AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2011ರಲ್ಲಿ ವಿಶ್ವಕಪ್​ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್​ ತೆಂಡೂಲ್ಕರ್

ಇತ್ತೀಚಿಗೆ ಯೂಟ್ಯೂಬ್​ನ ಲೆಜೆಂಡ್ಸ್ ವಿತ್​ ಅನ್​ಅಕ್ಯಾಡೆಮಿ ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಆ ಘಟನೆಯನ್ನು ಮೆಲಕು ಹಾಕಿದ್ದಾರೆ. ತಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ ಯೂಸುಫ್ ಫಠಾಣ್ ಮತ್ತು ಕೊಹ್ಲಿಗೆ ಅವರು, ‘ಹುಷಾರು ಕಣ್ರಯ್ಯ, ಎಲ್ಲಾದರೂ ನನ್ನನ್ನು ಬೀಳಿಸಿಬಿಟ್ಟೀರಾ....’ ಎಂದು ಹೇಳಿದರಂತೆ.

2011ರಲ್ಲಿ ವಿಶ್ವಕಪ್​ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್​ ತೆಂಡೂಲ್ಕರ್
ಪ್ರಾತಿನಿಧಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2021 | 10:07 PM

ಅವತ್ತು ಎಮ್​ ಎಸ್​ ಧೋನಿಯನ್ನು ಹೊಗಳದವರೇ ಇರಲಿಲ್ಲ. ವಿರಾಟ್​ ಕೊಹ್ಲಿ ರೂಪದಲ್ಲಿ ಭಾರತ ಮೂರನೇ ವಿಕೆಟ್​ ಕಳೆದುಕೊಂಡಾಗ ಯುವರಾಜ ಸಿಂಗ್ ಆಡಲು ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಏಪ್ರಿಲ್ 2, 2011 ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ಬ್ಯಾಟ್ ಮಾಡಲು ಬಂದಿದ್ದು ಟೀಮ್ ಇಂಡಿಯಾದ ನಾಯಕ ಮಹೇಂದ್ರಸಿಂಗ್ ಧೋನಿ. ಅದು ವಿಶ್ವಕಪ್ ಫೈನಲ್ ಪಂದ್ಯ, ಭಾರತದೆದುರು 275 ರನ್​ಗಳ ದೊಡ್ಡ ಟಾರ್ಗೆಟ್. ಕೊಹ್ಲಿ ಸೇರಿದಂತೆ, ಭಾರತದ ಅಗ್ರಮಾನ್ಯ ಬ್ಯಾಟ್ಸ್​ಮನ್​ಗಳಾಗಿದ್ದ ವಿರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅದಾಗಲೇ ಪೆವಿಲಿಯನ್​ಗೆ ಮರಳಿದ್ದರು. ಕೊಹ್ಲಿ ಔಟಾದಾಗ ಭಾರತದ ಸ್ಕೋರ್ 22ನೇ ಓವರ್​ನಲ್ಲಿ 114/3. ಅಂದರೆ ಗೆಲ್ಲಲು 28 ಓವರ್​ಗಳಲ್ಲಿ ಇನ್ನೂ 161 ರನ್ ಬೇಕಿತ್ತು. ಆದರೆ, ಯುವಿ ಬದಲು ಧೋನಿ ಕ್ರೀಸಿಗೆ ಬಂದಾಗ ಜನ ಅವರನ್ನು ಬೈದಾಡಿದ್ದು ನಿಜ. ಯಾಕೆಂದರೆ, 2011 ವಿಶ್ವಕಪ್​ನಲ್ಲಿ ಯುವಿ ಭರ್ಜರಿ ಫಾರ್ಮ್​ನಲ್ಲಿದ್ದರು. ಅವರು ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್ ಪ್ರಶಸ್ತಿಗೆ ಪಾತ್ರರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ಧೋನಿ ಬಡ್ತಿ ಪಡೆದುಕೊಂಡು 5 ನೇ ಕ್ರಮಾಂಕದಲ್ಲಿ ಆಡಲು ಬಂದಿದ್ದು ಜನರಲ್ಲಿ ಇರುಸು ಮುರುಸು ಉಂಟು ಮಾಡಿತ್ತು.

