
10, 6, 0, 24, ಮತ್ತು 6 ರನ್… ಇದು ಟಿ20 ವಿಶ್ವಕಪ್ಗೂ ಮುನ್ನ ಸಂಜು ಸ್ಯಾಮ್ಸನ್ ಕಲೆಹಾಕಿದ ಸ್ಕೋರ್. ಅಂದರೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಯಾಮ್ಸನ್ 5 ಇನಿಂಗ್ಸ್ಗಳ ಮೂಲಕ ಗಳಿಸಿದ್ದು ಕೇವಲ 46 ರನ್ಗಳು ಮಾತ್ರ. ಈ ಹೀನಾಯ ಪ್ರದರ್ಶನದಿಂದ ಕುಗ್ಗಿದ್ದ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಚಿತ್ರಣವನ್ನೇ ಬದಲಿಸಿದ್ದು ಆ ಒಂದು ಕರೆ.
ಹೌದು, ಟಿ20 ವಿಶ್ವಕಪ್ನಲ್ಲಿನ ಅಮೋಘ ಪ್ರದರ್ಶನದ ಬಳಿಕ ಸಂಜು ಸ್ಯಾಮ್ಸನ್ ಇದರ ಶ್ರೇಯಸ್ಸು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲಬೇಕು ಎಂದಿದ್ದರು. ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮಾನಸಿಕವಾಗಿ ಕುಗ್ಗಿದ್ದಾಗ ನಾನು ಸಚಿನ್ ಸರ್ಗೆ ಕರೆ ಮಾಡಿದ್ದೆ. ಈ ವೇಳೆ ಅವರು ನೀಡಿದ ಸಲಹೆ ಹಾಗೂ ಆತ್ಮ ವಿಶ್ವಾಸವೇ ನನ್ನ ಪ್ರದರ್ಶನಕ್ಕೆ ಮುಖ್ಯ ಕಾರಣ ಎಂದಿದ್ದರು.
ಟಿ20 ವಿಶ್ವಕಪ್ಗೂ ಮುನ್ನ ನಾನು ವಿಭಿನ್ನ ಯೋಜನೆಯನ್ನು ಅಳವಡಿಸಿಕೊಂಡಿದ್ದೆ. ಹೀಗಾಗಿ ಪ್ರತಿ ಚೆಂಡಿನಲ್ಲೂ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದೆ. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ನಾನು ನನ್ನ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಆದರೆ ಇದಾಗ್ಯವುದೂ ಸಹ ಫಲ ನೀಡಲಿಲ್ಲ. ಅಂತಿಮವಾಗಿ, ವಿಶ್ವಕಪ್ಗೆ ಮೊದಲು ನಾನು ಹೊಸ ಆಟದ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಅದಕ್ಕೂ ಮುನ್ನ ನಾನು ಸಚಿನ್ ತೆಂಡೂಲ್ಕರ್ ಸರ್ಗೆ ಕರೆ ಮಾಡಿದ್ದೆ.
ನನ್ನ ವೈಫಲ್ಯದ ಸಮದಯದಲ್ಲಿ ಸಚಿನ್ ಸರ್ ನೀಡಿದ ಬೆಂಬಲವು ತನ್ನ ಅತಿ ದೊಡ್ಡ ಬಲ. ನಾನು ಅವರೊಂದಿಗೆ ಕೆಲ ಸಮಯದಿಂದ ನಿರಂತರ ಸಂಪರ್ಕದಲ್ಲಿದ್ದೆ. ಐಪಿಎಲ್ ಸಂದರ್ಭಗಳ ಹೊರತಾಗಿ, ಅವರು ಸಂದೇಶಗಳ ಮೂಲಕವೂ ಸಂವಹನ ನಡೆಸಿದ್ದರು.
ನಾನು ಫಾರ್ಮ್ ಕಳೆದುಕೊಂಡು ಕುಗ್ಗಿದ್ದಾಗ, ನನ್ನ ಮನಸ್ಸಿಗೆ ಬಂದ ಮೊದಲ ಹೆಸರು ಸಚಿನ್ ಸರ್. ಹೀಗಾಗಿ ನಾನು ಅವರನ್ನು ಸಂಪರ್ಕಿಸಿದೆ. ಅವರು ಸುಮಾರು 25 ನಿಮಿಷಗಳ ಕಾಲ ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮ ವೃತ್ತಿಜೀವನದ ಕಷ್ಟದ ಸಮಯಗಳ ಅನುಭವಗಳನ್ನು, ಅವರ ಆಲೋಚನಾ ವಿಧಾನ, ಅಭ್ಯಾಸ ಮತ್ತು ಸಂದರ್ಭಗಳನ್ನು ನಿಭಾಯಿಸುವ ರೀತಿಯನ್ನು ಹಂಚಿಕೊಂಡರು.
ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್ಗೆ 12 ತಂಡಗಳು ನೇರ ಆಯ್ಕೆ
ಸಚಿನ್ ಸರ್ ನೀಡಿದ ಸಲಹೆ ನನಗೆ ಹೊಸ ಶಕ್ತಿ ಮತ್ತು ಸ್ಪಷ್ಟತೆಯನ್ನು ನೀಡಿತು. ಈ ಒಂದು ಕರೆ ಫಾರ್ಮ್ಗೆ ಮರಳುವಂತೆ ಮಾಡಿತು. ಅಷ್ಟೇ ಅಲ್ಲದೆ ಫೈನಲ್ ಪಂದ್ಯಕ್ಕೂ ಮೊದಲು ನಾನು ಮತ್ತೆ ಸಚಿನ್ ಸರ್ಗೆ ಕರೆ ಮಾಡಿ ಮಾತನಾಡಿದೆ. ಈ ವೇಳೆಯೂ ಅವರು ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದರು. ಅವರ ಸಲಹೆಯಿಂದಾಗಿ ನನಗೆ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.