Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?

| Updated By: ಝಾಹಿರ್ ಯೂಸುಫ್

Updated on: Jun 11, 2022 | 4:41 PM

Dinesh Karthik: ಹಾರ್ದಿಕ್ ಪಾಂಡ್ಯ ಐದನೇ ಎಸೆತದಲ್ಲಿ ರನ್​ ಓಡದಿರುವುದು ಚರ್ಚೆಗೆ ಕಾರಣವಾಗಿತ್ತು. ಏಕೆಂದರೆ ಐಪಿಎಲ್​ನಲ್ಲಿ ಬೆಸ್ಟ್ ಫಿನಿಶರ್ ಎನಿಸಿಕೊಂಡಿದ್ದ ಡಿಕೆ ಕೂಡ ಅನುಭವಿ ಆಟಗಾರ. ಅದರಲ್ಲೂ ಭರ್ಜರಿ ಫಾರ್ಮ್​ನಲ್ಲಿದ್ದಾರೆ.

Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik, Hardik Pandya, Krunal Pandya
Follow us on

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟಿ20 ಪಂದ್ಯವು ಹಲವು ಕಾರಣಗಳಿಂದ ಎಲ್ಲರ ಗಮನ ಸೆಳೆದಿತ್ತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಅದರಲ್ಲೂ ಆರಂಭಿಕ ಆಟಗಾರ ಇಶಾನ್ ಕಿಶನ್ ಕೇವಲ 48 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್​ನೊಂದಿಗೆ 76 ರನ್​ ಬಾರಿಸಿದ್ದರು. ಇನ್ನು ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರಿಸಿದ್ದರು. ಕೇವಲ 12 ಎಸೆತಗಳನ್ನು ಎದುರಿಸಿದ ಪಾಂಡ್ಯ 3 ಸಿಕ್ಸ್ ಹಾಗೂ 2 ಫೋರ್​ನೊಂದಿಗ31 ರನ್​ ಚಚ್ಚಿದ್ದರು. ಆದರೆ ಕೊನೆಯ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ಏಕೆಂದರೆ ಅನ್ರಿಕ್ ನೋಕಿಯಾ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ರಿಷಭ್ ಪಂತ್ ಔಟ್ ಆಗಿದ್ದರು. ಈ ವೇಳೆ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಎದುರಿಸಿದ 2ನೇ ಎಸೆತದಲ್ಲಿ ರನ್​ಗಳಿಸಲು ಸಾಧ್ಯವಾಗಿಲ್ಲ. ಮೂರನೇ ಎಸೆತದಲ್ಲಿ ಡಿಕೆ 1 ರನ್​ ಓಡಿದರು. ನಾಲ್ಕನೇ ಎಸೆತಕ್ಕೆ ಸ್ಟ್ರೈಕ್​ಗೆ ಬಂದ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ ರನ್​ ಕದಿಯುವ ಅವಕಾಶವಿದ್ದರೂ ಪಾಂಡ್ಯ ರನ್ ಓಡಲು ನಿರಾಕರಿಸಿದರು. ಇತ್ತ ನಾನ್​ ಸ್ಟ್ರೈಕ್​ನಿಂದ ರನ್​ಗಾಗಿ ಮುಂದೆ ಬಂದಿದ್ದ ದಿನೇಶ್ ಕಾರ್ತಿಕ್ ನಿರಾಸೆಯಿಂದ ಹಿಂತಿರುಗಿದರು. ಆದರೆ ಅತ್ತ ಕೊನೆಯ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 2 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಹಾರ್ದಿಕ್ ಪಾಂಡ್ಯ ಐದನೇ ಎಸೆತದಲ್ಲಿ ರನ್​ ಓಡದಿರುವುದು ಚರ್ಚೆಗೆ ಕಾರಣವಾಗಿತ್ತು. ಏಕೆಂದರೆ ಐಪಿಎಲ್​ನಲ್ಲಿ ಬೆಸ್ಟ್ ಫಿನಿಶರ್ ಎನಿಸಿಕೊಂಡಿದ್ದ ಡಿಕೆ ಕೂಡ ಅನುಭವಿ ಆಟಗಾರ. ಅದರಲ್ಲೂ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇದಾಗ್ಯೂ ಹಾರ್ದಿಕ್ ಪಾಂಡ್ಯ ಸ್ಟ್ರೈಕ್​ನಲ್ಲೇ ಉಳಿದುಕೊಂಡಿದ್ದು ದಿನೇಶ್ ಕಾರ್ತಿಕ್​ ಅವರಿಗೆ ಮಾಡಿದ ಅವಮಾನ ಎನ್ನಲಾಗಿತ್ತು. ಇತ್ತ ಗುಜರಾತ್ ಟೈಟಾನ್ಸ್​ ತಂಡ ಕೋಚ್ ಆಶಿಶ್ ನೆಹ್ರಾ ಕೂಡ ಹಾರ್ದಿಕ್ ಪಾಂಡ್ಯ ಅವರ ನಡೆಯನ್ನು ಟೀಕಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಚರ್ಚೆಗಳು ಶುರುವಾಗುತ್ತಿದ್ದಂತೆ, 2019 ರ ಸನ್ನಿವೇಶವೊಂದು ಬೆಳಕಿಗೆ ಬಂದಿದೆ. ಅಂದು ದಿನೇಶ್ ಕಾರ್ತಿಕ್ ಮಾಡಿದ್ದನ್ನೇ ಇದೀಗ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ ಎಂದು ಕೆಲವರು ವಾದಿಸುತ್ತಿದ್ದಾರೆ.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಹೌದು, ಅದು 2019, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಈ ಸರಣಿಯ ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 16 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದದ್ದು ದಿನೇಶ್ ಕಾರ್ತಿಕ್ ಹಾಗೂ ಕೃನಾಲ್ ಪಂಡ್ಯ. ಮೊದಲ ಎರಡು ಎಸೆತಗಳನ್ನು ಎದುರಿಸಿದ ದಿನೇಶ್ ಕಾರ್ತಿಕ್ ಕೇವಲ 2 ರನ್​ ಮಾತ್ರ ಗಳಿಸಿದ್ದರು. ಅಲ್ಲದೆ ಮೂರನೇ ಎಸೆತದಲ್ಲಿ ರನ್ ಓಡುವ ಅವಕಾಶವಿದ್ದರೂ ಸ್ಟ್ರೈಕ್​ನತ್ತ ಓಡಿಬಂದ ಕೃನಾಲ್ ಪಾಂಡ್ಯರನ್ನು ದಿನೇಶ್ ಕಾರ್ತಿಕ್ ಹಿಂದಕ್ಕೆ ಕಳುಹಿಸಿದ್ದರು. ಅಲ್ಲದೆ ಇಡೀ ಓವರ್​ನ 5 ಎಸೆತಗಳನ್ನು ಡಿಕೆ ಎದುರಿಸಿದ್ದರು. ಆದರೆ ಅಂತಿಮವಾಗಿ ಟೀಮ್ ಇಂಡಿಯಾ 4 ರನ್​ಗಳಿಂದ ಸೋಲನುಭವಿಸಿತ್ತು.

