
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ರೈಲ್ವೇಸ್ ಮತ್ತು ದೆಹಲಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಕಣಕ್ಕಿಳಿದಿರುವುದರಿಂದ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದಿದ್ದಾರೆ. ಹೀಗೆ ಕಿಂಗ್ ಕೊಹ್ಲಿಯ ಆಟವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳಲ್ಲಿ ಒಬ್ಬರು ಮೈದಾನಕ್ಕೆ ನುಗ್ಗಿದ್ದಾರೆ.
ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯು ನೇರವಾಗಿ ವಿರಾಟ್ ಕೊಹ್ಲಿ ಬಳಿ ಓಡಿ ಬಂದಿದ್ದಾರೆ. ಅಲ್ಲದೆ ಕೊಹ್ಲಿಯ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅಷ್ಟರಲ್ಲಿ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿಗಳು ಯುವಕನನ್ನು ವಶಕ್ಕೆ ಪಡೆದಿದ್ದು, ಈ ಮೂಲಕ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು.
ವಿರಾಟ್ ಕೊಹ್ಲಿಯ ರಣಜಿಯಾಟವನ್ನು ವೀಕ್ಷಿಸಲು ಪ್ರೇಕ್ಷಕರು ಸಾಗರದಂತೆ ಹರಿದು ಬಂದಿದ್ದು, ಹೀಗಾಗಿ ದೆಹಲಿ ಕ್ರಿಕೆಟ್ ಬೋರ್ಡ್ ಹೆಚ್ಚಿನ ಭದ್ರತೆಗಾಗಿ ಅರೆ ಸೇನಾಪಡೆಯನ್ನು ಕರೆಸಿಕೊಂಡಿದೆ. ಈ ಮೂಲಕ ಅಭಿಮಾನಿಗಳು ಮೈದಾನಕ್ಕೆ ನುಗ್ಗದ್ದಂತೆ ಕಟ್ಟೆಚ್ಚರವಹಿಸಲು ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ.
ಏಕೆಂದರೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಪ್ರೇಕ್ಷಕರು ಮೈದಾನಕ್ಕೆ ನುಗ್ಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬೌಂಡರಿ ಲೈನ್ ಬಳಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದ್ದು, ಈ ಮೂಲಕ ಪಂದ್ಯ ಸರಾಗವಾಗಿ ನಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ದೆಹಲಿ ತಂಡದ ನಾಯಕ ಆಯುಷ್ ಬದೋನಿ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿರುವ ರೈಲ್ವೇಸ್ ತಂಡವು 35 ಓವರ್ಗಳ ಮುಕ್ತಾಯದ ವೇಳೆ 5 ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿದೆ.
ದೆಹಲಿ (ಪ್ಲೇಯಿಂಗ್ XI): ಅರ್ಪಿತ್ ರಾಣಾ, ಸನತ್ ಸಾಂಗ್ವಾನ್, ವಿರಾಟ್ ಕೊಹ್ಲಿ, ಯಶ್ ಧುಲ್, ಆಯುಷ್ ಬದೋನಿ (ನಾಯಕ), ಪ್ರಣವ್ ರಾಜುವಂಶಿ (ವಿಕೆಟ್ ಕೀಪರ್), ಸುಮಿತ್ ಮಾಥುರ್, ಶಿವಂ ಶರ್ಮಾ, ನವದೀಪ್ ಸೈನಿ, ಮನಿ ಗ್ರೇವಾಲ್, ಸಿದ್ಧಾಂತ್ ಶರ್ಮಾ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ರೈಲ್ವೇಸ್ (ಪ್ಲೇಯಿಂಗ್ XI): ಅಂಚಿತ್ ಯಾದವ್, ವಿವೇಕ್ ಸಿಂಗ್, ಸೂರಜ್ ಅಹುಜಾ (ನಾಯಕ), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಮೊಹಮ್ಮದ್ ಸೈಫ್, ಭಾರ್ಗವ್ ಮೆರಾಯ್, ಕರ್ಣ್ ಶರ್ಮಾ, ರಾಹುಲ್ ಶರ್ಮಾ, ಹಿಮಾಂಶು ಸಾಂಗ್ವಾನ್, ಅಯಾನ್ ಚೌಧರಿ, ಕುನಾಲ್ ಯಾದವ್.