80ನೇ ವಯಸ್ಸಿನಲ್ಲಿ 161 ಕಿ.ಮೀ ಪ್ರಯಾಣ ಮಾಡಿ ವೈಭವ್​ನನ್ನು ಭೇಟಿಯಾದ ದಿಗ್ಗಜ ಕ್ರಿಕೆಟಿಗ

Vaibhav Sooryavanshi Meets Anura Tennekoon: ಭಾರತ ಎ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅವರ ಆಟ ಮತ್ತು ಹೆಚ್ಚುತ್ತಿರುವ ಅಭಿಮಾನಿಗಳ ಕುರಿತಾದ ಸುದ್ದಿ ವೈರಲ್ ಆಗಿದೆ. ಶ್ರೀಲಂಕಾದ ಮಾಜಿ ನಾಯಕ ಅನುರ ತೆನ್ನೆಕುನ್, 161 ಕಿ.ಮೀ. ಪ್ರಯಾಣಿಸಿ ವೈಭವ್‌ರನ್ನು ಭೇಟಿಯಾಗಿ ಆಶೀರ್ವದಿಸಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಪಂದ್ಯದಲ್ಲಿ ವೈಭವ್ 21 ರನ್ ಗಳಿಸಿದರು, ಆದರೆ ತಂಡ ಸೂಪರ್ ಓವರ್‌ನಲ್ಲಿ ಸೋತಿತು.

80ನೇ ವಯಸ್ಸಿನಲ್ಲಿ 161 ಕಿ.ಮೀ ಪ್ರಯಾಣ ಮಾಡಿ ವೈಭವ್​ನನ್ನು ಭೇಟಿಯಾದ ದಿಗ್ಗಜ ಕ್ರಿಕೆಟಿಗ
Vaibhav Sooryavanshi

Updated on: Jun 16, 2026 | 5:53 PM

ಭಾರತ ಎ ತಂಡ ತ್ರಿಕೋನ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದೆ. ಈ ಪ್ರವಾಸಕ್ಕೆ ಭಾರತ ಎ (India A) ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಸಹ ಆಯ್ಕೆ ಮಾಡಲಾಗಿದೆ. ಇದುವರೆಗೆ ಈ ಪ್ರವಾಸದಲ್ಲಿ ವೈಭವ್ ಅವರ ಬ್ಯಾಟಿಂಗ್‌ ಹೆಚ್ಚು ಪರಿಣಾಮಕಾರಿಯಾಗಿರದಿದ್ದರೂ ಅವರ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ವೈಭವ್​ಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಈ ಅಭಿಮಾನಿಗಳ ಬಳಗದಲ್ಲಿ ಮಾಜಿ ಕ್ರಿಕೆಟಿಗರು, ದಿಗ್ಗಜ ಕ್ರಿಕೆಟಿಗರು ಸೇರಿದ್ದಾರೆ. ಅದರಂತೆ ಶ್ರೀಲಂಕಾದ ಮಾಜಿ ದಿಗ್ಜಜ ನಾಯಕ ಅನುರ ತೆನ್ನೆಕುನ್, ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಲು ಕ್ರೀಡಾಂಗಣಕ್ಕೆ ಬಂದಿದ್ದು, ಇವರಿಬ್ಬರ ಸಮಾಗಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಂಕಾದ ದಿಗ್ಗಜ ಕ್ರಿಕೆಟಿಗನನ್ನು ಭೇಟಿಯಾದ ವೈಭವ್

