ವರ್ಡ್ ಆಟಗಾರನನ್ನು ಬದಲಾಯಿಸಿದಂತೆ. ಶಿವಂ ದುಬೆ ಒಬ್ಬ ಫಿನಿಶರ್ ಮತ್ತು ತಂಡಕ್ಕೆ ಬೌಲಿಂಗ್ ಕೊಡುಗೆಯನ್ನೂ ನೀಡಬಲ್ಲ ಆಲ್-ರೌಂಡರ್ ಆಗಿದ್ದಾರೆ. ಆದರೆ ರಜತ್ ಪಾಟಿದಾರ್ ಒಬ್ಬ ಪೂರ್ಣ ಪ್ರಮಾಣ ಬ್ಯಾಟರ್”.
“ಹೀಗಾಗಿ ಶಿವಂ ದುಬೆ ಬದಲಿಗೆ ರಜತ್ ಪಾಟಿದಾರ್ಗೆ ಅವಕಾಶ ನೀಡಬೇಕಿತ್ತು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಪಾಟಿದಾರ್ ಟಾಪ್-4 ನಲ್ಲಿ ಆಡುವ ಬ್ಯಾಟರ್. ಟೀಮ್ ಇಂಡಿಯಾದಲ್ಲಿ ಅಗ್ರ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟರ್ಗಳಿದ್ದಾರೆ. ಹೀಗಾಗಿ ಅವರು ಅವಕಾಶ ವಂಚಿತರಾಗಿದ್ದಾರೆ” ಎಂದು ಬದ್ರೀನಾಥ್ ಅಭಿಪ್ರಾಯಪಟ್ಟಿದ್ದಾರೆ.
ಬದ್ರೀನಾಥ್ ಪ್ರಕಾರ, ರಜತ್ ಪಾಟೀದಾರ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಅವರು ಆಲ್-ರೌಂಡರ್ಗಳ ಜೊತೆಯಲ್ಲ, ಬದಲಿಗೆ ಅಗ್ರ ಕ್ರಮಾಂಕದ ಶುದ್ಧ ಬ್ಯಾಟರ್ಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಇಲ್ಲಿ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ತಿಲಕ್ ವರ್ಮಾ ಇದ್ದಾರೆ.
“ಒಂದು ವೇಳೆ ಪಾಟಿದಾರ್ಗೆ ಅವಕಾಶ ನೀಡಬೇಕೆಂದರೆ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಆದರೆ ಪ್ರಸ್ತುತ ಫಾರ್ಮ್ ಆಧಾರದ ಮೇಲೆ ಅದು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಭಾರತ ತಂಡದಲ್ಲಿ ರಜತ್ ಪಾಟಿದಾರ್ ಅವರಿಗೆ ಯಾವುದೇ ಜಾಗ ಖಾಲಿ ಇಲ್ಲ” ಎಂದು ಬದ್ರೀನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಅನ್ಫಿಟ್… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?
“ಹೀಗಾಗಿ ಪ್ರಸ್ತುತ ಟೀಮ್ ಇಂಡಿಯಾದ ಆಯ್ಕೆ ಸರಿಯಾಗಿಯೇ ಇದೆ. ಇಲ್ಲಿ ಆಲ್ರೌಂಡರ್ ಆಗಿರುವ ಶಿವಂ ದುಬೆ ಬದಲಿಗೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಹೇಳುವುದು ಸರಿಯಿಲ್ಲ” ಎಂದು ಸುಬ್ರಮಣ್ಯಂ ಬದ್ರೀನಾಥ್ ಹೇಳಿದ್ದಾರೆ.
ಭಾರತ ಟಿ20 ತಂಡ
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್. ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.