‘ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ’; ಗಂಭೀರ್ ಮುಖ್ಯ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿಲ್ಲ..?

Sourav Ganguly: ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಬಹುದು ಎಂಬ ಸುದ್ದಿ ಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮಾಡಿರುವ ಪೋಸ್ಟ್ ಗಮನ ಸೆಳೆದಿದ್ದು, ಗಂಗೂಲಿಗೆ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗುವುದು ಇಷ್ಟವಿಲ್ಲ ಎಂಬುದನ್ನು ಈ ಪೋಸ್ಟ್ ಮುಖಾಂತರ ಹೇಳುತ್ತಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

‘ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ’; ಗಂಭೀರ್ ಮುಖ್ಯ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿಲ್ಲ..?
ಸೌರವ್ ಗಂಗೂಲಿ, ಗೌತಮ್ ಗಂಭೀರ್

Updated on: May 30, 2024 | 3:23 PM

ಪ್ರಸ್ತುತ, ಟೀಂ ಇಂಡಿಯಾದ (Team India) ಮುಖ್ಯ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿಯು ಮುಂಬರುವ ಟಿ20 ವಿಶ್ವಕಪ್ (T20 World Cup 2024) ನಂತರ ಕೊನೆಗೊಳ್ಳಲಿದೆ. ಇದಾದ ಬಳಿಕ ಜುಲೈ 1ರಂದು ನೂತನ ಮುಖ್ಯ ಕೋಚ್‌ಗೆ ಟೀಂ ಇಂಡಿಯಾದ ಕಮಾಂಡ್ ಹಸ್ತಾಂತರವಾಗಲಿದೆ. ಆದರೆ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ಖ್ಯಾತ ಆಟಗಾರರು ಈ ಹುದ್ದೆಯನ್ನು ನಿರಾಕರಿಸಿದ್ದಾರೆ. ಹೀಗಾಗಿ ಪ್ರತಿಭಾವಂತ ಕೋಚ್ ಹುಡುಕಾಟಕ್ಕೆ ಸ್ವತಃ ಇಳಿದಿರುವ ಬಿಸಿಸಿಐ (BCCI), ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ (Gautam Gambhir) ಅವರನ್ನು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಿ ನೇಮಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ಗೌತಮ್ ಗಂಭೀರ್ ಅವರ ಎಲ್ಲಾ ಷರತ್ತುಗಳನ್ನು ಬಿಸಿಸಿಐ ಒಪ್ಪಿಕೊಂಡಿದ್ದು, ಅವರು ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಏತನ್ಮಧ್ಯೆ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ಬಗ್ಗೆ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಗಂಭೀರ್ ಮುಖ್ಯ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿಲ್ಲವೇ?

ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬ ಪ್ರಶ್ನೆಗಳು ಭಾರತ ತಂಡದ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಈಗಾಗಲೇ ಮೂಡಿದೆ. ಏಕೆಂದರೆ ಪ್ರಪಂಚದಾದ್ಯಂತದ ಅನೇಕ ದಿಗ್ಗಜ ಕ್ರಿಕೆಟಿಗರು ಈ ಹುದ್ದೆಗೇರಲು ನಿರಾಕರಿಸಿದ್ದಾರೆ. ರಿಕಿ ಪಾಂಟಿಂಗ್‌ನಿಂದ ಹಿಡಿದು ಜಸ್ಟಿನ್ ಲ್ಯಾಂಗರ್ ತನಕ ಎಲ್ಲರೂ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಬೇಡವೆನ್ನುತ್ತಿದ್ದಾರೆ. ಅಲ್ಲದೆ ಈಗಿರುವ ರಾಹುಲ್ ದ್ರಾವಿಡ್ ಕೂಡ ಈ ಹುದ್ದೆಯಲ್ಲಿ ಮುಂದುವರೆಯಲು ನಿರಾಕರಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ ಕೂಡ ಈ ಹುದ್ದೆಯನ್ನು ನಿರಾಕರಿಸಿದ್ದರು.

ಹೀಗಾಗಿ ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಮುಂಜುಗುರಕ್ಕೊಳಗಾಗುವ ಪರಿಸ್ಥಿತಿಯಲ್ಲಿತ್ತು. ಹೀಗಾಗಿ ಮುಜುಗರ ತಪ್ಪಿಸಿಕೊಳ್ಳಲು ಸ್ವತಃ ತಾನೇ ಮುಖ್ಯ ಕೋಚ್ ಹುಡುಕಾಟಕ್ಕೆ ಇಳಿದಿರುವ ಬಿಸಿಸಿಐ, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಹಿಂದೆ ಬಿದ್ದಿದೆ. ಐಪಿಎಲ್ ಫೈನಲ್ ಪಂದ್ಯದ ನಡುವೆ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಬಹುದು ಎಂಬ ಸುದ್ದಿ ಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮಾಡಿರುವ ಪೋಸ್ಟ್ ಗಮನ ಸೆಳೆದಿದ್ದು, ಗಂಗೂಲಿಗೆ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗುವುದು ಇಷ್ಟವಿಲ್ಲ ಎಂಬುದನ್ನು ಈ ಪೋಸ್ಟ್ ಮುಖಾಂತರ ಹೇಳುತ್ತಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಸೌರವ್ ಗಂಗೂಲಿ ಪೋಸ್ಟ್‌ನಲ್ಲಿ ಏನಿದೆ?

ಸೌರವ್ ಗಂಗೂಲಿ ಇಂದು ಅಂದರೆ ಮೇ 30 ರಂದು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಯ್ಕೆಯ ಬಗ್ಗೆ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ‘ಆಟಗಾರನ ಜೀವನದಲ್ಲಿ ಕೋಚ್‌ನ ಪ್ರಾಮುಖ್ಯತೆ ಬಹಳ ಮುಖ್ಯ. ತರಬೇತುದಾರನ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಯಾವುದೇ ಆಟಗಾರನ ವೃತ್ತಿಜೀವನವನ್ನು ರೂಪಿಸುತ್ತದೆ. ಮುಖ್ಯ ಕೋಚ್ ಮೈದಾನದಿಂದ ದೂರ ಉಳಿದಿದ್ದರೂ, ಅವರ ಕೊಡುಗೆ ಮೈದಾನದೊಳಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್‌ನನ್ನೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು’ ಎಂದು ಬರೆದುಕೊಂಡಿದ್ದಾರೆ. ಇದೀಗ ಗಂಗೂಲಿ ಅವರ ಈ ಪೋಸ್ಟ್ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಮಾಡಬಾರದು ಎಂಬುದನ್ನು ಸೂಚಿಸುತ್ತದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Thu, 30 May 24

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us