ವಾಸ್ತವವಾಗಿ ಜೂನ್ 15 ರಂದು ಡಂಬುಲ್ಲಾದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಸೋತಿತು. ಇದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಶ್ರೀಲಂಕಾ ಎ ತಂಡದ ಆಟಗಾರರ ಜೊತೆಗೆ ಮೈದಾನದಲ್ಲಿ ಜಗಳ ಮಾಡಿಕೊಂಡ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಜೊತೆಗೆ ಇನ್ನೊಂದು ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ವೈಭವ್ ಸೂರ್ಯವಂಶಿ, ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ಮೊದಲ ನಾಯಕ ಅನುರ ತೆನ್ನೆಕುನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರ ಕಾಲು ಮುಟ್ಟಿ ಆರ್ಶೀವಾದ ಪಡೆದಿರುವುದನ್ನು ಕಾಣಬಹುದಾಗಿದೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, 80 ವರ್ಷ ವಯಸ್ಸಿನ ಅನುರ ತೆನ್ನೆಕುನ್ ಅವರು ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಲು ಕೊಲಂಬೊದಿಂದ ಡಂಬುಲ್ಲಾಗೆ 161 ಕಿಲೋಮೀಟರ್ ಪ್ರಯಾಣಿಸಿದ್ದಾರೆ ಎಂಬುದು. ಪಂದ್ಯದ ನಂತರ ವೈಭವ್ ಡ್ರೆಸ್ಸಿಂಗ್ ಕೋಣೆಯಿಂದ ಹೊರಬಂದು, ಅನುರ ತೆನ್ನೆಕುನ್ ಅವರನ್ನು ಭೇಟಿ ಮಾಡಿದ್ದಾರೆ. ಅನುರ ಅವರೊಂದಿಗೆ ಕೆಲ ಸಮಯ ಮಾತನಾಡಿದ ವೈಭವ್, ಆ ಬಳಿಕ ಅವರ ಪಾದಗಳನ್ನು ಮುಟ್ಟಿ ಆರ್ಶೀವಾದ ಪಡೆದಿದ್ದಾರೆ.

ನಾನು ತುಂಬಾ ಪ್ರಭಾವಿತನಾಗಿದ್ದೆ

ಇದೇ ವೇಳೆ ವೈಭವ್​ಗೆ ಕಿವಿ ಮಾತು ಹೇಳಿದ ಅನುರ ತೆನ್ನೆಕೂನ್, ನಿನ್ನ ಆಟದ ಮೇಲೆ ಗಮನಹರಿಸು ಮತ್ತು ಹೊರಗಿನ ಅಂಶಗಳನ್ನು ನಿರ್ಲಕ್ಷಿಸು. ದುರದೃಷ್ಟವಶಾತ್, ಇಂದಿನ ಪಂದ್ಯದಲ್ಲಿ ನೀವು ನಿಮ್ಮ ಲಯವನ್ನು ಕಂಡುಕೊಳ್ಳಲಾಗಲಿಲ್ಲ. ಆದರೆ ಇದು ಆಟದ ಭಾಗವಾಗಿದ್ದು, ಪ್ರತಿದಿನ ಲಯದಲ್ಲಿರಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ವೈಭವ್ ಸೂರ್ಯವಂಶಿ ಮೌನವಾಗಿ ತಲೆಯಾಡಿಸಿದ್ದಾರೆ. ಆ ಬಳಿಕ ಮಾತನಾಡಿರುವ ಅನುರ, ‘ಐಪಿಎಲ್‌ನಲ್ಲಿ ವೈಭವ್ ಅವರ ಬ್ಯಾಟಿಂಗ್‌ ನೋಡಿ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರು ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ರೀತಿ ನಿಜಕ್ಕೂ ಅದ್ಭುತವಾಗಿದೆ. ಅವರು ಇದೇ ರೀತಿ ಆಡುವುದನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ವೈಭವ್ ಮಾತ್ರ ಅಲ್ಲ, ನಮ್ ಹುಡುಗ್ರು ಆಡ್ತಾರೆ; ಯೂನಿವರ್ಸಲ್ ಬೇಬಿ ಬಾಸ್ ಬಗ್ಗೆ ದ್ರಾವಿಡ್ ಮಾತು

ಪಂದ್ಯ ಹೀಗಿತ್ತು

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಜೂನ್ 15 ರಂದು ಶ್ರೀಲಂಕಾ ಎ ವಿರುದ್ಧ ನಡೆದ ಈ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 21 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ 265 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಶ್ರೀಲಂಕಾ ಎ ಕೂಡ 50 ಓವರ್‌ಗಳಲ್ಲಿ 265 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈನಲ್ಲಿ ಕೊನೆಗೊಂಡ ನಂತರ, ಸೂಪರ್ ಓವರ್ ಆಡಲಾಯಿತು, ಅದರಲ್ಲಿ ಭಾರತ ಎ ತಂಡ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Tue, 16 June 26

Follow Us