2019 ರಲ್ಲಿ ಕೃನಾಲ್ ಪಾಂಡ್ಯ ಜೊತೆ ದಿನೇಶ್ ಕಾರ್ತಿಕ್ ರನ್ ಓಡಲು ನಿರಾಕರಿಸಿದ ದೃಶ್ಯ

ಅಂದು 16 ಎಸೆತಗಳಲ್ಲಿ 4 ಸಿಕ್ಸ್​ನೊಂದಿಗೆ ದಿನೇಶ್ ಕಾರ್ತಿಕ್ 33 ರನ್​ ಬಾರಿಸಿದ್ದರೆ, ಮತ್ತೊಂದೆಡೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೃನಾಲ್ ಪಾಂಡ್ಯ ಒತ್ತಡದ ನಡುವೆಯೂ ಕೇವಲ 13 ಎಸೆತಗಳಲ್ಲಿ 2 ಫೋರ್ ಹಾಗೂ 2 ಸಿಕ್ಸ್​ನೊಂದಿಗೆ 26 ರನ್ ಸಿಡಿಸಿದ್ದರು. ಇಲ್ಲಿ ಕೃನಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಕೊನೆಯ ಓವರ್​ನಲ್ಲಿ ದಿನೇಶ್ ಕಾರ್ತಿಕ್ ಸ್ಟ್ರೈಕ್ ನೀಡಲು ಮುಂದಾಗಿರಲಿಲ್ಲ. ಅಲ್ಲದೆ ಅಂತಿಮ ಓವರ್​ನಲ್ಲಿ ದಿನೇಶ್ ಕಾರ್ತಿಕ್ ಅವರ ನಿರ್ಧಾರ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಇದಾಗಿ ಮೂರು ವರ್ಷಗಳ ಬಳಿಕ ಕೊನೆಯ ಓವರ್​ನಲ್ಲಿ ಕೃನಾಲ್ ಸಹೋದರ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯ ರನ್​ ಓಡಲು ನಿರಾಕರಿಸಿ ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಅಂದು ಕೃನಾಲ್ ಪಾಂಡ್ಯಗೆ ಕೊನೆಯ ಓವರ್​ನಲ್ಲಿ ಸ್ಟ್ರೈಕ್ ಲಭಿಸಿ ಪಂದ್ಯವನ್ನು ಗೆಲ್ಲಿಸುವ ಅವಕಾಶವಿತ್ತು. ಆ ಅವಕಾಶ ಕೃನಾಲ್​ಗೆ ಲಭಿಸಿದ್ರೆ ಟೀಮ್ ಇಂಡಿಯಾ ಪರ ಫಿನಿಶರ್ ಆಗಿ ಗುರುತಿಸಿಕೊಳ್ಳುತ್ತಿದ್ದರು. ಹೀಗಾಗಿಯೇ ಇದೀಗ ಹಾರ್ದಿಕ್ ಪಾಂಡ್ಯ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬುದು ಕೆಲವರ ವಾದವಾಗಿದೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:41 pm, Sat, 11 June 22