ಆದರೆ, ತಾನು ಯುವಿಗಿಂತ ಮೊದಲು ಬ್ಯಾಟ್​ ಮಾಡಲು ಹೋಗಿದ್ದನ್ನು ಧೋನಿ ಒಂದು ಉತ್ಕೃಷ್ಟ ಮತ್ತು ಮ್ಯಾಚ್​ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಸಮರ್ಥಿಸಿಕೊಂಡರು. ಅವರ ಅಜೇಯ 91ರನ್​ಗಳ ಇನ್ನಿಂಗ್ಸ್ ವಿಶ್ವಕಪ್ ಫೈನಲ್​ನಲ್ಲಿ ಬಂದಿರುವ ಸರ್ವಶ್ರೇಷ್ಠ ಇನ್ನಿಂಗ್ಸ್​ಗಳಲ್ಲಿ ಒಂದು. ನುವಾನ ಕುಲಶೇಖರ ಅವರ ಲೆಂಗ್ತ್ ಎಸೆತವನ್ನು ಲಾಂಗಾನ್ ಬೌಂಡರಿ ಮೇಲಿಂದ ಸಿಕ್ಸರ್​ಗೆ ಎತ್ತಿ, ಚೆಂಡು ಹೋಗುತ್ತಿದ್ದ ದಿಕ್ಕನ್ನೇ ನೋಡುತ್ತಾ ಆ ಸನ್ನಿವೇಶವನ್ನು ಅವರು ತಮ್ಮ ಸ್ಮೃತಿಪಟಲದಲ್ಲಿ ಘನೀಭವಿಸಿಕೊಂಡ ದೃಶ್ಯ, ಮೈದಾನದಲ್ಲಿದ್ದ ಸಾವಿರಾರು ಪ್ರೇಕ್ಷಕರ ಮತ್ತು ಮನೆಗಳಲ್ಲಿ ಟಿವಿ ಮುಂದೆ ಕೂತು ಪಂದ್ಯವನ್ನು ವೀಕ್ಷಿಸುತ್ತಿದ್ದ ಕೋಟ್ಯಾಂತರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿದಿದೆ.

ಧೋನಿಯ ನಡೆಯನ್ನು ಟೀಕಿಸುತ್ತಿದ್ದವರೆಲ್ಲ ತಮ್ಮ ವರಸೆ ಬದಲಿಸಿದರು, ‘ಅದು ಧೋನಿಯ ಮಾಸ್ಟರ್​ ಸ್ಟ್ರೋಕ್, ನಾಯಕತ್ವ ಅಂದರೆ ಇದು, ಇನ್ನೊವೇಟಿವ್ ಮತ್ತು ಬ್ರೇವ್……ಅಂತೆಲ್ಲ ಹೊಗಳಲಾರಂಭಿಸಿದರು.

MS Dhoni's hits winning shot in 2011 WC

ಎಮ್​ ಎಸ್​ ಧೋನಿಯ ವಿಶ್ವಕಪ್​ ವಿನ್ನಿಂಗ್ ಶಾಟ್​

ಭಾರತ 28 ವರ್ಷಗಳ ನಂತರ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತ್ತು. ಧೋನಿಯ ಹೊಡೆತದೊಂದಿಗೆ ಭಾರತೀಯರ ಮನಸಿನಲ್ಲಿ ಶಾಶ್ವತವಾಗಿ ಉಳಿದಿರುವ ಮತ್ತೊಂದು ದೃಶ್ಯವೆಂದರೆ, ಟೀಮ್ ಇಂಡಿಯಾದ ಸದಸ್ಯರು ಲೆಜೆಂಡರಿ ತೆಂಡೂಲ್ಕರ್​ ಅವರನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ವಾಂಖೆಡೆ ಮೈದಾನದಲ್ಲಿ ವಿಕ್ಟರಿ ಲ್ಯಾಪ್ ಮಾಡಿದ್ದು. ತೆಂಡೂಲ್ಕರ್ ಮೊಗದಲ್ಲಿ ಧನ್ಯತೆಯ ಭಾವ………ಆನಂದ ಭಾಷ್ಪ ಅವರ ಕಣ್ಣುಗಳಿಂದ ಮಾತ್ರವಲ್ಲ ಆ ದೃಶ್ಯವನ್ನು ನೋಡುತ್ತಿದ್ದವರ ಎಲ್ಲರ ಕಣ್ಣಗಳಿಂದಲೂ ಸುರಿಯುತ್ತಿತ್ತು.

ಇತ್ತೀಚಿಗೆ ಯೂಟ್ಯೂಬ್​ನ ಲೆಜೆಂಡ್ಸ್ ವಿತ್​ ಅನ್​ಅಕ್ಯಾಡೆಮಿ ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಆ ಘಟನೆಯನ್ನು ಮೆಲಕು ಹಾಕಿದ್ದಾರೆ. ತಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ ಯೂಸುಫ್ ಫಠಾಣ್ ಮತ್ತು ಕೊಹ್ಲಿಗೆ ಅವರು, ‘ಹುಷಾರು ಕಣ್ರಯ್ಯ, ಎಲ್ಲಾದರೂ ನನ್ನನ್ನು ಬೀಳಿಸಿಬಿಟ್ಟೀರಾ….’ ಎಂದು ಹೇಳಿದರಂತೆ. ಮುಂದುವರಿದು ಹೇಳಿರುವ ಸಚಿನ್, ‘ಅಂದು ಕೇವಲ ಟೀಮ್ ಇಂಡಿಯಾ ಮಾತ್ರ ವಿಶ್ವಕಪ್​ ಗೆಲ್ಲಲಿಲ್ಲ, ಇಡೀ ಭಾರತ ದೇಶ ಅದನ್ನು ಗೆದ್ದಿತ್ತು. ನಾವೆಲ್ಲ ಸೇರಿ ವಿಶ್ಪಕಪ್​ ಗೆದ್ದಿದ್ದು,’ ಎಂದಿದ್ದಾರೆ.

