Vijay Hazare Trophy: ರುತುರಾಜ್ ಶತಕ ವ್ಯರ್ಥ; ಧೋನಿ ದಾಖಲೆ ಮುರಿದ ವಿಷ್ಣು-ಜೋಸೆಫ್! ಕೇರಳಕ್ಕೆ ಜಯ
Vijay Hazare Trophy: ವಿಷ್ಣು ವಿನೋದ್ ಮತ್ತು ಸಿಜೋಮನ್ ಜೋಸೆಫ್ ಏಳನೇ ವಿಕೆಟ್ಗೆ ಅಜೇಯ 174 ರನ್ಗಳ ಜೊತೆಯಾಟ ನಡೆಸಿ ಒಂದು ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು. ಈ ವೇಳೆ ವಿಷ್ಣು 100 ಮತ್ತು ಜೋಸೆಫ್ 71 ರನ್ ಗಳಿಸಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಹಾಗೂ ಮಹಾರಾಷ್ಟ್ರ ತಂಡದ ನಾಯಕ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್ ಅವರ ಮೂರನೇ ಶತಕ ವ್ಯರ್ಥವಾಯಿತು. ಕೇರಳದ ವಿಷ್ಣು ವಿನೋದ್ ಮತ್ತು ಸಿಜೋಮನ್ ಜೋಸೆಫ್ ಅವರ ದಾಖಲೆಯ ಜೊತೆಯಾಟದ ಆಧಾರದ ಮೇಲೆ ಕೇರಳ ನಾಲ್ಕು ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಒಂದು ಹಂತದಲ್ಲಿ ಮಹಾರಾಷ್ಟ್ರದ ಗೆಲುವು ಬಹುತೇಕ ಖಚಿತ ಎನಿಸಿತು ಆದರೆ ವಿನೋದ್ ಮತ್ತು ಜೋಸೆಫ್ ಪಂದ್ಯಕ್ಕೆ ತಿರುವು ನೀಡಿದರು. ಇದರ ಜೊತೆಗೆ ಇವರಿಬ್ಬರ ಜೊತೆಯಾಟ ಮಹೇಂದ್ರ ಸಿಂಗ್ ಧೋನಿ ಅವರ ಹಳೆಯ ದಾಖಲೆಯನ್ನು ಮುರಿದಿದೆ.
ಟಾಸ್ ಸೋತ ಕೇರಳ ತಂಡ ಮಹಾರಾಷ್ಟ್ರವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ನಾಯಕ ರಿತುರಾಜ್ ಗಾಯಕ್ವಾಡ್ ಅವರ 124 ಮತ್ತು ರಾಹುಲ್ ತ್ರಿಪಾಠಿ ಅವರ 99 ರನ್ಗಳ ಹಿನ್ನಲೆಯಲ್ಲಿ ಮಹಾರಾಷ್ಟ್ರ 50 ಓವರ್ಗಳಲ್ಲಿ 291 ರನ್ ಗಳಿಸಿತು. ಕೇರಳ ಪರ ನಿದ್ಧೇಶ್ ಐದು ವಿಕೆಟ್ ಪಡೆದರು. ನಾಯಕ ಗಾಯಕ್ವಾಡ್ ಟೂರ್ನಿಯಲ್ಲಿ ಸತತ ಮೂರನೇ ಶತಕ ಸಿಡಿಸಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ಮಹಾರಾಷ್ಟ್ರ ಜಯ ಸಾಧಿಸಿತ್ತು. ಆದರೆ, ಈ ಬಾರಿ ಸೋಲನ್ನು ಎದುರಿಸಬೇಕಾಯಿತು.
ಧೋನಿ ದಾಖಲೆ ಮುರಿದ ವಿಷ್ಣು-ಜೋಸೆಫ್ 292 ರನ್ಗಳ ಗುರಿ ಬೆನ್ನತ್ತಿದ ಕೇರಳಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ರೋಹನ್ ಕುನ್ನುಮ್ಮಲ್ ಮತ್ತು ಮೊಹಮ್ಮದ್ ಅಜರುದ್ದೀನ್ 11 ರನ್ ಗಳಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ (42) ಮತ್ತು ಜಲಜ್ ಸಕ್ಸೇನಾ (44) ಇನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. 26ನೇ ಓವರ್ ವೇಳೆಗೆ ಕೇರಳ ಆರು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತ್ತು. ಆದರೆ, ಇದಾದ ಬಳಿಕ ವಿಷ್ಣು ವಿನೋದ್ ಮತ್ತು ಸಿಜೋಮನ್ ಜೋಸೆಫ್ ಏಳನೇ ವಿಕೆಟ್ಗೆ ಅಜೇಯ 174 ರನ್ಗಳ ಜೊತೆಯಾಟ ನಡೆಸಿ ಒಂದು ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು. ಈ ವೇಳೆ ವಿಷ್ಣು 100 ಮತ್ತು ಜೋಸೆಫ್ 71 ರನ್ ಗಳಿಸಿದರು. ಈ ಜೊತೆಯಾಟದೊಂದಿಗೆ ಇಬ್ಬರೂ ಮಹೇಂದ್ರ ಸಿಂಗ್ ಧೋನಿ ಮತ್ತು ಶಹಬಾಜ್ ನದೀಮ್ ಅವರ ದಾಖಲೆಯನ್ನು ಮುರಿದರು. ಶಹಬಾಜ್ ಮತ್ತು ನದೀಮ್ 2017 ರಲ್ಲಿ ಛತ್ತೀಸ್ಗಢ ವಿರುದ್ಧ 151 ರನ್ಗಳ ಜೊತೆಯಾಟ ಆಡಿದ್ದರು.
ರುತುರಾಜ್ ಗಾಯಕವಾಡ್ ಶತಕ ವ್ಯರ್ಥ ಇದರೊಂದಿಗೆ ರುತುರಾಜ್ ಗಾಯಕ್ವಾಡ್ ಅವರ ಶತಕ ವ್ಯರ್ಥವಾಯಿತು. ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 3 ಶತಕಗಳನ್ನು ಗಳಿಸಿದ್ದಾರೆ. ಮಧ್ಯಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ರುತುರಾಜ್ 112 ಎಸೆತಗಳಲ್ಲಿ 136 ರನ್ ಗಳಿಸಿ ಮಹಾರಾಷ್ಟ್ರಕ್ಕೆ ಜಯ ತಂದುಕೊಟ್ಟಿದ್ದರು. ಛತ್ತೀಸ್ಗಢ ವಿರುದ್ಧದ ಎರಡನೇ ಪಂದ್ಯದಲ್ಲಿ, 276 ರನ್ಗಳ ಗುರಿಯನ್ನು ಬೆನ್ನಟ್ಟಿದ ರುತುರಾಜ್ ಅಜೇಯ 154 ರನ್ ಗಳಿಸಿದರು. ಕೇರಳ ವಿರುದ್ಧ 124 ರನ್ ಗಳಿಸಿದ ಅವರ ಇನ್ನಿಂಗ್ಸ್ನ ಸತತ ಮೂರನೇ ಶತಕವಾಗಿದೆ. ರುತುರಾಜ್ ಇದುವರೆಗೆ ಮೂರು ಇನ್ನಿಂಗ್ಸ್ಗಳಲ್ಲಿ 37 ಬೌಂಡರಿ ಮತ್ತು 12 ಸಿಕ್ಸರ್ಗಳನ್ನು ಹೊಡೆದು 414 ರನ್ ಗಳಿಸಿದ್ದಾರೆ.
Published On - 7:33 pm, Sat, 11 December 21
