ಅರ್ಷದೀಪ್ ಮಾಡಿದ ಕೆಲಸಕ್ಕೆ ಕೆರಳಿದ ಮಿಚೆಲ್..! ಜಗಳ ತಪ್ಪಿಸಿದ ಸೂರ್ಯ; ವಿಡಿಯೋ ವೈರಲ್

T20 World Cup Final: ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಮತ್ತು ಭಾರತದ ಅರ್ಷದೀಪ್ ಸಿಂಗ್ ನಡುವೆ ಜಗಳ ನಡೆದಿದೆ. ಜಂಟಲ್‌ಮ್ಯಾನ್ ತಂಡವೆಂದು ಹೆಸರಾದ ಕಿವೀಸ್ ಆಟಗಾರನ ಆಕ್ರೋಶ ಅಚ್ಚರಿ ಮೂಡಿಸಿದೆ. ಚೆಂಡನ್ನು ರಭಸವಾಗಿ ಎಸೆದ ಅರ್ಷದೀಪ್‌ರಿಂದ ಮಿಚೆಲ್‌ಗೆ ಬಡಿದಾಗ ಈ ಜಗಳ ಶುರುವಾಯಿತು. ನಾಯಕ ಸೂರ್ಯಕುಮಾರ್ ಮಧ್ಯಪ್ರವೇಶಿಸಿ, ಅಂಪೈರ್ ಸಲಹೆ ಬಳಿಕ ಅರ್ಷದೀಪ್ ಕ್ಷಮೆಯಾಚಿಸಿದರು. ಈ ಘಟನೆ ವಿಡಿಯೋ ವೈರಲ್ ಆಗಿದೆ.

ಅರ್ಷದೀಪ್ ಮಾಡಿದ ಕೆಲಸಕ್ಕೆ ಕೆರಳಿದ ಮಿಚೆಲ್..! ಜಗಳ ತಪ್ಪಿಸಿದ ಸೂರ್ಯ; ವಿಡಿಯೋ ವೈರಲ್
Arshdeep, Mitchell

Updated on: Mar 09, 2026 | 7:03 PM

ಕ್ರಿಕೆಟ್ ಲೋಕದ ಅತ್ಯಂತ ಜಂಟಲ್‌ಮ್ಯಾನ್ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಕಿವೀಸ್ ಆಟಗಾರರು ಕ್ರಿಕೆಟ್ ನಿಯಮಗಳನ್ನು ಮುರಿಯುವುದಾಗಲ್ಲಿ, ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸುವುದಾಗಲಿ, ಎದುರಾಳಿ ತಂಡದ ಆಟಗಾರರೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ನಾವು ನೋಡುವುದು ತೀರ ವಿರಳ. ಹೀಗಾಗಿ ಇಡೀ ವಿಶ್ವ ಕ್ರಿಕೆಟ್​ ನ್ಯೂಜಿಲೆಂಡ್ ತಂಡಕ್ಕೆ ಸಲಾಂ ಹೊಡೆಯುತ್ತದೆ. ಅಂತಹದಲ್ಲಿ ಕಿವೀಸ್ ತಂಡದ ಆಟಗಾರನೊಬ್ಬ ಲೈವ್ ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡು ಎದುರಾಳಿ ತಂಡದ ಆಟಗಾರನೊಂದಿಗೆ ವಾಗ್ವಾದಕ್ಕಿಳಿದ ಘಟನೆಯೊಂದು ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಡೆದಿದೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್, ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮೇಲೆ ಗರಂ ಆಗಿ ಜಗಳಕ್ಕಿಳಿದಿದ್ದಾರೆ. ಆದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ನಾಯಕ ಸೂರ್ಯ, ಮಿಚೆಲ್​ರನ್ನು ಸಮಾಧಾನ ಪಡಿಸಿ ಆಟವನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಅಂಪೈರ್, ಅರ್ಷದೀಪ್​ಗೆ ಸಿಂಗ್ ಕಿವಿ ಮಾತು ಹೇಳಿ ಮಿಚೆಲ್ ಬಳಿ ಕ್ಷಮೆಯಾಚಿಸಿದ್ದಾರೆ.

ಮಿಚೆಲ್​ನ ಕೆರಳಿಸಿದ ಅರ್ಷದೀಪ್

ವಾಸ್ತವವಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಮಿಚೆಲ್, ಅರ್ಷದೀಪ್ ಸಿಂಗ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಎರಡು ಸಿಕ್ಸರ್‌ಗಳನ್ನು ಹೊಡೆಸಿಕೊಂಡ ನಂತರ ಅರ್ಷದೀಪ್ ಕೊಂಚ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿದರು. ಅರ್ಷದೀಪ್ ಅವರ ಐದನೇ ಎಸೆತದಲ್ಲಿ, ಡ್ಯಾರಿಲ್ ಮಿಚೆಲ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅರ್ಷದೀಪ್‌ಗೆ ಹೋಯಿತು. ನಂತರ ಅರ್ಷದೀಪ್ ಚೆಂಡನ್ನು ಡ್ಯಾರಿಲ್ ಮಿಚೆಲ್ ಕಡೆಗೆ ಎಸೆದರು. ಚೆಂಡು ರಬಸವಾಗಿ ಹೋಗಿ ಮಿಚೆಲ್​ಗೆ ಬಡಿಯಿತು.

ಇದರಿಂದ ತುಂಬಾ ಕೋಪಗೊಂಡ ಮಿಚೆಲ್ ಜೋರಾಗಿ ಏನನ್ನೋ ಹೇಳುತ್ತಾ ಅರ್ಷದೀಪ್ ಬಳಿಕ ಬರಲು ಪ್ರಾರಂಭಿಸಿದರು. ಆದರೆ ಅರ್ಷದೀಪ್ ತಾನು ಎಸಗಿದ ಕೃತ್ಯಕ್ಕೆ ಮಿಚೆಲ್ ಬಳಿ ಕ್ಷಮೆಯನ್ನು ಕೇಳದೆ ಮತ್ತೆ ಬೌಲಿಂಗ್ ಮಾಡುವತ್ತ ಗಮನ ಹರಿಸಿದರು. ಇತ್ತ ಮಿಚೆಲ್ ಆಕ್ರೋಶವನ್ನು ಗಮನಿಸಿದ ಸೂರ್ಯಕುಮಾರ್ ಯಾದವ್, ಅವರ ಬಳಿಗೆ ಬಂದು ಸಾಂತ್ವನ ಹೇಳಲು ಪ್ರಯತ್ನಿಸಿದರು. ಹಾಗೆಯೇ ಅಂಪೈರ್, ಅರ್ಷದೀಪ್ ಅವರನ್ನು ಕರೆದು ಹಾಗೆ ಮಾಡದಂತೆ ಸಲಹೆ ನೀಡಿದರು. ಕೊನೆಗೆ ಅರ್ಷದೀಪ್ ತನ್ನ ತಪ್ಪನ್ನು ಒಪ್ಪಿಕೊಂಡು ಮಿಚೆಲ್ ಬಳಿ ಕ್ಷಮೆಯಾಚಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us