‘1983ರಲ್ಲಿ ಕಪಿಲ್ ದೇವ್ ಅವರು ವಿಶ್ವಕಪ್ ಎತ್ತಿದ ದೃಶ್ಯ ನನ್ನ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದೆ,’ ಎಂದು ಸಚಿನ್ ಹೇಳಿದ್ದಾರೆ.

‘ಸ್ನೇಹಿತರೊಂದಿಗೆ ಕೂತು ಆ ದೃಶ್ಯವನ್ನು ನೋಡುತ್ತಿದ್ದ ನನಗೆ ಮುಂದೊಂದು ದಿನ ನಾನು ಸಹ ಹಾಗೆ ವಿಶ್ವಕಪ್ ಗೆಲ್ಲಬೇಕು ಹಾಗೂ ಕಪಿಲ್ ಪಾಜಿ ಅವರಂತೆಯೇ ಎತ್ತಿ ಹಿಡಿಯಬೇಕೆನ್ನುವ ಕನಸು ಕಾಣತೊಡಗಿದೆ. ಅವತ್ತೇ ನಾನೊಂದು ಸಂಕಲ್ಪ ಮಾಡಿಕೊಂಡೆ. ಏನೇ ಆಗಲಿ, ನನ್ನ ಕನಸನ್ನು ಬೆನ್ನಟ್ಟಬೇಕು ಮತ್ತು ವಿಶ್ವಕಪ್​ ಗೆದ್ದೇ ತೀರಬೇಕು……’

ಮುಂಬೈನಲ್ಲಿ ಅವತ್ತು ನಡೆದ ಸಂಗತಿ ನಂಬಲಸದಳವಾಗಿತ್ತು. ನನ್ನ ವೃತ್ತಿಬದುಕಿನ ಅತ್ಯುತ್ತಮ ದಿನ ಅದಾಗಿತ್ತು. ಇಡೀ ದೇಶ ಒಂದಾಗಿ ಸಂಭ್ರಮ ಆಚರಿಸುವ ದಿನಗಳು ಎಷ್ಟಿವೆ? ಅವುಗಳ ಸಂಖ್ಯೆ ದೊಡ್ಡದಲ್ಲ,’ ಎಂದು ಸಚಿನ್ ಹೇಳಿದರು.

2011ರ ನಂತರ ಎರಡು ವಿಶ್ವಕಪ್​ಗಳು ನಡೆದಿವೆ; 2015 ಮತ್ತು 2019ರಲ್ಲಿ. ಆದರೆ ಭಾರತಕ್ಕೆ ಕಪ್​ ಗೆಲ್ಲಲಾಗಿಲ್ಲ. 2019ರಲ್ಲಿ ಭಾರತ, ಅದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಇಂಗ್ಲೆಂಡ್​ಗೆ ಸೆಮಿಫೈನಲ್​ನಲ್ಲಿ ಸೋತಿತು. 2015ರ ವಿಶ್ವಕಪ್​ ಅನ್ನು ಆಸ್ಟ್ರೇಲಿಯ ಗೆದ್ದಿತು.

ಭಾರತ ಈಗ ಮತ್ತೊಮ್ಮೆ ವಿಶ್ವ ಚಾಂಪಿಯನ್ಸ್ ಪಟ್ಟಕ್ಕೇರುವ ಹೊಸ್ತಿಲಲ್ಲಿದೆ. ಆದರೆ ಇದು ಸೀಮಿತ ಓವರ್​ಗಳ ವಿಶ್ವಕಪ್ ಅಲ್ಲ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್! ಭಾರತ ಫೈನಲ್ ತಲುಪಿದೆ ಮತ್ತು ಪ್ರಶಸ್ತಿಗಾಗಿ ಅದರ ಎದುರಾಳಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಆಗಿದೆ. ಈ ಪಂದ್ಯ ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ಜೂನ್​ 18ರಿಂದ ನಡೆಯಲಿದೆ. ಏತನ್ಮಧ್ಯೆ, ಭಾರತದ ‘ಬಿ’ ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಸೀಮಿತ ಓವರ್​ಗಳ ಸರಣಿಗಳನ್ನಾಡಲಿದೆ. ಸದರಿ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಇನ್ನೂ ಆಗಿಲ್ಲ.

ಇದನ್ನೂ ಓದಿ: 2011 Cricket World Cup: ಧೋನಿಯ ಆ ಒಂದು ಸಿಕ್ಸರ್​ ವಿಶ್ವಕಪ್ ಗೆಲ್ಲಿಸಲಿಲ್ಲ.. ನನ್ನ ಪ್ರಕಾರ ಯುವಿ ವಿಶ್ವಕಪ್​ನ ನಿಜವಾದ ನಾಯಕ: ಗೌತಮ್ ಗಂಭೀರ್