ವೆಂಕಿಯ ಬೆಂಕಿ ಸೆಲೆಬ್ರೇಷನ್​ ಅರ್ಥವೇನು ಗೊತ್ತಾ?

IPL 2026 RCB vs PBKS: ಐಪಿಎಲ್​ನ 61ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 222 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 199 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್​ಸಿಬಿ ತಂಡ 23 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ವೆಂಕಿಯ ಬೆಂಕಿ ಸೆಲೆಬ್ರೇಷನ್​ ಅರ್ಥವೇನು ಗೊತ್ತಾ?
Venkatesh Iyer

Updated on: May 18, 2026 | 8:09 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಅರ್ಧಶತಕ ಪೂರೈಸುತ್ತಿದ್ದಂತೆ ಅಯ್ಯರ್ ತಮ್ಮ ಕೈಗಳನ್ನು ಮೇಲೆಕ್ಕೆತ್ತುವ ಮೂಲಕ ವಿಶೇಷ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದರು.

ಇದರ ಬೆನ್ನಲ್ಲೇ ಈ ಸಂಭ್ರಮಕ್ಕೆ ಕಾರಣವೇನು? ಇದರ ಅರ್ಥವೇನು? ಎಂಬ ಗೂಗಲ್ ಹುಡುಕಾಟಗಳು ಶುರುವಾಗಿದ್ದವು. ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಇಳಯ ದಳಪತಿ ವಿಜಯ್. ಅಂದರೆ ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ಅವರ ಸ್ಟೈಲ್​ನಲ್ಲಿ ವೆಂಕಿ ಬೆಂಕಿ ಸೆಲೆಬ್ರೇಷನ್ ಮಾಡಿದ್ದರು ಎಂಬುದು.

2017 ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಮೆರ್ಸಲ್ ಚಿತ್ರದಲ್ಲಿ ನಟ ವಿಜಯ್ ಇದೇ ಶೈಲಿಯಲ್ಲಿ ಪೋಸ್ ನೀಡಿ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಅವರು ರಾಜಕೀಯಕ್ಕೆ ಇಳಿದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಇತ್ತ ತಮಿಳು ಚಿತ್ರಪ್ರೇಮಿಯಾಗಿರುವ ವೆಂಕಟೇಶ್ ಅಯ್ಯರ್, ತನ್ನ ನೆಚ್ಚಿನ ನಟನ ಐಕಾನಿಕ್ ಪೋಸ್ ಅನ್ನು ಮರುಸೃಷ್ಟಿಸಿ ಅರ್ಧಶತಕವನ್ನು ಸಂಭ್ರಮಿಸಿದ್ದಾರೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಜಯ್ ಅಭಿಮಾನಿಗಳು ಹಾಗೂ ಆರ್​ಸಿಬಿ ಫ್ಯಾನ್ಸ್​​ಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಸೆಲೆಬ್ರೇಷನ್ ಅರ್ಥ “ಆಶ್ಚರ್ಯಚಕಿತಗೊಳಿಸುವುದು” ಎನ್ನಲಾಗಿದೆ. ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ವೆಂಕಿ ಸ್ಫೋಟಕ ಇನಿಂಗ್ಸ್​ನೊಂದಿಗೆ ಎಲ್ಲರನ್ನು ಆಶ್ಚರ್ಯಗೊಳಿಸಿದ್ದು ಸುಳ್ಳಲ್ಲ.

ಪಂದ್ಯದ ಹೈಲೈಟ್ಸ್ ಮತ್ತು ಅಯ್ಯರ್  ಅಬ್ಬರ:

  • ಸ್ಫೋಟಕ ಇನ್ನಿಂಗ್ಸ್: ಗಾಯಗೊಂಡ ರಜತ್ ಪಾಟಿದಾರ್ ಬದಲಿಗೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್, ಪಂಜಾಬ್ ಕಿಂಗ್ಸ್​ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರು ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಚಚ್ಚಿದರು.
  • ಆರ್‌ಸಿಬಿ ಭರ್ಜರಿ ಜಯ: ಅಯ್ಯರ್ ಅವರ ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್​ ತಂಡ 23 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
  • ಪ್ಲೇಆಫ್‌ಗೆ ಲಗ್ಗೆ: ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಧಿಕೃತವಾಗಿ ಪ್ಲೇಆಫ್​ಗೆ ಪ್ರವೇಶಿಸಿದೆ.

ಸದ್ಯ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಗೆದ್ದು ಆರ್​ಸಿಬಿ 20 ಅಂಕಗಳನ್ನು ಪಡೆಯಲಿದೆಯಾ ಕಾದು ನೋಡಬೇಕಿದೆ.

 

Follow Us