ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ… ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ !

IPL 2026 LSG vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) 68ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 196 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಶ್ರೇಯಸ್ ಅಯ್ಯರ್ (101) ಅವರ ಅಜೇಯ ಶತಕದೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 18 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ... ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ !
Sachin - Arjun

Updated on: May 24, 2026 | 10:17 AM

ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ 2026ರ ಸೀಸನ್‌ನ ಮೊದಲ ಪಂದ್ಯದ ಪ್ರದರ್ಶನವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಸಂದೇಶವೊಂದು ಸದ್ಯ ಭಾರಿ ವೈರಲ್ ಆಗಿದೆ. ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಅರ್ಜುನ್ ತೆಂಡೂಲ್ಕರ್ ಈ ಸೀಸನ್‌ನ ತಮ್ಮ ಮೊದಲ ಪಂದ್ಯವನ್ನು ಆಡಿದರು.

ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ತಂಡಕ್ಕೆ ಟ್ರೇಡ್ ಆಗಿದ್ದ ಅರ್ಜುನ್, ಇಡೀ ಸೀಸನ್ ಬೆಂಚ್ ಕಾಯ್ದ ನಂತರ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದರು. ಈ ಸುದೀರ್ಘ ಕಾಯುವಿಕೆ ಮತ್ತು ಅವರ ಶ್ರಮವನ್ನು ಕಂಡು ತಂದೆಯಾಗಿ ಸಚಿನ್ ಭಾವುಕರಾಗಿದ್ದಾರೆ.

“ತಾಳ್ಮೆಯಿಂದ ಕಾಯ್ದು ಗೆದ್ದೆ”

ಪಂದ್ಯ ಮುಗಿದ ತಕ್ಷಣ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ಮಗನನ್ನು ಬೆನ್ನುತಟ್ಟಿ ಸುದೀರ್ಘ ಸಂದೇಶ ಬರೆದಿದ್ದಾರೆ:

“ಅರ್ಜುನ್, ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಇಡೀ ಸೀಸನ್‌ನಲ್ಲಿ ನಿನ್ನನ್ನು ನೀನು ಮುನ್ನಡೆಸಿಕೊಂಡ ರೀತಿ ಅದ್ಭುತ. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅತ್ಯಂತ ತಾಳ್ಮೆಯಿಂದ, ಸದ್ದಿಲ್ಲದೆ ಕಠಿಣ ಪರಿಶ್ರಮ ಪಡುತ್ತಾ ಪಾಸಿಟಿವ್ ಆಗಿದ್ದೆ. ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ನೀನು ಧೃತಿಗೆಡಲಿಲ್ಲ. ಕ್ರಿಕೆಟ್ ಕೌಶಲ್ಯದಷ್ಟೇ ಮನುಷ್ಯನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಇಂದು ನೀನು ಇವೆರಡನ್ನೂ ಅತ್ಯಂತ ಸುಂದರವಾಗಿ ನಿಭಾಯಿಸಿದ್ದೀಯಾ. ಸದಾ ನೆಲದ ಮೇಲೆಯೇ ನಿನ್ನ ಕಾಲುಗಳಿರಲಿ, ಆಟದ ಮೇಲಿನ ನಿನ್ನ ಪ್ರೀತಿ ಹೀಗೆಯೇ ಮುಂದುವರಿಯಲಿ.” ಎಂದು ಸಚಿನ್ ತೆಂಡೂಲ್ಕರ್ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ?

ಅರ್ಜುನ್ ಪ್ರದರ್ಶನ ಹೇಗಿತ್ತು?

ಲಕ್ನೋ ಸೂಪರ್ ಜೈಂಟ್ಸ್​ ತಂಡವು ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರೂ, ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದರು.

    •  ಅತ್ಯುತ್ತಮ ಯಾರ್ಕರ್: ಪಂಜಾಬ್ ಕಿಂಗ್ಸ್ ತಂಡದ ಅಪಾಯಕಾರಿ ಓಪನರ್ ಪ್ರಭ್‌ಸಿಮ್ರಾನ್ ಸಿಂಗ್ ಅವರಿಗೆ ತೀಕ್ಷ್ಣವಾದ ಯಾರ್ಕರ್ ಎಸೆಯುವ ಮೂಲಕ ಕ್ಲೀನ್ ಬೌಲ್ ಮಾಡಿ, ಐಪಿಎಲ್ 2026ರ ತಮ್ಮ ಮೊದಲ ವಿಕೆಟ್ ಪಡೆದರು.
    • ಮಿತವ್ಯಯದ ಬೌಲಿಂಗ್: ಲಕ್ನೋ ತಂಡದ ಇತರ ಅನುಭವಿ ಬೌಲರ್‌ಗಳು ರನ್ ಬಿಟ್ಟುಕೊಡಲು ಪರದಾಡುತ್ತಿದ್ದಾಗ, ಅರ್ಜುನ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 36 ರನ್ ನೀಡಿ 1 ವಿಕೆಟ್ ಪಡೆದು ಅತ್ಯಂತ ಕಂಟ್ರೋಲ್ಡ್ ಬೌಲಿಂಗ್ ಪ್ರದರ್ಶಿಸಿದರು.

ನೆಟ್ಟಿಗರ ಮನಗೆದ್ದ ಸಚಿನ್ ಮಾತು:

ಸ್ಟಾರ್ ಕ್ರಿಕೆಟರ್ ಮಗನಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ, ತಂಡದಲ್ಲಿ ಅವಕಾಶ ಸಿಗದಿದ್ದರೂ ಸದ್ದಿಲ್ಲದೆ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದ ಅರ್ಜುನ್ ತೆಂಡೂಲ್ಕರ್ ಅವರ ಶಿಸ್ತು ಹಾಗೂ ಅದಕ್ಕೆ ತಕ್ಕಂತೆ ಸಚಿನ್ ನೀಡಿರುವ ಮಾರ್ಗದರ್ಶನಕ್ಕೆ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಂದೆಯಾಗಿ ಸಚಿನ್ ನೀಡಿರುವ ಈ ಕಿವಿಮಾತು ಕೇವಲ ಅರ್ಜುನ್ ಗೆ ಮಾತ್ರವಲ್ಲ, ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೂ ಪ್ರೇರಣೆಯಾಗಿದೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us