
ತವರಿನಿಂದ ಹೊರಗೆ ನಡೆದಿದ್ದ ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮಹಿಳಾ ತಂಡ, ತವರಿನಲ್ಲಿ ತನ್ನ ಪ್ರಯಾಣ ಮುಂದುವರೆಸಿದ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದೆ. ಬೆಂಗಳೂರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಆರ್ಸಿಬಿ ಸೋಲಿನ ಆಘಾತ ಎದುರಿಸಿದೆ. ಈ ಎರಡು ಪಂದ್ಯಗಳ ಸೋಲಿಗೆ ಆರ್ಸಿಬಿ ಮಾಡಿಕೊಂಡ ಎಡವಟ್ಟುಗಳೇ ಪ್ರಮುಖ ಕಾರಣವಾಗಿದ್ದವು. ಹೀಗಾಗಿ ಕಳೆದೆರಡು ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿರುವ ಆರ್ಸಿಬಿಗೆ ಇಂದಿನ ಎದುರಾಳಿಯಾಗಿ ಗುಜರಾತ್ ಜೈಂಟ್ಸ್ (Gujarat Giants) ತಂಡ ಮುಂದೆ ನಿಂತಿದೆ. ಒಂದೆಡೆ ಆರ್ಸಿಬಿಗೆ ಮತ್ತೆ ಗೆಲುವಿನ ಲಯಕ್ಕೆ ಮರಳುವ ಇರಾದೆಯಿದ್ದರೆ, ಇನ್ನೊಂದೆಡೆ, ಉದ್ಘಾಟನಾ ಪಂದ್ಯದಲ್ಲಿ ಎದುರಿಸಿದ್ದ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಗುಜರಾತ್ ಕಣಕ್ಕಿಳಿಯಲಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಮೂರನೇ ಪಂದ್ಯವನ್ನಾಡುತ್ತಿರುವ ಹಾಲಿ ಚಾಂಪಿಯನ್ ಆರ್ಸಿಬಿ ಈ ಟೂರ್ನಿಯಲ್ಲಿ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ. ಟೂರ್ನಮೆಂಟ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿದ್ದ ಆರ್ಸಿಬಿ, ಆ ನಂತರ ತನ್ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತ್ತು. ಆದರೆ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಮುಂಬೈ ಮತ್ತು ಯುಪಿ ವಾರಿಯರ್ಸ್ ವಿರುದ್ಧ ತಂಡ ಸೋಲನುಭವಿಸಬೇಕಾಯಿತು.
ಯಪಿ ವಾರಿಯರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ, ಸ್ಮೃತಿ ಮಂಧಾನ ನೇತೃತ್ವದ ತಂಡವು ಎಲಿಸ್ ಪೆರ್ರಿ ಅವರ 90 ರನ್ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 181 ರನ್ಗಳ ಬೃಹತ್ ಗುರಿ ನೀಡಿತು. ಇತ್ತ ಯುಪಿ ವಾರಿಯರ್ಸ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಸ್ಕೋರ್ ಅನ್ನು ಸಮಬಲಗೊಳಿಸಿತು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಯುಪಿ ವಾರಿಯರ್ಸ್, ಆರ್ಸಿಬಿ ತಂಡವನ್ನು ಮಣಿಸಿ ರೋಚಕ ಜಯ ಸಾಧಿಸಿತು.
ಇತ್ತ ಆಶ್ಲೇ ಗಾರ್ಡ್ನರ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆರ್ಸಿಬಿ ವಿರುದ್ಧ ತಮ್ಮ ಟೂರ್ನಮೆಂಟ್ನ ಆರಂಭಿಕ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿಯೂ ಸೋತಿತು. ಇದೀಗ ಆರ್ಸಿಬಿಯನ್ನು ಎರಡನೇ ಬಾರಿಗೆ ಎದುರಿಸುತ್ತಿರುವ ಗುಜರಾತ್ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನಾಡಿರುವ ಗುಜರಾತ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ತನ್ನ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿದ್ದ ಗುಜರಾತ್, ಆ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಬೇಕಾಯಿತು.
ಇದನ್ನೂ ಓದಿ: WPL 2025: ರಣರೋಚಕ ಪಂದ್ಯದಲ್ಲಿ ಆರ್ಸಿಬಿಗೆ ವೀರೋಚಿತ ಸೋಲು
ಹೀಗಾಗಿ ಟೂರ್ನಿಯಲ್ಲಿ ಉಳಿಯಲು ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಸತತ ಎರಡು ಸೋಲುಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿರುವ ಆರ್ಸಿಬಿ, ಈ ಪಂದ್ಯವನ್ನು ಗೆದ್ದು ಮತ್ತೆ ಮೊದಲ ಸ್ಥಾನಕ್ಕೇರುವ ಅವಕಾಶ ಪಡೆದಿದೆ. ಹಾಗೆಯೇ ಸೆಮಿಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಆರ್ಸಿಬಿಗೆ ಈ ಪಂದ್ಯ ಬಹಳ ಮುಖ್ಯವಾಗಿದೆ. ಏಕೆಂದರೆ ಆರ್ಸಿಬಿಯ ಮುಂದಿನ ಮೂರು ಪಂದ್ಯಗಳು ಬಲಿಷ್ಠ ತಂಡಗಳ ವಿರುದ್ಧವಿದೆ. ಹೀಗಾಗಿ ಆರ್ಸಿಬಿ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಇತ್ತ ಗುಜರಾತ್ ಕೂಡ ಸೆಮೀಸ್ ರೇಸ್ನಲ್ಲಿ ಜೀವಂತವಾಗಿರಲು ಇಂದಿನ ಗೆಲುವು ಅತ್ಯವಶ್ಯಕವಾಗಿದೆ.
ಆರ್ಸಿಬಿ: ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ಎಲೈಸ್ ಪೆರ್ರಿ, ರಿಚಾ ಘೋಷ್, ಜಾರ್ಜಿಯಾ ವೇರ್ಹ್ಯಾಮ್, ರೇಣುಕಾ ಸಿಂಗ್, ಏಕ್ತಾ ಬಿಶ್ತ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್-ಹಾಡ್ಜ್, ಹೀದರ್ ಗ್ರಹಾಂ, ಕಿಮ್ ಗಾರ್ತ್, ಚಾರ್ಲಿ ಡೀನ್, ಪ್ರೇಮಾ ರಾವತ್, ಜೋಶಿತಾ ವಿಜೆ, ಜಾಗ್ರವಿ ಪವಾರ್, ರಾಘ್ವಿ ಬಿಶ್ತ್
ಗುಜರಾತ್: ಆಶ್ಲೀ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೋಲ್ವಾರ್ಡ್, ಶಬ್ನಮ್ ಶಕಿಲ್, ತನುಜಾ ಕನ್ವರ್, ಫೋಬೆ ಲಿಚ್ಫೀಲ್ಡ್, ಮೇಘನಾ ಸಿಂಗ್, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಮನ್ನತ್ ಕಶ್ಯಪ್, ಸಯಾಲಿ ಸತ್ಗರೆ, ಸಿಮ್ರಾನ್ ಶೇಖ್, ದೆಯಾಂಡ್ರಾ ಡಾಟಿನ್, ಪ್ರಕಾಶಿಕಾ ನಾಯಕ್, ಡೇನಿಯಲ್ ಗಿಬ್ಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 27 February 25