ತೂಫಾನ್ ಸೆಂಚುರಿ… ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ ಶುರು!

Vaibhav Sooryavanshi: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟರೆ, ಅವರ ತಮ್ಮ ಇದೀಗ ಅಬ್ಬರ ಶುರು ಮಾಡಿದ್ದಾರೆ. ಅದು ಸಹ ಹತ್ತನೇ ವಯಸ್ಸಿನಲ್ಲೇ ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಯೊಂದಿಗೆ ಆಶೀರ್ವಾದ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ.

ತೂಫಾನ್ ಸೆಂಚುರಿ... ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ ಶುರು!
Aashirwad Sooryavanshi
Image Credit source: Vaibhav IG

Updated on: Jun 13, 2026 | 2:29 PM

ಪ್ರತಿಭೆ ಎಂಬುದು ರಕ್ತದಲ್ಲೇ ಹರಿದುಬರುತ್ತದೆ ಎಂಬುದಕ್ಕೆ ಸೂರ್ಯವಂಶಿ ಕುಟುಂಬವೇ ಸಾಕ್ಷಿ. ಅಣ್ಣ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಭಾರತ ತಂಡಕ್ಕೆ ಆಯ್ಕೆಯಾಗಿದ್ದರೆ, ಅತ್ತ 10 ವರ್ಷದ ತಮ್ಮ ಆಶೀರ್ವಾದ್ ಸೂರ್ಯವಂಶಿ ಬ್ಯಾಟ್ ಹಿಡಿದು ಅಬ್ಬರಿಸಲಾರಂಭಿಸಿದ್ದಾನೆ. ಅದು ಸಹ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

87 ಎಸೆತಗಳಲ್ಲಿ 103 ರನ್!

ಬಿಹಾರದ ಸಮಷ್ಟಿಪುರದ ‘ಕ್ರಿಕೆಟ್ ಅಕಾಡೆಮಿ ತಾಜ್‌ಪುರ್’ ತಂಡದ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಬಲಗೈ ಬ್ಯಾಟರ್ ಆಶೀರ್ವಾದ್ ಸೂರ್ಯವಂಶಿ , ಎದುರಾಳಿ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದಾರೆ.

ಕೇವಲ 87 ಎಸೆತಗಳನ್ನು ಎದುರಿಸಿದ ಆಶೀರ್ವಾದ್ 20 ಫೋರ್​ ಹಾಗೂ 1 ಸಿಕ್ಸರ್ ನೆರವಿನೊಂದಿಗೆ 103 ರನ್ ಸಿಡಿಸಿದ್ದಾರೆ. ಅಂದರೆ, ಕೇವಲ ಬೌಂಡರಿಗಳ ಮೂಲಕವೇ 86 ರನ್ ಕಲೆಹಾಕಿದ್ದು ಇವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಸಾಕ್ಷಿಯಾಗಿದೆ.

ಆಶೀರ್ವಾದ್ ಅವರ ಈ ಸ್ಫೋಟಕ ಇನಿಂಗ್ಸ್ ನೆರವಿನಿಂದ ‘ಕ್ರಿಕೆಟ್ ಅಕಾಡೆಮಿ ತಾಜ್‌ಪುರ್’ ತಂಡ 29.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು.

ಅಣ್ಣನಿಂದ ಜೈಕಾರ, ತಂದೆಯ ಹೆಮ್ಮೆ:

ಪ್ರಸ್ತುತ ಭಾರತ ‘ಎ’ ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿರುವ ಹಿರಿಯ ಸಹೋದರ ವೈಭವ್ ಸೂರ್ಯವಂಶಿ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪಂದ್ಯದ ಸ್ಕೋರ್ ಕಾರ್ಡ್ ಹಂಚಿಕೊಂಡು “ಕಂಗ್ರಾಜುಲೇಷನ್ಸ್ ಆಶೀರ್ವಾದ್” ಎಂದು ಸಹೋದರನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಇಬ್ಬರು ಗಂಡು ಮಕ್ಕಳ ಯಶಸ್ಸಿನ ಹಿಂದೆ ಶ್ರಮಿಸಿರುವ ತಂದೆ ಹಾಗೂ ಕೋಚ್ ಸಂಜೀವ್ ಸೂರ್ಯವಂಶಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

“ಸದ್ಯ ನನ್ನ ಸಂಪೂರ್ಣ ಗಮನ ಹಿರಿಯ ಮಗ ವೈಭವ್ ಮೇಲಿದೆ. ಆದರೆ ಆಶೀರ್ವಾದ್ ಕೂಡ ಅತ್ಯಂತ ಕಠಿಣ ಪರಿಶ್ರಮ ಪಡುತ್ತಿದ್ದಾನೆ. ಮುಂದಿನ ಎರಡು ವರ್ಷಗಳಲ್ಲಿ ಆತನನ್ನು ಉನ್ನತ ಮಟ್ಟದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಿದ್ಧಪಡಿಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಜೋರ್ಡನ್ ಕಾಕ್ಸ್​

ಕ್ರಿಕೆಟ್ ಜಗತ್ತಿನ ಹೊಸ ಆಶಾಕಿರಣಗಳು:

ಐಪಿಎಲ್ 2026 ರಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದು, ಸದ್ಯ ಹಿರಿಯರ ಭಾರತ ತಂಡಕ್ಕೂ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಅವರ ಹಾದಿಯಲ್ಲೇ ಈಗ ಆಶೀರ್ವಾದ್ ಕೂಡ ಹೆಜ್ಜೆ ಇಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸೂರ್ಯವಂಶಿ ಸಹೋದರರ ಈ ಜೋಡಿ ಮುಂಬರುವ ದಿನಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us