IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ (67) (Virat Kohli) ಅತ್ಯುತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ರಜತ್ ಪಾಟಿದಾರ್ 64 ರನ್ ಬಾರಿಸಿದರೆ, ಜಿತೇಶ್ ಶರ್ಮಾ 40 ರನ್ ಸಿಡಿಸಿದರು. ಈ ಮೂಲಕ ಆರ್ಸಿಬಿ 20 ಓವರ್ಗಳಲ್ಲಿ 221 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 38 ರನ್ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ರನ್ಗಳಿಸಲು ಪರದಾಡಿದರು. ಅದರಲ್ಲೂ ಸೂರ್ಯಕುಮಾರ್ ನೀಡಿದ ಸುಲಭ ಕ್ಯಾಚ್ಗಳನ್ನು ಆರ್ಸಿಬಿ ಆಟಗಾರರು ಕೈಚೆಲ್ಲಿದರು.
ಸುಯಶ್ ಶರ್ಮಾ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ನೀಡಿದ ಕ್ಯಾಚ್ವೊಂದನ್ನು ಬೌಂಡರಿ ಲೈನ್ನಲ್ಲಿ ಹಿಡಿಯಲು ಕೃನಾಲ್ ಪಾಂಡ್ಯ ವಿಫಲರಾಗಿದ್ದರು. ಈ ಜೀವದಾನದ ಬೆನ್ನಲ್ಲೇ ಮತ್ತೊಂದು ಸುಲಭ ಕ್ಯಾಚ್ವೊಂದನ್ನು ಆರ್ಸಿಬಿ ಆಟಗಾರರು ಕೈ ಬಿಟ್ಟಿದ್ದರು.
ಯಶ್ ದಯಾಳ್ ಎಸೆದ ಮುಂಬೈ ಇನಿಂಗ್ಸ್ನ 12ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು. ಆದರೆ ಚೆಂಡು ಬೌಲರ್ ಬಳಿಯೇ ಗಾಳಿಯಲ್ಲಿ ಚಿಮ್ಮಿತು. ಇತ್ತ ಯಶ್ ದಯಾಳ್ ಕ್ಯಾಚ್ ಹಿಡಿಯಲು ಮುಂದಾದರೆ, ಅತ್ತ ಕಡೆಯಿಂದ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕ್ಯಾಚ್ಗಾಗಿ ಓಡಿ ಬಂದರು.
ಇದನ್ನೂ ಓದಿ: ಒಂದು ಬೌಂಡರಿಗೆ 19 ಎಸೆತಗಳು: ಐಪಿಎಲ್ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಧೋನಿ
ಆದರೆ ಜಿತೇಶ್ ಶರ್ಮಾ ಆಗಮಿಸಿರುವುದನ್ನು ಯಶ್ ದಯಾಳ್ ಗಮನಿಸಿರಲಿಲ್ಲ. ಪರಿಣಾಮ ಇಬ್ಬರು ಡಿಕ್ಕಿಯಾಗಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಇತ್ತ ಸೂರ್ಯಕುಮಾರ್ ಯಾದವ್ ಕ್ಯಾಚ್ ಕೈತಪ್ಪುತ್ತಿದ್ದಂತೆ ವಿರಾಟ್ ಕೊಹ್ಲಿಯ ಸಿಟ್ಟು ನೆತ್ತಿಗೇರಿದೆ. ಅಲ್ಲದೆ ಇದೇ ಕೋಪದಿಂದ ತನ್ನ ಕ್ಯಾಪ್ ಅನ್ನು ನೆಲಕ್ಕೆ ಎಸೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಕೋಪ ತಾಪದ ವಿಡಿಯೋ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಆರ್ಸಿಬಿ ಕೆಲ ಕ್ಯಾಚ್ಗಳನ್ನು ಕೈ ಚೆಲ್ಲಿದರೂ. ಫಿಲ್ ಸಾಲ್ಟ್ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ನಿಬ್ಬೆರಗಾಗಿಸಿದ್ದರು. ಈ ಕ್ಯಾಚ್ ಕೂಡ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಇನ್ನು ಈ ಪಂದ್ಯದಲ್ಲಿ 222 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಅಂತಿಮವಾಗಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 12 ರನ್ಗಳ ಗೆಲುವು ದಾಖಲಿಸಿದೆ.
Published On - 6:55 am, Tue, 8 April 25