Ambati Rayudu: ಯಾವುದೇ ತಂಡ RCB ಹತ್ತಿರಕ್ಕೂ ಬರಲ್ಲ!

IPL 2026 RCB vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಓವರ್​ಗಳಲ್ಲಿ 161 ರನ್​ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Ambati Rayudu: ಯಾವುದೇ ತಂಡ RCB ಹತ್ತಿರಕ್ಕೂ ಬರಲ್ಲ!
Ambati Rayudu
Image Credit source: IPL/Google

Updated on: Jun 02, 2026 | 8:37 AM

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್​ ಪಟ್ಟದೊಂದಿಗೆ ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎನಿಸಿಕೊಂಡಿದೆ. 2025 ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್​ಸಿಬಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತವಾಗಿ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಸಾಧನೆ ಬೆನ್ನಲ್ಲೇ ಆರ್​ಸಿಬಿ ತಂಡವನ್ನು ಅಂಬಾಟಿ ರಾಯುಡು ಹಾಡಿ ಹೊಗಳಿದ್ದಾರೆ.

” ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನವನ್ನು ಪ್ರಶಂಸಿರುವ ಅಂಬಾಟಿ ರಾಯುಡು, ಪ್ರಸ್ತುತ ಐಪಿಎಲ್​ನ ಬಲಿಷ್ಠ ತಂಡ ಎಂದರೆ ಅದು ಆರ್​ಸಿಬಿ. ಐಪಿಎಲ್​ನ ಈ ಯುಗವನ್ನು ಆರ್​ಸಿಬಿ ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ” .

” ಪ್ರಸ್ತುತ ಇರುವ ಆರ್‌ಸಿಬಿ ತಂಡವು ತುಂಬಾ ಬಲಿಷ್ಠವಾಗಿದೆ. ತಂಡದಲ್ಲಿ ಸ್ಫೋಟಕ ದಾಂಡಿಗರ ಬಳಗವೇ ಇದೆ. ಇದರ ಜೊತೆಗೆ ವಿಶ್ವದ ಅತ್ಯುತ್ತಮ ಬೌಲರ್​ಗಳಿದ್ದಾರೆ. ಹೀಗಾಗಿ ಬಲಿಷ್ಠತೆಯ ವಿಷಯದಲ್ಲಿ ಬೇರೆ ಯಾವುದೇ ತಂಡ ಆರ್​​ಸಿಬಿ ಹತ್ತಿರಕ್ಕೂ ಬರಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿಲ್ಲ” ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಅಂದರೆ ಈಗಿರುವ ಆರ್​ಸಿಬಿ ವಿರುದ್ಧ ಗೆಲ್ಲಲು ಇತರೆ ತಂಡಗಳಿಗೆ ಅಂದುಕೊಂಡಷ್ಟು ಸುಲಭವಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಮತ್ತೊಂದು ತಂಡವಿಲ್ಲ. ಇತರೆ 9 ತಂಡಗಳಿಗಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಕ್ಕಾಪಟ್ಟೆ ಬಲಿಷ್ಠವಾಗಿದೆ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆದ್ದಾಗ ಇದೇ ಅಂಬಾಟಿ ರಾಯುಡು ಆರ್​ಸಿಬಿ ತಂಡವನ್ನು ಹೀಯಾಳಿಸಿದ್ದರು.

“ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಅಂಬಾಟಿ ರಾಯುಡು ಆರ್​ಸಿಬಿಯನ್ನು ಲೇವಡಿ ಮಾಡಿದ್ದರು.

ಇದನ್ನೂ ಓದಿ: ಇದು ಅನ್ಯಾಯ… ಫೈನಲ್ ಮ್ಯಾಚ್ ಮುಂದೂಡಬೇಕಿತ್ತು: ಸುನಿಲ್ ಗವಾಸ್ಕರ್

ಆದರೆ ಇದೀಗ ಆರ್​ಸಿಬಿ ತಂಡವು ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲ್ಲುತ್ತಿದ್ದಂತೆ ಅಂಬಾಟಿ ರಾಯುಡು ತಮ್ಮ ಹಳೆಯ ಡೈಲಾಗ್ ಮರೆತಿದ್ದಾರೆ. ಬದಲಾಗಿ ಇದು ಆರ್​ಸಿಬಿ ತಂಡದ ಯುಗ, ಪ್ರಸ್ತುತ ಐಪಿಎಲ್​ನಲ್ಲಿ ಆರ್​ಸಿಬಿಗೆ ಸರಿಸಾಟಿಯಾಗಿ ಯಾವುದೇ ತಂಡವಿಲ್ಲ. ಯಾವುದೇ ತಂಡದ ಬಲಿಷ್ಠತೆ ಅವರ ಹತ್ತಿರಕ್ಕೂ ಬರಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us